Rain Update: ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ದಕ್ಷಿಣ ಕನ್ನಡದಲ್ಲಿ 28 ಕುಟುಂಬಗಳ ಸ್ಥಳಾಂತರ
Rain Update: ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ದಕ್ಷಿಣ ಕನ್ನಡದಲ್ಲಿ 28 ಕುಟುಂಬಗಳ ಸ್ಥಳಾಂತರ
ರಾಜ್ಯದಲ್ಲಿ ಭಾರೀ ಮಳೆ
Heavy Rain In Karnataka: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಇಂದು ಸಹ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಈಗಾಗಲೇ ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ ಇರುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಉತ್ತರಕನ್ನಡದಲ್ಲಿ ವರುಣನ ಆರ್ಭಟ ಜನಜೀವನ ಅಸ್ತವ್ಯಸ್ತವಾಗಿದೆ. ರಾತ್ರಿಯಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ರಾಯಚೂರಿನಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಗಲು ರಾತ್ರಿ ಬಿಡುವಿಲ್ಲದೆ ವರುಣನ ಆರ್ಭಟ ಹೆಚ್ಚಾಗಿದೆ. ರಾಯಚೂರು ನಗರದ ಮಂತ್ರಾಲಯ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರ ಪರದಾಡುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದಿದ್ದು, ಮರ ಬಿದ್ದಿದ್ದರಿಂದ 440 ಕಿಲೋ ವ್ಯಾಟ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ನೆರೆ ಪರಿಸ್ಥಿತಿ ಎದುರಾಗಿದೆ. ಸುಮಾರು 70 ಮನೆಗಳು ಭಾಗಶಃ ಮುಳುಗಡೆಯಾಗಿದ್ದು, ಉಪ್ಪೂರು ಶಾಲೆ ಬಹುತೇಕ ಮುಳುಗಿದೆ. ಅದೃಷ್ಟವಶಾತ್ ಶಾಲೆಗಳಿಗೆ ರಜೆ ಇದ್ದುದರಿಂದ ಅಪಾಯ ತಪ್ಪಿದೆ.
ಮಂಗಳೂರಿನ ಕಣ್ಣೂರಿನ ಬೊಳ್ಳೂರು ಗುಡ್ಡೆಯಲ್ಲಿ ಭೂ ಕುಸಿತ ಉಂಟಾಗಿದ್ದು, ನಾಲ್ಕು ಮನೆಯ ಮೇಲೆ ಮಣ್ಣು ಕುಸಿದಿದ್ದು, ಹತ್ತಕ್ಕೂ ಅಧಿಕ ಮನೆಗಳು ಅಪಾಯದ ಅಂಚಿನಲ್ಲಿದೆ. ಸದ್ಯ ನಾಲ್ಕು ಮನೆಗಳ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದ್ದು, ಎರಡು ದಿನದಿಂದ ಕುಡಿಯಲು ನೀರಿಲ್ಲದ ಜನರು ಪರದಾಡುತ್ತಿದ್ದಾರೆ.
ಕಾರಾವಾರ, ಅಂಕೋಲಾ, ಕುಮಟಾ, ಸಿದ್ದಾಪುರ, ಹೊನ್ನಾವರ, ಭಟ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಘನಾಶಿನಿ, ಗಂಗಾವಳಿ , ಬಡಣಗಣಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ.
ಕುಮುಟ ತಾಲೂಕಿನ ಊರಕೇರಿ,ಬಡಗಣಿ, ಹೆಗಡೆ, ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹೊನ್ನಾವರ ತಾಲೂಕಿನ ಗುಂಡಬಾಳ,ಹಡಿನಬಾಳ, ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನರ ಪರದಾಡುವ ಪರಿಸ್ಥಿತಿ ಬಂದಿದೆ.
ಇನ್ನು ಭಾರೀ ಮಳೆಯಿಂದಾಗಿ ಕಾರವಾರ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಬಿಣಗಾದ ನೌಕಾನೆಲೆಯ ಕಾಮತ್ ಗೇಟ್ ಬಳಿ ರಸ್ತೆ ಬಂದ್ ಆಗಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನಲೆ ವಾಹನ ಸವಾರರ ಪರದಾಡುತ್ತಿದ್ದಾರೆ. ರಸ್ತೆ ದಾಟಲು ಸಾಧ್ಯವಾಗದೇ ಸಾಲುಗಟ್ಟಿ ನಿಂತ ವಾಹನಗಳು ನಿಂತಿದ್ದು, ಬೆಳಿಗ್ಗೆ ಕೆಲಸಕ್ಕೆ ತೆರಳುವ ನೌಕರರು, ಸಿಬ್ಬಂದಿಗಳು ಕಷ್ಟ ಅನುಭವಿಸುತ್ತಿದ್ದಾರೆ.
ಇನ್ನು ದಕ್ಷಿಣ ಕನ್ನಡದ ನಂದಿನಿ,ಶಾಂಭವಿ ನದಿಗಳಲ್ಲಿ ಭಾರೀ ನೀರಿನ ಹರಿವು ಉಂಟಾಗಿದ್ದು, ನೀರಿನ ಮಟ್ಟ ಏರಿದ ಹಿನ್ನಲೆಯಲ್ಲಿ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ನೆರೆ ಭೀತಿ ಹಿನ್ನಲೆ ಸುಮಾರು 28 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ