ಬೆಂಗಳೂರು: ಭಾರತದಲ್ಲಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳು (Elections) ಯಾವ ಹಬ್ಬಕ್ಕಿಂತಲೂ ಕಡಿಮೆ ಏನಿಲ್ಲ. ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಭಾರತದಂತಹ (India) ದೇಶದಲ್ಲಿ ದೀಪಾವಳಿ, ಓಕುಳಿಗಳಂತಹ ಹಬ್ಬಗಳು ಬಂದಾಗ ಹೇಗೆ ಲವಲವಿಕೆ ಎಂಬುದು ಜನರಲ್ಲಿ ಮೂಡುತ್ತದೆಯೋ ಅದೇ ರೀತಿಯ ಕಲರವ ಪ್ರಜಾಪ್ರಭುತ್ವದ (Republic) ದೊಡ್ಡ ಹಬ್ಬದಲ್ಲೂ ಮೂಡುತ್ತದೆ ಎಂದರೆ ತಪ್ಪಾಗದು. ಅದರಲ್ಲೂ ಮತದಾನ ಮಾಡಿ ತಮ್ಮ ಕರ್ತವ್ಯ ನಿಭಾಯಿಸಿದೆವು ಎಂಬ ಹೆಮ್ಮೆಯ ಬಿಗುಮಾನವನ್ನು ತೋರ್ಪಡಿಸುವಲ್ಲಿ ಭಾರತೀಯರು ಎತ್ತಿದ ಕೈ ಎನ್ನಬಹುದು.
ಅಂತೆಯೇ ನೀವು ನೋಡಬಹುದು ಪ್ರತಿ ಮತದಾನದ ಸಂದರ್ಭದಲ್ಲಿ ದೊಡ್ಡ ದೊಡ್ಡ ಜನರು, ಗಣ್ಯರು, ಸೆಲೆಬ್ರಿಟಿಗಳು ಮತದಾನ ಮಾಡಿ ಹೊರಬಂದ ಸಂದರ್ಭದಲ್ಲಿ ತಮ್ಮ ತೋರು ಬೆರಳನ್ನು ಮಾಧ್ಯಮದವರ ಮುಂದೆ ತೋರಿಸುವ ಪ್ರತೀತಿ ಇದೆ.
ಮತದಾನದ ಸಂಭ್ರಮ
ಇನ್ನು, ಈ ಪ್ರತೀತಿ ಎಂಬುದು ಕೇವಲ ದೊಡ್ಡ ವ್ಯಕ್ತಿಗಳಿಗಷ್ಟೇ ಸೀಮಿತವಾಗಿಲ್ಲ, ಬದಲಾಗಿ ಜನಸಾಮಾನ್ಯರೂ ಸಹ ತಾವೇನು ಕಮ್ಮಿ ಇಲ್ಲ ಎನ್ನುತ್ತ ತಾವು ಮತದಾನ ಮಾಡಿದ ಕುರುಹಾಗಿ ತಮ್ಮ ಬೆರಳನ್ನು ತೋರಿಸುತ್ತ ಫೋಟೊ ಕ್ಲಿಕ್ಕಿಸಿಕೊಂಡು ತಮ್ಮ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಪುಳಕಿತರಾಗುತ್ತಾರೆ.
ಹೀಗೆ ಪ್ರತಿಯೊಬ್ಬರೂ ತಾವು ಮತದಾನ ಮಾಡಿದ ಮೇಲೆ ತಮ್ಮ ಕೈಯ ತೋರು ಬೆರಳನ್ನು ಏಕೆ ತೋರಿಸುತ್ತಿದ್ದಾರೆ ಎಂಬ ಸಂದೇಹ ಚಿಕ್ಕ ಮಕ್ಕಳಲ್ಲಿ ಮೂಡಿದರೂ ದೊಡ್ಡವರಾದವರಿಗೆ ಈ ಬಗ್ಗೆ ಸಹಜವಾಗಿ ಗೊತ್ತೇ ಇರುತ್ತದೆ.
ಮತದಾನದ ಬಳಿಕ ಬೆರಳಿಗೆ ಶಾಯಿಯ ಗುರುತು
ಹೌದು, ವ್ಯಕ್ತಿಯೊಬ್ಬನಿಗೆ ಸಾಂವಿಧಾನಿಕವಾಗಿ ಬಂದಿರುವ ಮತದಾನದ ಹಕ್ಕನ್ನು ಅವನು ಚಲಾಯಿಸಿದ್ದಾನೆ ಎಂಬುದನ್ನು ಸೂಚಿಸುವ ಹಾಗೂ ಒಂದೇ ಬಾರಿ ಮಾಡಬೇಕಾಗಿರುವ ತನ್ನ ಸರಿಯಾದ ಹಕ್ಕನ್ನು ಚಲಾಯಿಸಿದ್ದಾನೆ ಎಂದು ಖಾತರಿಪಡಿಸುವ ಸಂಕೇತವಾಗಿ ಅವನ/ಅವಳ ಕೈಯ ತೋರು ಬೆರಳಿಗೆ ಸುಲಭವಾಗಿ ಅಳಿಸಲಾಗದಂತಹ ಒಂದು ಶಾಯಿಯ ಗುರುತನ್ನು ಹಾಕಿರುತ್ತಾರೆ.
ಈ ಶಾಯಿಯ ಗುರುತು ಆ ವ್ಯಕ್ತಿ ಈಗಾಗಲೇ ತನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಾನೆ ಎಂಬುದನ್ನು ಸಿದ್ಧ ಮಾಡುತ್ತದೆ.
ಶಾಯಿ ಹಚ್ಚುವ ಪದ್ಧತಿ
ಪ್ರತಿ ವ್ಯಕ್ತಿ ತಾನು ಮತದಾನ ಮಾಡಿದ ನಂತರ ಅದರ ಪುರಾವೆಯಾಗಿ ತನ್ನ ತೋರು ಬೆರಳನ್ನು ತೋರಿಸುವ ಪ್ರತೀತಿ ಬಂದಿದೆ ಎನ್ನಬಹುದು. ಅಷ್ಟಕ್ಕೂ ಈ ಶಾಯಿಯ ಕಲ್ಪನೆ ಬಂದಿದ್ದಾದರೂ ಹೇಗೆ ಹಾಗೂ ಅದನ್ನು ಯಾರು ಉತ್ಪಾದಿಸುತ್ತಾರೆ ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ನಿಮಗೂ ಸಹ ಈ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಮುಂದೆ ಓದುತ್ತ ಸಾಗಿ.
ಮೈಸೂರು ಒಡೆಯರ್ ಸಂಸ್ಥಾನ ಹಾಗೂ ಶಾಯಿಯ ನಂಟು
ನಿಮಗೆಲ್ಲ ಗೊತ್ತಿರುವ ಹಾಗೆ ಮೈಸೂರು ಮಹಾರಾಜರಾದ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ತಮ್ಮ ಕಾಲದಲ್ಲಿ ಭಾರತದಷ್ಟೇ ಅಲ್ಲದೆ ಜಗತ್ತಿನ ಅತಿ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರು. ಅವರ ರಾಜವಂಶವು ಚಿನ್ನದ ಗಣಿಗಳು ಹಾಗೂ ಇತರೆ ಕಂಪನಿಗಳನ್ನು ಹೊಂದಿದ್ದವು. ಅವುಗಳ ಪೈಕಿ ಪೇಂಟ್ಸ್ ಮತ್ತು ವಾರ್ನಿಶ್ ಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ಸಹ ಅವರು ಹೊಂದಿದ್ದರು.
ಮೊದಲ ಸಾರ್ವತ್ರಿಕ ಚುನಾವಣೆ
ಇನ್ನು, 1951-52 ರಲ್ಲಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗಳು ನಡೆದಾದ ಮೇಲೆ ಭಾರತ ಚುನಾವಣಾ ಆಯೋಗಕ್ಕೆ ನಡೆದಂತಹ ಚುನಾವಣೆಯಲ್ಲಿ ಹಲವು ಮೋಸ ಅಥವಾ ಬಹುಬಾರಿ ಒಬ್ಬ ವ್ಯಕ್ತಿಯಿಂದಲೇ ನಕಲಿ ಮತದಾನಗಳಾಗಿರುವ ಬಗ್ಗೆ ಮಾಹಿತಿ ದೊರೆಯಿತು.
ಇನ್ನು, ಮುಂದಿನ ಬಾರಿ ಈ ರೀತಿ ಆಗದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡದಂತೆ ಏನಾದರೂ ಮಾಡಬೇಕೆಂದು ಚುನಾವಣಾ ಆಯೋಗವು ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸುಲಭವಾಗಿ ಕೈಯಿಂದ ಅಳಿಸಲಾಗದಂತಹ ಶಾಯಿಯೊಂದನ್ನು ತಮಗಾಗಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿತು.
ತದನಂತರ ಎನ್.ಪಿ.ಎಲ್ ಸುಭದ್ರವಾಗಿ ಶಾಯಿಯ ಸೂತ್ರವೊಂದನ್ನು ಅಭಿವೃದ್ಧಿಪಡಿಸಿ ಆ ಪ್ರಕಾರ ಶಾಯಿಯನ್ನು ಉತ್ಪಾದಿಸಲು ಅಂದಿನ ಪ್ರತಿಷ್ಠಿತ ಮೈಸೂರು ಮಹಾರಾಜರ ಒಡೆತನದಲ್ಲಿದ್ದ ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯನ್ನು ಸಂಪರ್ಕಿಸಿತು.
35ಕ್ಕೂ ಹೆಚ್ಚು ದೇಶಗಳಿಗೆ ಶಾಯಿ ರಫ್ತು
ಅಂದಿನಿಂದ ಉತ್ಪಾದಿಸಲಾದ ಈ ಶಾಯಿಯು ಇಂದಿನವರೆಗೂ ಅದೊಂದೇ ಸಂಸ್ಥೆಯಿಂದಲೇ ಉತ್ಪಾದಿಸಲಾಗುತ್ತಿದ್ದು ಇದು ಒಂದು ಹೆಮ್ಮೆಯ ವಿಷಯವಾಗಿದೆ ಕರ್ನಾಟಕದವರ ಪಾಲಿಗೆ ಎನ್ನಬಹುದು. ಅಷ್ಟೆ, ಅಲ್ಲ, ಈ ಶಾಯಿಯನ್ನು ಇಂದು ಕೆನಡಾ, ಅಪ್ಘಾನಿಸ್ತಾನ್, ಟರ್ಕಿ, ಸಿಂಗಾಪುರ್ ಸೇರಿದಂತೆ 35ಕ್ಕೂ ಹೆಚ್ಚಿನ ದೇಶಗಳಿಗೆ ರಫ್ತು ಸಹ ಮಾಡಲಾಗುತ್ತಿದೆ ಎಂಬುದು ಇನ್ನೊಂದು ವಿಶೇಷ.
1962ರಲ್ಲಿ ಮೊದಲ ಬಾರಿಗೆ ಬಳಕೆ
1962ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಶಾಯಿಯನ್ನು ಮೊದಲ ಬಾರಿಗೆ ಬಳಸಲಾಯಿತು ಹಾಗೂ ನಿರೀಕ್ಷಿಸಿದಂತೆ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಮತಗಳು ಅಂದರೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಲಾಗುತ್ತಿದ್ದ ಮತಚಲಾವಣೆಗಳನ್ನು ನಿಲ್ಲಿಸಲಾಯಿತು.
ಪ್ರಜಪ್ರಭುತ್ವದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್ ಗಳಂತಹ ದೇಶಗಳಲ್ಲಿ ಈ ರೀತಿಯಾಗಿ ಶಾಯಿಗಳನ್ನು ಬಳಸುವುದಿಲ್ಲ, ಬದಲಾಗಿ ಜನರಿಗೆ ಒಂದು ಟೋಕನ್ ಸಂಖ್ಯೆಯನ್ನು ವಿತರಿಸಿ ಅದನ್ನು ಮಾನಿಟರ್ ಮಾಡುವ ಮೂಲಕ ಒಬ್ಬರು ಒಂದಕ್ಕಿಂತ ಹೆಚ್ಚು ಮತದಾನ ಮಾಡದಂತೆ ನಿಗಾವಹಿಸುತ್ತಾರೆ. ಆದರೆ, ಅಂದಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಅಶಿಕ್ಷಿತ ಹಾಗೂ ಅಗಾಧ ಜನಸಂಖ್ಯೆ ಹೊಂದಿದ್ದ ಭಾರತದಂತಹ ದೇಶಕ್ಕೆ ಈ ರೀತಿ ಶಾಯಿಯ ಬಳಕೆಯು ಹೆಚ್ಚು ಸೂಕ್ತವಾಗಿತ್ತು.
ಪ್ರಸ್ತುತ ನೋಟ
ಇಂದು ಈ ಅಳಿಸಲಾಗದ ಶಾಯಿಯು 5, 7.5, 20, 50, 80 ಎಂಎಲ್ ಗಳ ಪ್ರಮಾಣದಲ್ಲಿ ಲಭ್ಯವಿದ್ದು 5 ಎಂಎಲ್ ಇರುವ ಶಾಯಿಯ ಸೀಸೆಯಿಂದ ಸುಮಾರು 300 ಜನರಿಗೆ ಗುರುತನ್ನು ಹಾಕಬಹುದಾಗಿದೆ. ಈ ಶಾಯಿಯನ್ನು ಅದರ ಸೀಸೆಯಿಂದ ಸೂರ್ಯನ ಬೆಳಕಿನೊಂದಿಗೆ ಒಡ್ಡಿಕೊಳ್ಳಲು ಹೊರತೆಗೆಯದ ಹೊರತು ಯಾವುದೇ ರಿಯಾಕ್ಷನ್ ತೋರಿಸುವುದಿಲ್ಲ.
ಭಾರತೀಯ ಚುನಾವಣಾ ಆಯೋಗವು ಈ ಶಾಯಿಯ ದೊಡ್ಡ ಗ್ರಾಹಕವಾಗಿದ್ದು ಪ್ರತಿ ಚುನಾವಣೆ ಸಂದರ್ಭದಲ್ಲಿ ಆಯಾ ಪ್ರದೇಶಗಳಲ್ಲಿ ನೋಂದಾಯಿಸಲ್ಪಟ್ಟ ಮತದಾರರ ಸಂಖ್ಯೆಗನುಗುಣವಾಗಿ ಬೇಕಾಗಿರುವ ಶಾಯಿಯ ಪ್ರಮಾಣ ಲೆಕ್ಕ ಹಾಕಿ ಆರ್ಡರ್ ನೀಡುತ್ತದೆ. ಆನಂತರ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಈ ಶಾಯಿಯನ್ನು ವಿತರಿಸಲಾಗುತ್ತದೆ ಹಾಗೂ ಅವರು ಅದನ್ನು ಪ್ರತ್ಯೇಕ ಮತದಾನ ಕೇಂದ್ರಗಳಿಗೆ ವಿತರಿಸುತ್ತಾರೆ.
ಚುನಾವಣಾ ಶಾಯಿ ವಿಶೇಷ ಏಕೆ?
ಈ ಶಾಯಿಯ ಉತ್ಪಾದನೆಯ ಸೂತ್ರ ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಆದರೂ, ಇದು ಅಲ್ಪ ಪ್ರಮಾಣದಲ್ಲಿ ಸಿಲ್ವರ್ ನೈಟ್ರೇಟ್ ಘಟಕಾಂಶಗಳನ್ನು ಹೊಂದಿದ್ದು ಇದು ಬೆಳಕಿನೊಂದಿಗೆ ರಿಯಾಕ್ಟ್ ಆಗುತ್ತದೆ. ಇದರಿಂದಾಗಿ ಇದು ಬೆರಳಿನ ಮೇಲೆ 3-4 ವಾರಗಳವರೆಗೂ ಅಳಿಯದಂತೆ ಉಳಿದಿರುತ್ತದೆ.
ಇದನ್ನು ನೀರಿನಿಂದ ತೊಳೆಯುವುದರ ಮುಲಕವಾಗಲಿ ಅಥವಾ ಇನ್ನ್ಯಾವುದೇ ರಾಸಾಯನಿಕ ಬಳಸಿ ಅಳಿಸುವುದನ್ನಾಗಲಿ ಮಾಡಲು ಸಾಧ್ಯವಿಲ್ಲ. ಈ ಶಾಯಿ ಉತ್ಪಾದನಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹೇಮಂತ್ ಕುಮಾರ್ ಅವರು ಹೇಳುವಂತೆ ಈ ಶಾಯಿಯು ಸೂರ್ಯನ ಕಿರಣಕ್ಕಾಗಲಿ ಅಥವಾ ರಾತ್ರಿಯ ಲೈಟಿನ ಪ್ರಕಾಶಕ್ಕಾಗಲಿ ಒಡ್ಡಿಕೊಂಡಾಗ ಮತ್ತಷ್ಟು ಪ್ರಖರವಾಗುತ್ತದೆ.
ಒಟ್ಟಿನಲ್ಲಿ ಹಲವು ವಿಶೇಷತೆಗಳುಳ್ಳ ಭಾರತದಂತ ದೇಶದಲ್ಲಿ ವೈವಿಧ್ಯಮಯ ವೇಶಭೂಷಣಗಳಿವೆ. ಇವೆಲ್ಲದರಲ್ಲೂ ಪ್ರತಿಯೊಂದು ಧರ್ಮದ, ಜಾತಿಯ ಜನರು ಏಕರೂಪವಾಗಿ ಹೆಮ್ಮೆಯಿಂದ ತೋರಿಸುವ ಸಂಕೇತವೆಂದರೆ ಅದುವೇ ತೋರು ಬೆರಳಿನಲ್ಲಿ ಹಾಕಿಸಿಕೊಂಡ ಚುನಾವಣಾ ಶಾಯಿ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ