news18-kannada Updated:January 21, 2021, 5:41 PM IST
ಮಾಜಿ ಸಚಿವ ವಿನಯ್ ಕುಲಕರ್ಣಿ
ಧಾರವಾಡ (ಜ. 21): ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ನ್ಯಾಯಾಪೀಠ ಮತ್ತೆ ವಜಾಗೊಳಿಸಿದೆ. ಈ ಮೂಲಕ ವಿನಯ ಕುಲಕರ್ಣಿಗೆ ಜೈಲೇ ಗತಿಯಾಗಿದೆ. ಸಿಬಿಐ ಅಧಿಕಾರಿಗಳಿಂದ ಬಂಧನವಾಗಿದ್ದ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ನ.9ರಂದು ಜಾಮೀನು ಕೋರಿ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವಿನಯ ಕುಲಕರ್ಣಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಕುಟುಂಬಸ್ಥರ ಕೋರಿಕೆ ಮೇರೆಗೆ ವಕೀಲರು ಅರ್ಜಿ ವಾಪಸ್ ಪಡೆದಿದ್ದರು. ವಿನಯ ಪರ ವಕೀಲ ಬಾಹುಬಲಿ ಧನವಡೆ ಪುನಃ ನ.26ರಂದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ ಕಾಲಕಾಲಕ್ಕೆ ಡಿ.14 ರವರೆಗೆ ಅರ್ಜಿ ವಿಚಾರಣೆ ಮುಂದೂಡತ್ತಲೇ ಬಂದಿತ್ತು. ಸುದೀರ್ಘ ವಿಚಾರಣೆಯ ನಂತರ ಕೊನೆಗೆ ವಾದ-ಪ್ರತಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಧೀಶರು ಮಾಜಿ ಸಚಿವ ವಿನಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದರು.
ವಿನಯ ಕುಲಕರ್ಣಿ ಪ್ರಭಾವಿ ವ್ಯಕ್ತಿ. ಜಾಮೀನು ಸಿಕ್ಕರೆ, ಸಾಕ್ಷಿ ನಾಶಪಡಿಸುವ ಸಾಧ್ಯವಿದ್ದು, ಜಾಮೀನು ನೀಡದಂತೆ ಕೋರಿದಾಗ ನ್ಯಾಯಾಲಯ ವಿಚಾರಣೆ ಮುಂದೂಡಿತ್ತು. ನಂತರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ನ್ಯಾಯಾದೀಶ ಕೆ.ಎನ್.ನಟರಾಜ, ಸುದೀರ್ಘ ವಾದ ಹಾಗೂ ಪ್ರತಿವಾದ ಆಲಿಸಿದ ನಂತರ ಜಾಮೀನು ನಿರಾಕಾರಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದರು.
ಧಾರವಾಡ ಹೈಕೋರ್ಟ್ ನಲ್ಲಿ ವಿನಯ ಕುಲಕರ್ಣಿ ಪರ ವಕೀಲರು ಹಾಗೂ ಸಿಬಿಐ ವಕೀಲರು ವಾದ ಪ್ರತಿವಾದ ಮಂಡಿಸಿದರು. ಆದರೆ, ವಿನಯ ಪರವಕೀಲರ ವಾದಕ್ಕೆ ಪ್ರತಿವಾದ ಮಾಡಲು ಕಾಲಾವಕಾಶ ಕೇಳಿದ ಸಿಬಿಐ ವಕೀಲರಿಗೆ ಇಂದಿನವರೆಗೆ ಸಮಯ ನೀಡಿತ್ತು. ಇಂದು ಸಿಬಿಐ ಪರ ವಕೀಲರು ವಾದ ಮಂಡಿಸಿದರು. ಇಬ್ಬರ ವಾದ ಪ್ರತಿವಾದ ಆಲಿಸಿದ ಧಾರವಾಡ ಹೈಕೋರ್ಟ್ ನ್ಯಾಯಾಧೀಶರು ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿತು.
ಇದನ್ನು ಓದಿ: ಖಾತೆ ಬದಲಾವಣೆ ಅಸಮಾಧಾನ; ಸಂಪುಟ ಸಭೆಗೆ ಗೈರಾದ ಎಂಟಿಬಿ, ಗೋಪಾಲಯ್ಯ,ಸುಧಾಕರ್
ನ. 5ರಂದು ನ್ಯಾಯಾಂಗ ಬಂಧನಕ್ಕೆ ಒಳಗಾದ ವಿನಯ ಕುಲಕರ್ಣಿ ದೀಪಾವಳಿ, ಸಂಕ್ರಾಂತಿ ಹಬ್ಬಗಳನ್ನು ಜೈಲಿನಲ್ಲಿ ಕಳೆದಿದ್ದು, ಸದ್ಯ ಬೆಳಗಾವಿ ಹಿಂಡಲಗಾ ಜೈಲೇ ಗತಿಯಾಗಿದೆ. ಹೈಕೋರ್ಟ್ ನಿಂದ ಜಾಮೀನು ಸಿಗಬಹುದು ಎಂದುಕೊಂಡ ವಿನಯ ಕುಲಕರ್ಣಿ ಬೆಂಬಲಿಗರಿಗೆ ತುಂಬಾ ನಿರಾಸೆ ಮೂಡಿದೆ.
ಧಾರವಾಡಕ್ಕೆ ಪುನಃ ರಾಕೇಶ ರಂಜನ್ ನೇತೃತ್ವದ ತಂಡದ ಸಿಬಿಐ ಅಧಿಕಾರಿಗಳು ಆಗಮಿಸಿದ್ದು, ಪ್ರಕರಣದಲ್ಲಿ ಭಾಗಿಯಾದವರಿಗೆ ಮತ್ತೆ ಭಯ ಶುರುವಾಗಿದೆ. ಕೆಲ ಅಧಿಕಾರಿಗಳ ಬಂಧಿಸುವ ಬಗ್ಗೆ ಊಹಾಪೋಹ ಕೇಳಿರುತ್ತಿವೆ. ಆದರೆ, ಕೆಲವರ ವಿಚಾರಣೆ ನಡೆಸಿ ಬಂಧನ ಮಾಡತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
(ವರದಿ : ಮಂಜುನಾಥ ಯಡಳ್ಳಿ)
Published by:
Seema R
First published:
January 21, 2021, 5:41 PM IST