ಹಾಸನ(ಆ.10): ಇಷ್ಟು ದಿನ ಕೊರೋನಾದಿಂದ ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗದೆ ತತ್ತರಿಸಿದ್ದ ರೈತ ಇದೀಗ ಮಳೆಯಿಂದ ಉಂಟಾದ ಬೆಳೆ ಹಾನಿಯಿಂದ ಕಂಗಾಲಾಗಿದ್ದಾನೆ. ಇತ್ತ ರೈತನ ಬೆಳೆ ಹಾನಿಗೆ ಪರಿಹಾರ ನೀಡುತ್ತೇನೆ ಅಂತಿದ್ದರೂ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಸರ್ಕಾರ ಪರಿಹಾರ ನೀಡಲು ಮುಂದಾದ್ರೂ ಕೂಡ ಟೀಕೆ ಯಾಕೆ ಅಂತೀರಾ? ಈ ಸ್ಟೋರಿ ನೋಡಿ.
ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗಿ ರೈತರು ಜೀವನ ನಡೆಸೋದು ಹೇಗೆ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ. ಕೊರೋನಾ ಮಹಾಮಾರಿಯಿಂದ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಮೊದಲೇ ಕಂಗಾಲಾಗಿದ್ದ ರೈತ ಇದೀಗ ಮಳೆಯಿಂದ ಬೆಳೆ ಹಾನಿಯಾಗಿ ದಿಕ್ಕೆ ತೋಚದಂತಾಗಿದ್ದಾನೆ. ಇತ್ತ ಸರ್ಕಾರ ರೈತನ ಬೆಳೆ ನಾಶಕ್ಕೆ ಪರಿಹಾರ ನೀಡುವ ಭರವಸೆ ನೀಡಿದೆ. ಆದರೆ ಸರ್ಕಾರ ಎಕರೆಗೆ ಕೇವಲ 2400 ಬೆಳೆ ಪರಿಹಾರ ನಿಗದಿ ಮಾಡಿದೆ. ಆದರೆ 2400 ರೂಪಾಯಿ ಖರ್ಚು ಮಾಡಿ ಒಂದು ಎಕರೆಯಲ್ಲಿ ಯಾವ ಬೆಳೆ ಬೆಳೆಯಬಹುದು ನೀವೇ ಹೇಳಿ. ಹೀಗಾಗಿ ಕಡೇ ಪಕ್ಷ ಸರ್ಕಾರ ರೈತ ಬೆಳೆ ಬೆಳೆಯಲು ಖರ್ಚು ಮಾಡಿರುವಷ್ಟು ಹಣವನ್ನಾದರೂ ಬೆಳೆ ಪರಿಹಾರವಾಗಿ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಕೆ ಕುಮಾರಸ್ವಾಮಿ, ಬೆಳೆ ನಾಶವಾಗಿರುವ ರೈತರ ತೋಟಗಳಿಗೆ ಖುದ್ದು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರ ಈಗ ನಿಗದಿ ಮಾಡಿರುವ ಬೆಳೆ ಪರಿಹಾರ ತೀರ ಅವೈಜ್ಞಾನಿಕಾವಾಗಿದೆ. ಇದರ ಪುನರ್ ವಿಮರ್ಶೆ ಮಾಡಿ ರೈತ ಎಷ್ಟು ಖರ್ಚು ಮಾಡಿರುತ್ತಾನೋ ಅಷ್ಟು ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಒಂದು ಎಕರೆಗೆ ಸುಮಾರು 10 ರಿಂದ 15 ಸಾವಿರ ರೂ ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಈಗ ಕೇವಲ ಸರ್ಕಾರ 2400 ರೂ ಪರಿಹಾರ ನೀಡುತ್ತಿದೆ. ಆದ್ರೆ ಸರ್ಕಾರ ಎನ್ಡಿಆರ್ಎಫ್ ಮಾರ್ಗಸೂಚಿ ಬದಲಾಯಿಸಬೇಕು ಎಂದು ಶಾಸಕ ಹೆಚ್ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಒಟ್ಟಾರೆ ಬೆಳೆಹಾನಿಯಿಂದ ತೀರ ಸಂಕಷ್ಟಕ್ಕೆ ಸಿಲುಕಿರುವ ರೈತ, ನ್ಯಾಯಯುತ ಪರಿಹಾರಕ್ಕಾಗಿ ಸರ್ಕಾರಕ್ಕೆ ಬೇಡಿಕೆಯಿಡುತ್ತಿದ್ದಾನೆ. ಸರ್ಕಾರ ರೈತರ ಬೇಡಿಕೆಗೆ ಯಾವ ರೀತಿ ಸ್ಪಂದಿಸಲಿದೆ ಕಾದು ನೋಡ್ಬೇಕಿದೆ. ಈಗಲಾದರೂ ಸರ್ಕಾರ ನೊಂದ ರೈತರಿಗೆ ಹೆಚ್ಚಿನ ಪರಿಹಾರ ವಿತರಿಸಲು ಮುಂದಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ