ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಮಳೆ (Anekal Rain Effect) ಅವಾಂತರ ಮುಂದುವರಿದಿದೆ. ಜಿಗಣಿ ಸಮೀಪದ ನರಸಿಂಹ ಸ್ವಾಮಿ ಬಡಾವಣೆಗೆ ಮಳೆ ನೀರು ನುಗ್ಗಿ ಜಲದಿಗ್ಭಂದನ (Flood) ವಿಧಿಸಿತ್ತು. ಇಂದು ಹೆಬ್ಬಗೋಡಿ ಸಮೀಪದ ಡ್ಯಾಡಿಸ್ ಬಡಾವಣೆ ಬಹುತೇಕ ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ಮನೆಗಳಿಂದ ಹೊರ ಬರಲಾಗದೆ ಪರದಾಡುವಂತಾಗಿತ್ತು. ರಾತ್ರಿ ಸುರಿದ ಮಳೆಗೆ ಬೆಂಗಳೂರು (Bengaluru Rains) ಹೊರವಲಯದ ಹೆಬ್ಬಗೋಡಿ ಅಕ್ಷರಶಃ ನಲುಗಿದೆ. ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಸಿದೆ. ಹೆಬ್ಬಗೋಡಿ (Hebbagodi) ಸಮೀಪದ ಡ್ಯಾಡಿಸ್ ಬಡಾವಣೆಗೆ ಕಮ್ಮಸಂದ್ರ ಮತ್ತು ಬೊಮ್ಮಸಂದ್ರ ಕೆರೆ ನೀರು ನುಗ್ಗಿ ಕೃತಕ ಕೆರೆ ಸೃಷ್ಟಿಯಾಗಿತ್ತು. ರಸ್ತೆಗಳು ನೀರಿನಿಂದ ತುಂಬಿದ್ದರಿಂದ ಬಡಾವಣೆ ಜನ ಹೊರ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಸ್ಥಳೀಯ ಶಾಸಕರು ಇತ್ತ ತಿರುಗಿ ನೋಡಿಲ್ಲ ಯಾವುದೇ ನೆರವು ನೀಡಿಲ್ಲ. ಪ್ರತಿ ಬಾರಿ ಜೋರು ಮಳೆ ಸುರಿದರೂ ಇದೇ ಗತಿ. ಮನೆಗಳಿಗೆ ನೀರು ನುಗ್ಗುತ್ತದೆ. ತಗ್ಗುಪ್ರದೇಶದಲ್ಲಿ ಬಡಾವಣೆ ನಿರ್ಮಿಸಿರುವುದು ಇದಕ್ಕೆ ಪ್ರಮುಖ ಕಾರಣ.
ನಮ್ಮ ಸಮಸ್ಯೆ ಕೇಳೋದು ಯಾರೂ ಇಲ್ಲ
ಮಳೆ ನೀರು ನಿಯಂತ್ರಣಕ್ಕೆ ಶಾಶ್ವತ ಪರಿಹಾರದ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಿಲ್ಲ. ನಗರಸಭೆ ಅಧಿಕಾರಿಗಳು ಟ್ಯಾಕ್ಸ್ ಕಟ್ಟಿಸಿಕೊಳ್ಳುತ್ತಾರೆ. ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರೆ ಬಡಾವಣೆ ಬಫರ್ ಜೋನ್ನಲ್ಲಿದೆ ಎನ್ನುತ್ತಾರೆ. ಆದ್ರೆ ಬಡಾವಣೆ ವಾಸಿಗಳ ಗೋಳು ಕೇಳುವವರು ಯಾರೂ ಇಲ್ಲ ಎಂದು ಸ್ಥಳೀಯ ನಿವಾಸಿಗಳಾದ ಗಂಗಾಧರ್ ಬೇಸರ ವ್ಯಕ್ತಪಡಿಸಿದ್ದಾರೆ.
ಡ್ಯಾಡಿಸ್ ಬಡವಾಣೆ ಜಲಾವೃತ
ಇನ್ನೂ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ರಘು ನಂದನ್, ತಹಶೀಲ್ದಾರ್ ದಿನೇಶ್, ನಗರಸಭೆ ಕಮಿಷನರ್ ಶ್ವೇತಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ಡ್ಯಾಡಿಸ್ ಬಡಾವಣೆ ಕಮ್ಮಸಂದ್ರ ಮತ್ತು ಬೊಮ್ಮಸಂದ್ರ ಕೆರೆ ಕೊಡಿ ಹರಿದಿರುವುದರಿಂದ ಜಲಾವೃತವಾಗಿದೆ.
ಇದನ್ನೂ ಓದಿ: Karnataka Rain: ಪ್ರವಾಹದಿಂದ ಬೆಳೆ ಹಾನಿಯಾಗಿದ್ಯಾ? ಹೀಗೆ ಮಾಡಿ ಕೇಂದ್ರ ಸರ್ಕಾರದಿಂದ ನಷ್ಟ ತುಂಬಿಕೊಳ್ಳಿ!
ಈ ಬಡಾವಣೆ ತಗ್ಗುಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಬಫರ್ ಝೋನ್ನಲ್ಲೂ ಬಡಾವಣೆ ನಿರ್ಮಾಣವಾಗಿ ಮನೆಗಳನ್ನು ಕಟ್ಟಿ ಜನ ವಾಸ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಾಗಿದ್ದು, ರಾಜಕಾಲುವೆ, ಕೊಡಿ ಕಾಲುವೆಗಳು ತುಂಬಿ ಹರಿಯುತ್ತಿವೆ.
ಈಗಾಗಲೇ ಸಮಸ್ಯೆ ಬಗೆಹರಿಸಲು ಅಗತ್ಯ ಸೂಚನೆಗಳನ್ನು ತಹಶೀಲ್ದಾರ್ ಮತ್ತು ತಂಡಕ್ಕೆ ನೀಡಲಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ರಘುನಂಧನ್ ತಿಳಿಸಿದ್ದಾರೆ.
ದಿ ಕಂಟ್ರಿಸೈಡ್ ಲೇಔಟ್ಗೆ ರಾಜಕಾಲುವೆಯ ನೀರು
ಸರ್ಜಾಪುರ ರಸ್ತೆಯ ದಿ ಕಂಟ್ರಿಸೈಡ್ ಲೇಔಟ್ಗೆ ರಾಜಕಾಲುವೆಯ ನೀರು ನುಗ್ಗಿದೆ. ಈ ಲೇಔಟ್ನಲ್ಲಿ ಸುಮಾರು 35 ಮನೆಗಳಿವೆ. ಮೊದಲ ಮಹಡಿಯಷ್ಟು ಮನೆಗಳು ಜಲಾವೃತಗೊಂಡಿದ್ರೆ, ಮನೆ ಮುಂಭಾಗ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ. ಹೆಚ್ಎಎಲ್ ಬಳಿಯಲ್ಲಿ ಕಾಳಪ್ಪ ಲೇಔಟ್ನಲ್ಲಿರುವ ಸುಮಾರು 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಲೇಔಟ್ನಲ್ಲಿರುವ ಎಲ್ಲಾ ರಸ್ತೆಗಳು ಜಲಾವೃತಗೊಂಡಿದ್ದು, ಜನರು ಜಲದಿಗ್ಬಂಧನದಲ್ಲಿದ್ದಾರೆ. ಮನೆ ಮುಂಭಾಗ ನಿಲ್ಲಿಸಿದ ಕಾರ್, ಬೈಕ್ಗಳು ಜಲಾವೃತಗೊಂಡಿವೆ.
ಇದನ್ನೂ ಓದಿ: Bengaluru Rains: ಬಿಜೆಪಿ ಪ್ರಣಾಳಿಕೆಯ ಭರವಸೆಗಳು ಆಕರ್ಷಕ, ಮನಮೋಹಕ, ಆಡಳಿತ ಯಾತನಾದಾಯಕ; ಕಾಂಗ್ರೆಸ್ ವಾಗ್ದಾಳಿ
ಮನೆಯಿಂದ ಆಸ್ಪತ್ರೆಗೆ ಹೋಗಲಾಗದೇ ವ್ಯಕ್ತಿ ಸಾವು
ಮಳೆ ಬಂದಾಗಲೆಲ್ಲಾ ರೇನ್ಬೋ ಲೇಔಟ್ ಜನರ ಸ್ಥಿತಿ ಹೇಳತೀರದು. ಆಗಸ್ಟ್ 30ರಂದು ಬಂದ ಮಳೆಯ ಪರಿಣಾಮವಾಗಿ ಸರ್ಜಾಪುರ ರಸ್ತೆಯ ರೇನ್ಬೋ ಡ್ರೈವ್ನ ನಿವಾಸಿಯೊಬ್ಬರು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಸಾವನ್ನಪ್ಪಿದ್ದರು. ಇನ್ನೂ ಆಗಸ್ಟ್ 3 ರಂದು ಇಂತಹದ್ದೇ ಘಟನೆ ನಡೆದಿದ್ದು ಭಾರಿ ಮಳೆಯಿಂದಾಗಿ ಜನರು ತಮ್ಮ ಮನೆಯಿಂದ ಹೊರಬರಲು ಕಚೇರಿಗಳು ಮತ್ತು ಶಾಲೆಗಳನ್ನು ತಲುಪಲು ಟ್ರ್ಯಾಕ್ಟರ್ಗಳನ್ನು ಬಳಸಬೇಕಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ