ದಕ್ಷಿಣ ಕನ್ನಡ: ಅನ್ಯಧರ್ಮಿಯರ ವಶದಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ (Kukke Subramanya Temple) ಜಾಗವನ್ನು ಮರಳಿ ದೇವಸ್ಥಾನಕ್ಕೆ ಒಪ್ಪಿಸಲು ಹಿಂದೂ ಜಾಗರಣ ವೇದಿಕೆ (Hindu Jagarana Vedike) ಆಪರೇಷನ್ ಟೆಂಪಲ್ ಲ್ಯಾಂಡ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವು ಮಾಡಿ ದೇವಸ್ಥಾನದ ವಶಕ್ಕೆ ನೀಡಿರುವ ಘಟನೆ ಜಿಲ್ಲೆಯ ಪುತ್ತೂರು (Puttur) ನಗರದ ಬೊಳುವಾರು ಎಂಬಲ್ಲಿ ನಡೆದಿದೆ. ಕುಕ್ಕೆ ದೇವಸ್ಥಾನಕ್ಕೆ ಸೇರಿದ್ದ ಸುಮಾರು 1.57 ಎಕರೆ ಜಾಗದಲ್ಲಿ ಗುಜರಿ ಅಂಗಡಿ (Gujari Shop) ಸೇರಿದಂತೆ ಹಲವು ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಅತಿಕ್ರಮಣ ಮಾಡಿದ್ದರು. ಆದರೆ 2014ರಲ್ಲೇ ಹೈಕೋರ್ಟ್ ನ್ಯಾಯಾಲಯ (Court) ಆದೇಶ ನೀಡಿ ಜಾಗ ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದು ಎಂದು ತೀರ್ಪು ನೀಡಿತ್ತು.
ಅಕ್ರಮ ಕಟ್ಟಡಗಳ ನೆಲಸಮ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಾಗ ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದು ಎಂದು ನ್ಯಾಯಾಲಯ 2014 ರಲ್ಲೇ ಆದೇಶ ನೀಡಿದ್ದರೂ ಕೂಡ ಜಾಗ ಬಿಟ್ಟುಕೊಡಲು ಅತಿಕ್ರಮಣಕಾರರು ಹಿಂದೇಟು ಹಾಕಿದ್ದರು. ಈ ಹಿನ್ನಲೆಯಲ್ಲಿ ಆಪರೇಷನ್ ಟೆಂಪಲ್ ಲ್ಯಾಂಡ್ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ ದೇವಸ್ಥಾನದ ಸುಪರ್ದಿಗೆ ವಹಿಸಿದ್ದಾರೆ.
ಇದನ್ನೂ ಓದಿ: Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್ ಪಾದ್ರಿಯನ್ನು ಬಂಧಿಸಿದ ಪೊಲೀಸರು
ಸ್ಥಳದಲ್ಲಿ ಮಾರ್ಚ್ 24ರಂದು ಆಶ್ಲೇಶ ಬಲಿ ಪೂಜೆ
ಇನ್ನು ಈ ಸ್ಥಳದಲ್ಲಿ ಹೆಚ್ಚಾಗಿ ಅನ್ಯಮತೀಯರೇ ಹೆಚ್ಚಾಗಿ ಅತಿಕ್ರಮಿಸಿಕೊಂಡಿದ್ದರು. ಸದ್ಯ ದೇವಸ್ಥಾನದ ವಶಕ್ಕೆ ನೀಡಿರುವ ಜಾಗದಲ್ಲಿ ಮಾರ್ಚ್ 24ರಂದು ಆಶ್ಲೇಶ ಬಲಿ ಪೂಜೆ, ಧಾರ್ಮಿಕ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಯಾಚರಣೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಅತಿಕ್ರಮಣ ಮಾಡಿ ಜಾಗದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ಅಂಗಡಿ ಹಾಗೂ ಕೆಲ ಮನೆಗಳನ್ನು ತೆರವು ಮಾಡಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ನಿಂತು ಹೋಗಿತ್ತು. ಆದರೆ ಸದ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಜಾಗವನ್ನು ಮರಳಿ ದೇವಸ್ಥಾನದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಶೀಘ್ರ ಸ್ಥಳದಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ