ಬೆಂಗಳೂರು: ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವು ಮತ್ತು ಘೋರಿ ಸ್ಥಳಾಂತರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ದರ್ಗಾ ತೆರವು ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸೇರಿದಂತೆ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ (MLA Prasad Abbaiah), ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರ ಹಾಕಿದ್ದರು. ಇದೀಗ ಕಾಂಗ್ರೆಸ್ ಮಾಡಿರುವ ಎಲ್ಲಾ ಆರೋಪಗಳಿಗೆ ಬಿಜೆಪಿ (BJP) ತಿರುಗೇಟು ನೀಡಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿನ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ (Hazrath Sayed Mahmood Shah Quadri Dargah) ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿದಿದ್ದೆಲ್ಲವೂ ಜನರನ್ನು ನಂಬಿಸಲು ಆಡುವ “ಪ್ರಜಾಪ್ರಭುತ್ವದ ನಾಟಕ”. ಏಕೆಂದರೆ ಅದೇ 13 ದೇವಸ್ಥಾನಗಳು ಮತ್ತು 1 ಚರ್ಚ್ ಹಾಗೂ 1 ದರ್ಗಾವನ್ನು ತೆರವುಗೊಳಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗುರುತಿಸಿದ್ದರು ಎಂದು ಬಿಜೆಪಿ ಹೇಳಿದೆ.
ಈ ದರ್ಗಾ ಹುಬ್ಬಳ್ಳಿ-ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿತ್ತು. ರಸ್ತೆ ಅಗಲೀಕರಣಕ್ಕೆ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆಯಾಗಿದ್ದೇ ವಿನಾ ಬಸವರಾಜ್ ಬೊಮ್ಮಾಯಿ ಸರ್ಕಾರದ ಆದೇಶದಿಂದಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದೆ.
ಸಿದ್ದರಾಮಯ್ಯರಿಗೆ ಬಿಜೆಪಿ ಪ್ರಶ್ನೆ
ದೇವಸ್ಥಾನಗಳ ತೆರವಾದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದ ಸಿದ್ದರಾಮಯ್ಯ, ದರ್ಗಾ ತೆರವಿನ ಬಗ್ಗೆ ಎಗರಿ ಬೀಳುತ್ತಿರುವುದೇಕೆ? ಮಾತೆತ್ತಿದರೆ ಸಂವಿಧಾನದ ಬಗ್ಗೆ ಪ್ರವಚನ ಕೊಡುವ ಸಿದ್ದರಾಮಯ್ಯನವರು ಈಗ ನ್ಯಾಯಾಲಯದ ಅದೇಶವನ್ನೇಕೆ ಪಾಲಿಸಲು ಜನರಿಗೆ ಹೇಳುತ್ತಿಲ್ಲ ಏಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇದೇನಾ ಇವರ ಜಾತ್ಯಾತೀತತೆ? ಸಂವಿಧಾನ ಪ್ರೇಮ ಎಂದು ಪ್ರಶ್ನಿಸಿರುವ ಬಿಜೆಪಿ ಈ ಸಿದ್ದರಾಮಯ್ಯ ಅಬ್ಬರಿಸಿ ಬೊಬ್ಬಿರಿಯುವುದಕ್ಕೆ ಮತ್ತೊಂದು ಗುಪ್ತ ಕಾರಣವೇ, ಹುಬ್ಬಳ್ಳಿ - ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬಾರದು ಎಂಬ ದುರುದ್ದೇಶ ಎಂದು ಬಿಜೆಪಿ ಆರೋಪ ಮಾಡಿದೆ.
ಅಭಿವೃದ್ಧಿಯತ್ತ ಹುಬ್ಬಳ್ಳಿ-ಧಾರವಾಡ
ಬಸವರಾಜ್ ಬೊಮ್ಮಾಯಿ ಸರ್ಕಾರ #BeyondBengaluru ಉಪಕ್ರಮದ #GlobalInvestorsMeet ವೇಳೆ ಹುಬ್ಬಳ್ಳಿ ಧಾರವಾಡಕ್ಕೆ ಭರಪೂರ ಹೂಡಿಕೆಗಳನ್ನು ತಂದಿದೆ.ಈಗ ಅದಷ್ಟೇ ಅಲ್ಲದೇ ಇನ್ನೇನು ಬರುವ ಮಾರ್ಚಿನಲ್ಲಿ ಬೆಂಗಳೂರು - ಹುಬ್ಬಳ್ಳಿ ನಡುವೆ #VandeBharatExpress ರೈಲು ಸಂಚರಿಸಲಿದೆ.
ಇಷ್ಟೆಲ್ಲ ಅಭಿವೃದ್ಧಿ ಒಂದೇ ಸಲ ಬಿಜೆಪಿ ಸರ್ಕಾರದಿಂದಲೇ ಆಗಿಬಿಟ್ಟರೆ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ ಅಭ್ಯರ್ಥಿಗಳು ಮತಭಿಕ್ಷೆ ಕೇಳಲು ಹೋಗುವುದು ಹೇಳಿ ಎಂದು ಬಿಜೆಪಿ ಲೇವಡಿ ಮಾಡಿದೆ.
ಕಾಂಗ್ರೆಸ್ ಎಂಬ ರಾವಣರಿಗೆ ಜನಮನ್ನಣೆ ಸಿಗುವುದೇ
ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ ಮತ್ತು ಬಡತನದ ಕಾರಣದಿಂದ. ಈಗ ಬಿಜೆಪಿ ಸರ್ಕಾರದಲ್ಲಿ ಕೋಮುವಾದಕ್ಕೂ ಆಸ್ಪದವಿಲ್ಲ. ಬಡತನ ನಿವಾರಣೆ ಕ್ರಮದ ಜತೆಗೆ ಅಭಿವೃದ್ಧಿಯನ್ನೂ ನಮ್ಮ ರಾಜ್ಯ ಕಾಣುತ್ತಿದೆ. ರಾಜ್ಯವೇ ರಾಮರಾಜ್ಯವಾದರೆ, ಕಾಂಗ್ರೆಸ್ ಎಂಬ ರಾವಣರಿಗೆ ಜನಮನ್ನಣೆ ಸಿಗುವುದೇ ಎಂದು ಬಿಜೆಪಿ ಕೇಳಿದೆ.
ಸಮಸ್ಯೆಯನ್ನು ಜೀವಂತವಾಗಿಡಬೇಕು ಹಾಗೂ ಅದನ್ನು ನಿವಾರಿಸುವುದು ಕಾಂಗ್ರಸ್ಸೇ ಎಂಬ ಭ್ರಮೆ ಹುಟ್ಟಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಮೂಲ ಮಂತ್ರ. ಇದಕ್ಕೆ ಸಂವಿಧಾನ, ನ್ಯಾಯಾಲಯವೇ ಅಡ್ಡಬಂದರೂ ಅದನ್ನು ದಾಟಿ ಹೋಗುತ್ತೇವೆ ಎಂಬುದು ಮಾಜಿ ಲಾಯರ್ ಸಿದ್ದರಾಮಯ್ಯನವರ ಮಾತಿನಲ್ಲಿ ಗೋಚರಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: Hubballi Dargah: ತೆರವು ಮಾಡಲಾದ ದರ್ಗಾ ಸ್ಥಳಕ್ಕೆ ಸಿಎಂ ದಿಢೀರ್ ಭೇಟಿ; ರಾಜಕೀಯ ಪಿತೂರಿ ಆರೋಪಕ್ಕೆ ಬೊಮ್ಮಯಿ ಹೇಳಿದ್ದು ಹೀಗೆ
ಕೋಮು ಕಿಡಿ ಹೊತ್ತಿಸಲು ಕಾಂಗ್ರೆಸ್ ಯತ್ನ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡದ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ವಿಚಾರವಾಗಿ ಕೋಮು ಕಿಡಿ ಹೊತ್ತಿಸಲು ಮುಂದಾಗಿದ್ದಾರೆ. ನಾವೇ ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಇವರು, ಅದೇ ಸಂವಿಧಾನದ ಆಶಯದಂತೆ ರೂಪಿತವಾಗಿರುವ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಅಡ್ಡಗಾಲು ಹಾಕುತ್ತಿರುವುದು ದುರಂತ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ