ಬೆಂಗಳೂರು(ಫೆ.09): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ಹಿಜಾಬ್ ವಿವಾದ(Hijab Controversy) ಹೈಕೋರ್ಟ್(High Court) ಮೆಟ್ಟಿಲನ್ನೂ ಸಹ ಏರಿದೆ. ನಿನ್ನೆ ಈ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಿ, ಇಂದಿಗೆ ಮುಂದೂಡಲಾಗಿತ್ತು. ಇಂದು ನ್ಯಾಯಾಲಯದಲ್ಲಿ ಹಿಜಾಬ್ ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಹಿಜಾಬ್ ಪ್ರಕರಣ ಸಂಬಂಧ ಹೈಕೋರ್ಟ್ನಿಂದ ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣದ ವಿಚಾರಣೆಯನ್ನು(Hearing) ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.
ವಾದ ಮಂಡನೆ ಬಳಿಕ ತೀರ್ಪು ಪ್ರಕಟ ಸಾಧ್ಯತೆ
ಪ್ರಕರಣ ಸಂಬಂಧ ನಿನ್ನೆ ಇಡೀ ದಿನ ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿದ್ದಾರೆ. ಯುವತಿ ಪರವಾಗಿ ದೇವದತ್ ಕಾಮತ್ ವಾದ ಮಂಡನೆ ಮಾಡಿದರೆ, ಸರ್ಕಾರದ ಪರವಾಗಿ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ದಾರೆ. ದೇವದತ್ ಕಾಮತ್ ಕೇರಳ, ಮದ್ರಾಸ್ ಹಾಗೂ ಮಹಾರಾಷ್ಟ್ರ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಹಿಜಾಬ್ ಧರಿಸೋದು ಮುಸ್ಲಿಂ ಸಂಸ್ಕೃತಿ, ಅದಕ್ಕೆ ಅವಕಾಶ ಕೊಡಬೇಕು ಅಂತ ವಾದ ಮಂಡಿಸಿದ್ದರು. ಇಂದೂ ಸಹ ನ್ಯಾಯಾಧೀಶರು ವಾದ ಮಂಡನೆಗೆ ಅವಕಾಶ ನೀಡಲಿದ್ದಾರೆ. ವಾದ ಮಂಡನೆ ಬಳಿ ತೀರ್ಪು ಪ್ರಕಟ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:Hijab Controversy: 3 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ: ನಾಳೆ ಮತ್ತೆ ಹೈಕೋರ್ಟ್ನಲ್ಲಿ ವಿಚಾರಣೆ
ರಾಜ್ಯಾದ್ಯಂತ ಖಾಕಿ ಪಡೆ ಅಲರ್ಟ್
ಇನ್ನು, ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೆ 3 ದಿನ ರಜೆ ನೀಡಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಹೀಗಿದ್ದರೂ ಸಹ ಶಾಲಾ-ಕಾಲೇಜುಗಳ ಬಳಿಕ ಗಸ್ತು ತಿರುಗುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಮುಂಜಾಗ್ರತೆ ವಹಿಸಲಾಗಿದೆ.
ಅಗತ್ಯ ಬಿದ್ರೆ 144 ಸೆಕ್ಷನ್
ರಾಜ್ಯ ಗುಪ್ತಚರ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಪ್ರತಿಯೊಂದು ಮಾಹಿತಿಯನ್ನು ಗೃಹ ಸಚಿವರಿಗೆ ನೀಡುತ್ತಿದೆ. ಅಗತ್ಯ ಇರುವ ಜಿಲ್ಲೆಗಳಲ್ಲಿ 144 ಸೆಕ್ಷನ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಸದಾ ಅಲರ್ಟ್ ಆಗಿ ಇರುವಂತೆ ಡಿಜಿ ಐಜಿ ಪ್ರವೀಣ್ ಸೂದ್ ರಾಜ್ಯದ ಎಲ್ಲಾ ಎಸ್ ಪಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಹಿಜಾಬ್ ವಿವಾದ ಚರ್ಚೆ
ವಿದ್ಯಾರ್ಥಿಗಳ ನಡುವೆ ತಾರಕ್ಕೇರಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ದಿನೇ-ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಹಿಜಾಬ್ ಪ್ರಕರಣ ಕುರಿತಾಗಿ ಬಿಸಿಬಿಸಿ ಚರ್ಚೆಯಾಗುವ ಸಾಧ್ಯತೆ ಇದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಡಿಜಿಪಿ ಪ್ರವೀಣ್ ಸೂದ್ ಜೊತೆ ತಡರಾತ್ರಿ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕೋರ್ಟ್ ನಲ್ಲಿ ಸರ್ಕಾರದ ನಿಲುವಿನ ಬಗ್ಗೆಯೂ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಜೊತೆಯೂ ಸಮಾಲೋಚನೆ ನಡೆಸಿದ್ದಾರೆ.
ಇದನ್ನೂ ಓದಿ: Hijab v/s Saffron Shawl: ಶಿವಮೊಗ್ಗ ಕಾಲೇಜಿನಲ್ಲಿ ಕಲ್ಲು ತೂರಾಟ; ಮೂವರು ವಿದ್ಯಾರ್ಥಿಗಳಿಗೆ ಗಾಯ
ಸಚಿವರ ಅಭಿಪ್ರಾಯ ಸಂಗ್ರಹಿಸಲಿರೋ ಸಿಎಂ
ಹಿಜಾಬ್ ವಿಚಾರದಲ್ಲಿ ಸರ್ಕಾರದ ಮುಂದಿನ ನಡೆ ಹೇಗಿರಬೇಕು? ಕೋರ್ಟ್ ತೀರ್ಪು ಮತ್ತು ನಿರ್ದೇಶನದ ಬಳಿಕ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಹೇಗಿರಬೇಕು? ಹಿಜಾಬ್ ವಿವಾದ ವಿಚಾರ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆಯಾ? ಈ ಬಗ್ಗೆ ಸರ್ಕಾರದ ಕ್ರಮಗಳೇನು ಎಂಬ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇಂದು ನಡೆಯೋ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ವಿಷಯಗಳ ಕುರಿತು ಸಿಎಂ ಚರ್ಚಿಸಲಿದ್ದಾರೆ. ಜೊತೆಗೆ ಈ ಬಗ್ಗೆ ಸಚಿವರ ಅಭಿಪ್ರಾಯವನ್ನೂ ಪಡೆಯಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ