ಬೆಂಗಳೂರು(ಅಕ್ಟೋಬರ್. 24) : ವರುಣಾಘಾತಕ್ಕೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಸಣ್ಣಮಳೆಗೆ ಬಸವಳಿಯುವ ಬೆಂಗಳೂರು ದೊಡ್ಡ ಮಳೆಗೆ ಹೊಸಕೆರೆಹಳ್ಳಿ ಹಿಂದೆಂದೂ ಕಾಣದ ದುಸ್ಥಿತಿಗೆ ತಲುಪಿದೆ. ಮನೆಯಲ್ಲೆಲ್ಲ ವಿಜಯ ದಶಮಿಯ ಹಬ್ಬದ ಕಳೆ ಮಾಯವಾಗಿ ಬದುಕಿದ್ದೇ ದೊಡ್ಡ ಪವಾಡ ಎಂಬಂತಾಗಿ ಹೋಗಿದೆ. ನ್ಯೂಸ್ 18 ನಿರಂತರ ವರದಿಗೆ ಕೊನೆಗೂ ಬಿಬಿಎಂಪಿ ಎಚ್ಚೆತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ವರುಣಾಘಾತಕ್ಕೆ ಹೊಸಕೆರೆಹಳ್ಳಿ ನಿವಾಸಿಗಳು ಇನ್ನೂ ಸುಧಾರಿಸಿಕೊಂಡಿಲ್ಲ. ಧಾರಾಕಾರವಾಗಿ ಸುರಿದ ಮಳೆ ಎಫೆಕ್ಟ್ ಕೇವಲ 10 ನಿಮಿಷದಲ್ಲಿ ತಗ್ಗುಪ್ರದೇಶ ಹೊಸಕೆರೆಹಳ್ಳಿ ಏರಿಯಾ ಸಂಪೂರ್ಣ ಜಲಾವೃತವಾಗಿತ್ತು. 250ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ರಾತ್ರಿಯಿಡೀ ಕರೆಂಟ್ ಇಲ್ಲದೆ ಪರದಾಡಿದರು. ಮಳೆ ನಿಂತರೂ ಮನೆ ಮುಂದೆ ಕೆಸರುಗದ್ದೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯೊಳಗೆ ನೀರು ತೆಗೆಯಲು ಕಷ್ಟವಾಗುತ್ತಿತ್ತು. ಇಷ್ಟೆಲ್ಲ ಆದರೂ ಬಿಬಿಎಂಪಿ ಮಾತ್ರ ಗಡದ್ದು ನಿದ್ರೆಯಲ್ಲಿತ್ತು. ಈ ಕುರಿತು ನ್ಯೂಸ್ 18 ನಿರಂತರ ವರದಿಗೆ ಎಚ್ಚೆತ್ತ ಬಿಬಿಎಂಪಿ ಕೊನೆಗೂ ಸಂತ್ರಸ್ಥರಿಗೆ ಟಿಫನ್ ವ್ಯವಸ್ಥೆ ಹಾಗೂ ಶುಚಿಗೊಳಿಸುವ ಕಾರ್ಯಕ್ಕೆ ಪೌರಕಾರ್ಮಿಕರ ದಂಡು ಸಿಬ್ಬಂದಿಗಳ ಸಮೇತ ಆಗಮಿಸಿ ಶುಚಿಗೊಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಬೆಂಗಳೂರು ಮಹಾಮಳೆ ಎಫೆಕ್ಟ್ ಹೊಸಕೆರೆಹಳ್ಳಿಯಲ್ಲಿ ಪ್ರವಾಹದ ಪರಿಸ್ಥಿತಿಯಲ್ಲಿ ದತ್ತಾತ್ರಯ ನಗರ 4ನೇ ಮೇನ್ ರಸ್ತೆಯ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ರಸ್ತೆ ಮೇಲೆ ಪ್ರವಾಹದ ಮಳೆನೀರಿನಲ್ಲಿ ವಸ್ತುಗಳು ತೇಲಿಹೋಗುತ್ತಿವೆ. ಅದನ್ನು ಹಿಡಿಯಲು ಜನರು ಪ್ರಯತ್ನಿಸುತ್ತಿದ್ದರು. ಕುತ್ತಿಗೆ ಮಟ್ಟದ ಮಳೆನೀರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೋ ಹಿಡಿಯಲು ಪ್ರಯತ್ನ ಮಾಡುತ್ತಿದ್ದರು. ಆಟೋದೊಂದಿಗೆ ತೇಲಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ಇನ್ನು ಮನೆಯೊಳಗೆ ನೀರು ನುಗ್ಗಿದ ಹಿನ್ನೆಲೆ ಪುಟ್ಟ ಕಂದಮ್ಮನೊಂದಿಗೆ ನಾಲ್ವರು ಮಹಿಳೆಯರು ಪಕ್ಕದ ಮೊದಲ ಮಹಡಿಯ ಮನೆಗೆ ಒಬ್ಬರಿಗೊಬ್ಬರು ಕೈ ಹಿಡಿದು ನೀರಿನಲ್ಲಿ ತೋಯಿಸಿಕೊಂಡು ಬೇರೆಡೆ ತೆರಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ರಣರೋಚಕ ಸಾಹಸವನ್ನು ನ್ಯೂಸ್ 18 ವಿವರಿಸುತ್ತ ಬಿಬಿಎಂಪಿ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ :
ಕಲಬುರ್ಗಿಯಲ್ಲಿ ಪ್ರವಾಹಕ್ಕೆ 1.40 ಲಕ್ಷ ಹೆಕ್ಟೇರ್ ಬೆಳೆ ಹಾನಿ ; ಹಿಂಗಾರು ಬಿತ್ತನೆ ಮಾಡಲಾಗದೆ ಅಸಹಾಯಕತೆ
ಬೆಂಗಳೂರು ಮಹಾಮಳೆ ಅವಾಂತರ ಸೃಷ್ಟಿಗೆ ಖುದ್ದು ಸಿಎಂ ಬಿಎಸ್ ವೈ ಸಿಟಿ ರೌಂಡ್ಸ್ ಮಾಡಿ ಹೊಸಕೆರೆಹಳ್ಳಿ ಅನಾಹುತವನ್ನು ಅರ್ಥ ಮಾಡಿಕೊಂಡರು. ಮನೆಗೆ 25 ಸಾವಿರ ಪರಿಹಾರ ಚೆಕ್ ವಿತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಕೇವಲ ಹೊಸಕೆರೆಹಳ್ಳಿ ಮಾತ್ರವಲ್ಲ ಬೆಂಗಳೂರಿನ ಬೊಮ್ಮನಹಳ್ಳಿ, ಆರ್ ಆರ್ ನಗರ ಸೇರಿದಂತೆ ಹಲವೆಡೆ ಮಳೆಹಾನಿಯಾಗಿದ್ದು, ಇನ್ನೆರಡು ದಿನಗಳ ಯೆಲ್ಲೊ ಅಲರ್ಟ್ಗೆ ಬಿಬಿಎಂಪಿ ಇನ್ನೂ ಸಿದ್ಧಗೊಳ್ಳಬೇಕಿದೆ.
ಬೆಂಗಳೂರಲ್ಲಿ ಸುರಿದಿದ್ದು ಎರಡು ಗಂಟೆ ಮಳೆ ಆದರೂ ಮಳೆ ಸುರಿದ ಪ್ರಮಾಣ ಜಾಸ್ತಿಎಲ್ಲೆಲ್ಲಿ ಎಷ್ಟೆಷ್ಟು ಮಳೆ ಆಗಿದೆ ಗೊತ್ತಾ..?
ಬೆಂಗಳೂರು ದಕ್ಷಿಣ ಹಾಗೂ ಆರ್.ಆರ್ ನಗರ ವಲಯದಲ್ಲೇ ಹೆಚ್ಚು ಮಳೆ ಕೆಲ ಪ್ರದೇಶಗಳಲ್ಲಿ 100 ಮಿಲಿ ಮೀಟರ್ ಗೂ ಹೆಚ್ಚು ಮಳೆ ಸುರಿದಿದೆ. ಆರ್.ಆರ್ ನಗರ 109 ಮಿಲಿ ಮೀಟರ್ ಮಳೆ, ಹೆಮ್ಮಿಗೆಪುರ 107 ಮಿಲಿ ಮೀಟರ್ ಮಳೆ, ಕೆಂಗೇರಿ 109 ಮಿಲಿ ಮೀಟರ್ ಮಳೆ, ಉಲ್ಲಾಳ 105 ಮಿಲಿ ಮೀಟರ್ ಮಳೆ, ವಿದ್ಯಾಪೀಠ 97 ಮಿಲಿ ಮೀಟರ್ ಮಳೆ, ಹೊಸಕೆರೆಹಳ್ಳಿ 96.5 ಮಿಲಿ ಮೀಟರ್ ಮಳೆ, ಉತ್ತರಹಳ್ಳಿ 90 ಮಿಲಿ ಮೀಟರ್ ಮಳೆ, ಕೋಣನಕುಂಟೆ 85 ಮಿಲಿ ಮೀಟರ್ ಮಳೆ, ಬಸವನಗುಡಿ, ಗವಿಗಂಗಾಧರೇಶ್ವರ ದೇವಸ್ಥಾನ 81.5 ಮಿಲಿ ಮೀಟರ್ ಮಳೆ, ಶಾಖಾಂಬರಿ ನಗರ 81 ಮಿಲಿ ಮೀಟರ್ ಮಳೆ, ಕುಮಾರಸ್ವಾಮಿ ಲೇಔಟ್ 81 ಮಿಲಿ ಮೀಟರ್ ಮಳೆ, ಜಯನಗರ 72 ಮಿಲಿ ಮೀಟರ್ ಮಳೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ