• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅತ್ಯಾಚಾರ ಆರೋಪಿ ಪೊಲೀಸ್ ಅಧಿಕಾರಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಅತ್ಯಾಚಾರ ಆರೋಪಿ ಪೊಲೀಸ್ ಅಧಿಕಾರಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಆರೋಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಿಗೇ ಆರೋಪಿ ಅಧಿಕಾರಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಸಂತ್ರಸ್ತೆಯು ಹೈಕೋರ್ಟ್‌ ಮೆಟ್ಟಿಲೇರಿದ್ದು, ನಿರೀಕ್ಷಣಾ ಜಾಮೀನು ರದ್ದತಿಗೆ ಕೋರಿದ್ದರು.

ಮುಂದೆ ಓದಿ ...
  • Share this:

    ಬೆಂಗಳೂರು: ಅತ್ಯಾಚಾರ ಆರೋಪಿಯಾದ ಪೊಲೀಸ್‌ ಅಧಿಕಾರಿಗೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದ್ದು, ಪೊಲೀಸ್‌ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ನೆರವಿಗೆ ನ್ಯಾಯಾಲಯ ಬರಬೇಕಿತ್ತು ಎಂದಿದೆ. ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಕೋರ್ ಆಫ್‌ ಡಿಟೆಕ್ಟಿವ್ಸ್‌ಗೆ (ಸಿಒಡಿ) ವರ್ಗಾಯಿಸಿದೆ.


    ಆರೋಪಿ ಅಧಿಕಾರಿ ಪೊಲೀಸ್‌ ಠಾಣೆಯಲ್ಲಿ ಸುಲಭವಾಗಿ ಕೈಗೆ ಸಿಗುವಾಗ ಬಂಧಿಸುವುದನ್ನು ಬಿಟ್ಟು ಅವರು ಮುಕ್ತವಾಗಿ ಸಂಚರಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿರುವುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ನ್ಯಾಯಾಲಯ ಹೇಳಿದೆ. “ಆರೋಪಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಿರುವುದನ್ನು ಬಿಟ್ಟರೆ ಪೊಲೀಸ್‌ ಇಲಾಖೆಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಸಹಾಯ ಮಾಡಿದೆ. ಆರೋಪಿಗೆ ಪೊಲೀಸ್‌ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಪೀಠ ಹೇಳಿದೆ.


    ಆರೋಪಿಯು ಪೊಲೀಸ್‌ ಅಧಿಕಾರಿ ಎಂಬುದನ್ನು ಮರೆತು ವಿಚಾರಣಾಧೀನ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ಪೀಠ ಹೇಳಿದೆ. “ಪೊಲೀಸ್‌ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ನೆರವಿಗೆ ನ್ಯಾಯಾಲಯ ಧಾವಿಸಬೇಕು… ಪ್ರಕರಣದ ವಾಸ್ತವಿಕ ಅಂಶಗಳ ಮೇಲೆ ಗಮನಹರಿಸದೆ, ಆರೋಪಿಯು ಪೊಲೀಸ್‌ ಅಧಿಕಾರಿ ಎಂಬುದನ್ನು ಪರಿಗಣಿಸದೆ, ವಿಶೇಷವಾಗಿ ಅಧಿಕಾರಿಯ ವಿರುದ್ಧ ಐಪಿಸಿಯ ಸೆಕ್ಷನ್‌ 376ರ ಅಡಿ ದೂರು ದಾಖಲಿಸಿದಾಗಲೂ ವಿಚಾರಣಾಧೀನ ನ್ಯಾಯಾಲಯವು ಅದರಲ್ಲೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ” ಎಂದು ಹೈಕೋರ್ಟ್‌ ಹೇಳಿದ್ದು, ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದೆ.


    “ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆ ಕೆಳಹಂತದಿಂದ ಮೇಲ್ಮಟ್ಟದ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ದೂರು ವರ್ಗಾಯಿಸಿದ್ದರೂ ಯಾವುದೇ ಕ್ರಮವಾಗದಿದ್ದಾಗ ನ್ಯಾಯಾಲಯವು ಸಂತ್ರಸ್ತೆಯ ನೆರವಿಗೆ ಧಾವಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.


    ಇದನ್ನು ಓದಿ: CM BS Yediyurappa: ರಾಜ್ಯ ಸರ್ಕಾರದಿಂದಲೂ ಅನಾಥ ಮಕ್ಕಳಿಗೆ ವಿಶೇಷ ಪ್ಯಾಕೇಜ್ ಘೋಷಣೆ; ಹೆಣ್ಣು ಮಕ್ಕಳಿಗೆ 1 ಲಕ್ಷ ಸಹಾಯಧನ


    ಸಂತ್ರಸ್ತೆಯು ತನ್ನ ಲ್ಯಾಪ್‌ಟಾಪ್‌ ಕಳವಾಗಿದ್ದರ ಸಂಬಂಧ ದೂರು ನೀಡಲು ಠಾಣೆಗೆ ತೆರಳಿದ್ದಾಗ ಆರೋಪಿಯ ಪರಿಚಯವಾಗಿತ್ತು. ವಿವಾಹವಾಗುವುದಾಗಿ ನಂಬಿಸಿ ಆರೋಪಿತ ಅಧಿಕಾರಿಯು ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದಿದ್ದರು. ವಿವಾಹವಾಗುವ ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಅಧಿಕಾರಿ ಒತ್ತಾಯಿಸಿದ್ದು, ಆಕೆ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಆಗ ಅಧಿಕಾರಿಯು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.


    ಈ ಮಧ್ಯೆ, ಅದಾಗಲೇ ಅಧಿಕಾರಿಗೆ ವಿವಾಹವಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಅಧಿಕಾರಿಯ ಸಂಬಂಧಿಗಳು ಅವರ ವಿರುದ್ಧ ದೂರುವುದನ್ನು ನಿಲ್ಲಿಸುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದ್ಯಾವುದನ್ನೂ ಲೆಕ್ಕಿಸದ ಸಂತ್ರಸ್ತೆಯು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ವಿಚಾರಣೆಗೆ ಸಂತ್ರಸ್ತೆಯನ್ನು ಅನೇಕ ಬಾರಿ ಠಾಣೆಗೆ ಕರೆಸಿದ ಪೊಲೀಸ್‌ ಇನ್ಸ್‌ಪೆಕ್ಟರ್, ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಆಕೆಗೆ ಬೆದರಿಕೆಯೊಡ್ಡಿ, ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೂರು ದಿನ ಕಾನೂನುಬಾಹಿರವಾಗಿ ಕಸ್ಟಡಿಯಲ್ಲಿಟ್ಟು ಬಳಿಕ ನನ್ನನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದರು.


    ಬಳಿಕ, ಸಂತ್ರಸ್ತೆಯು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳ್ತಂಗಡಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಿಗೆ ತಮ್ಮ ಅಹವಾಲನ್ನು ವಿವರಿಸಿ ದೂರು ನೀಡಿದ್ದರು. ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಆರೋಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಿಗೇ ಆರೋಪಿ ಅಧಿಕಾರಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಸಂತ್ರಸ್ತೆಯು ಹೈಕೋರ್ಟ್‌ ಮೆಟ್ಟಿಲೇರಿದ್ದು, ನಿರೀಕ್ಷಣಾ ಜಾಮೀನು ರದ್ದತಿಗೆ ಕೋರಿದ್ದರು.

    Published by:HR Ramesh
    First published: