news18-kannada Updated:October 22, 2020, 3:52 PM IST
ಮಕ್ಕಳನ್ನು ಕಾಪಾಡಿದ ತಾಯಿ
ಯಾದಗಿರಿ(ಅ.22): ವರುಣನ ಅಬ್ಬರಕ್ಕೆ ಈಗ ಮನೆಗಳು ಮಳೆ ನಿಂತ ಮೇಲೆ ಕೂಡ ನೆಲಕಚ್ಚುತ್ತಿವೆ.ಮನೆ ಕಳೆದುಕೊಂಡು ಜನರು ಈಗ ಬಿದಿ ಪಾಲಾಗುವಂತಾಗಿದೆ. ವಡಗೇರಾ ಪಟ್ಟಣದಲ್ಲಿ ಮಲ್ಲಪ್ಪನವರ ಮನೆ ಕುಸಿದು ಬಿದ್ದ ಹಿನ್ನಲೆ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಮನೆ ಕುಸಿದು ಬಿದ್ದ ಹಿನ್ನಲೆ ಮಣ್ಣಿನಡಿ ಮೂವರು ಮಕ್ಕಳು ಮಣ್ಣಿನಡಿ ಸಿಲುಕಿ ಸಹಾಯಕ್ಕಾಗಿ ಕೂಗುತ್ತಿದ್ದರು. ಇದನ್ನರಿತ ತಾಯಿ ಚಂದ್ರಮ್ಮ ಮಕ್ಕಳಾದ ಶಿವಮ್ಮ, ನಾಗಮ್ಮ,ಪರಶುರಾಮ ಅವರನ್ನು ರಕ್ಷಿಸಿದ್ದಾಳೆ. ಅದೇ ರೀತಿ ಮಣ್ಣಿನಡಿ ಸಿಲುಕಿದ ಮಲ್ಲಪ್ಪ ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಶಿವಮ್ಮ, ನಾಗಮ್ಮ, ಮಲ್ಲಪ್ಪ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಮಕ್ಕಳು ಹಾಗೂ ಪತಿರಾಯನ ಮಲ್ಲಪ್ಪ ಅವರ ಆರೈಕೆಯನ್ನು ಚಂದ್ರಮ್ಮ ಮಾಡುತ್ತಿದ್ದಾಳೆ. ವಡಗೇರಾ ಊರಲ್ಲಿ ನಾಲ್ಕು ವರ್ಷದ ಪುತ್ರ ಹಾಗೂ 13 ವರ್ಷದ ಎಲ್ಲಮ್ಮ ಈಗ ಇದ್ದಾರೆ. ವಾಸಕ್ಕೆ ಮನೆಯಿಲ್ಲದ್ದೆ ಮಕ್ಕಳು ಬೀದಿಪಾಲಾಗಿದ್ದು ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ತಾಯಿ ಚಂದ್ರಮ್ಮ ಮಾತನಾಡಿ, ಮನೆ ಕುಸಿದ ಹಿನ್ನಲೆ ಮೂವರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಅದೇ ರೀತಿ ಗಂಡನೂ ಸಿಲುಕಿದ್ದನು. ರಾತ್ರಿ ಕತ್ತಲಿತ್ತು, ಬಟ್ಟೆ ಪತ್ತೆ ಹಚ್ಚಿ ಗುರುತಿಸಿ ಮೂವರು ಮಕ್ಕಳನ್ನು ಮಣ್ಣಿನಡಿ ಯಿಂದ ತೆಗೆದಿದ್ದೇನೆ, ನನ್ನ ಗಂಡನನ್ನುಊರಿನವರು ಕಾಪಾಡಿದ್ದಾರೆ. ನಾವು ಈಗ ಬೀದಿ ಪಾಲಾಗಿದ್ದೇವೆ. ನಾವು ಎಲ್ಲಿ ಇರಬೇಕು? ಹೇಗೆ ಮಕ್ಕಳನ್ನು ಕಟ್ಟಿಕೊಂಡು ಬದುಕು ಸಾಗಿಸಬೇಕೆಂದು ಕಣ್ಣೀರು ಹಾಕಿ ನೋವು ತೊಡಿಕೊಂಡಳು.
ಅತ್ತ ಇಬ್ಬರು ಸಹೋದರಿಯರು ಹಾಗೂ ತಂದೆ ತಾಯಿ ಜಿಲ್ಲಾಸ್ಪತ್ರೆಯಲ್ಲಿ ಇದ್ದರೆ ಇತ್ತ ಬಾಲಕಿ ಶಿವಮ್ಮ, 4 ವರ್ಷದ ಪರಶುರಾಮ ಕುಸಿದ ಮನೆಯ ಮುಂದೆ ಇದ್ದು ನಿನ್ನೆಯ ಘಟನೆ ನೆನೆಯುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪ, ಅಮ್ಮ,ಅಕ್ಕಂದಿರು ಬರುತ್ತಾರೆಂದು ಮಕ್ಕಳು ಕಾಯುತ್ತಿದ್ದಾರೆ. ಅದೇ ರೀತಿ ಕುಸಿದ ಮನೆಯಲ್ಲಿ ಮಕ್ಕಳು ಪೆನ್ನು, ಪುಸ್ತಕ ಆಯ್ದಕೊಂಡು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಂಡಿದ್ದಾರೆ.
ರಾಜ್ಯದಲ್ಲಿರೋದು ಜೆಸಿಬಿ ಸರಕಾರ; ಮಾಜಿ ಸಚಿವ ಬಸವರಾಜ ಹೊರಟ್ಟಿ ವ್ಯಂಗ್ಯ
ದವಸ ಧಾನ್ಯ ಮಣ್ಣು ಪಾಲು...!
ಮನೆಯಲ್ಲಿರುವ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಮನೆ ಕುಸಿದ ಹಿನ್ನಲೆ ಮಣ್ಣು ಪಾಲಾಗಿವೆ. ಈಗ ಅಡುಗೆ ಮಾಡಿಕೊಂಡು ಹಸಿವು ನಿಗಿಸಿಕೊಳ್ಳಬೇಕೆಂದರೆ ಊಟಕ್ಕೆ ಗತಿ ಇಲ್ಲದಂತಾಗಿದೆ.ಧವಸ ಧಾನ್ಯ ಮಣ್ಣು ಪಾಲಾಗಿವೆ. ನಾವು ಬೆಳಿಗ್ಗೆಯಿಂದ ಊಟ ಮಾಡಿಲ್ಲ.ನಾವು ಹ್ಯಾಂಗ್ ಇರಬೇಕಿರಿ ಸರ್ ನಮಗೆ ಸರಕಾರ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಬಾಲಕಿ ಎಲ್ಲಮ್ಮ ನ್ಯೂಸ್ 18 ಕನ್ನಡಕ್ಕೆ ಹೇಳಿದಳು.
ಮಳೆ ನಿಂತರೂ ಜಿಲ್ಲೆಯಲ್ಲಿ ಮಳೆ ಅವಾಂತರ ಕಡಿಮೆಯಾಗಿಲ್ಲ. ಮನೆ ಕಳೆದುಕೊಂಡು ವಾಸಕ್ಕೆ ಸೂರು ಇಲ್ಲದೆ ಬೀದಿ ಪಾಲಾದ ಈ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ಕಲ್ಪಿಸಿ ಆಶ್ರಯವಾಗಬೇಕು ಅದೆ ರೀತಿ ಅಗತ್ಯ ಪಡಿತರ ನೀಡಿ ಹಸಿವು ನೀಗಿಸಬೇಕಾಗಿದೆ.
Published by:
Latha CG
First published:
October 22, 2020, 3:52 PM IST