ಬೆಂಗಳೂರು (ಫೆಬ್ರವರಿ.16); ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಫೆಬ್ರವರಿ 10 ರಂದು ನಡೆದಿದ್ದ ಅಪಘಾತ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿತ್ತು. ಐಶಾರಾಮಿ ಕಾರು ಅಪಘಾತದಲ್ಲಿ ದಾರಿಹೋಕ 19 ವರ್ಷದ ರವಿನಾಯ್ಕ ಎಂಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿದ್ದ ಸಚಿನ್ ಎಂಬ ವ್ಯಕ್ತಿಯೂ ಮೃತಪಟ್ಟಿದ್ದರು. ಈ ಸಂದರ್ಭದಲ್ಲ ಕಾರನ್ನು ಓಡಿಸಿದ್ದು ಸಚಿವ ಆರ್. ಅಶೋಕ್ ಮಗ ಶರತ್ ಎಂಬ ಸುದ್ದಿಯೂ ಸಹ ಎಲ್ಲೆಡೆ ಹರಿದಾಡಿತ್ತು. ಈ ನಡುವೆ ಹೊಸಪೇಟೆ ಪೊಲೀಸರು ಸಚಿವರ ಮಗನನ್ನು ರಕ್ಷಿಸುವ ಸಲುವಾಗಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಕಳೆದ ಒಂದು ವಾರದಿಂದ ಈ ಸುದ್ದಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾದರೂ ಸಹ ಸಚಿವ ಆರ್. ಅಶೋಕ್ ತಮ್ಮ ಮಗ ಶರತ್ ಎಲ್ಲಿದ್ದಾನೆ? ಹೇಗಿದ್ದಾನೆ? ಎಂಬ ಕುರಿತ ಮಾಧ್ಯಮಗಳ ಪ್ರಶ್ನೆಗೆ ಹಾರಿಕೆಯ ಉತ್ತರಗಳನ್ನಷ್ಟೇ ನೀಡುತ್ತಾ ಕಾಲ ದೂಡುತ್ತಿದ್ದರು. ಆದರೆ, ಇದೀಗ ಸಚಿವ ಆರ್. ಅಶೋಕ್ ಮಗನ ದಿಢೀರ್ ಪ್ರತ್ಯಕ್ಷವಾಗಿದೆ.
ಹೊಸಪೇಟೆ ಅಪಘಾತ ಪ್ರಕರಣ ದಾಖಲಾದ ದಿನದಿಂದ ಕಣ್ಮರೆಯಾಗಿದ್ದ ಅಶೋಕ್ ಪುತ್ರ ಶರತ್ ಶನಿವಾರ ಸಂಜೆ ಕರಿಸಂದ್ರ ವಾರ್ಡ್ನ ಕಾವೇರಿ ನಗರದಲ್ಲಿ ನಡೆದ ಬಿಜೆಪಿ ಪಾರ್ಯಕರ್ತ ಪುಟ್ಟಗಂಗಯ್ಯ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಆದರೆ, ಪ್ರಕರಣ ನಡೆದು ಕೆಲ ದಿನಗಳ ಬಳಿಕ ಶರತ್ ಪ್ರತ್ಯಕ್ಷನಾಗಿದ್ದು ಏಕೆ? ಅಪಘಾತ ಪ್ರಕರಣದಲ್ಲಿ ಇಷ್ಟು ರಾದ್ಧಾಂತವಾದರೂ ಈವರೆಗೆ ಶರತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಏಕೆ? ಬೇಕೆಂದೆ ಸಚಿವ ಆರ್. ಅಶೋಕ್ ಇಷ್ಟು ದಿನ ತಮ್ಮ ಪುತ್ರನನ್ನು ಬಚ್ಚಿಟ್ಟಿದ್ದರಾ? ಎಂಬ ಸಾಕಷ್ಟು ಅನುಮಾನಗಳಿಗೆ ಸಚಿವ ಆರ್. ಅಶೊಕ್ ಅವರ ನಡೆ ಕಾರಣವಾಗಿದೆ.
ಇದನ್ನೂ ಓದಿ : ಹೊಸಪೇಟೆ ಅಪಘಾತ ಪ್ರಕರಣ; ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ಮೃತ ರವಿನಾಯ್ಕ್ ಕುಟುಂಬ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ