ಕೊಡಗು: ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಅಬ್ಬರ ಮತ್ತೆ ಜೋರಾಗಿದೆ. ಆಗಸ್ಟ್ 1ರಿಂದಲೂ ಕೊಡಗು (Kodagu) ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು (Heavy rain), ಹಲವೆಡೆ ಅಪಘಡಗಳು ಸಂಭವಿಸಿವೆ. ಮಡಿಕೇರಿ (Madikeri) ತಾಲ್ಲೂಕಿನ ಭಾಗಮಂಡಲ, ಕರಿಕೆ ರಸ್ತೆಯಲ್ಲಿ ಹಾಗೂ ಸಂಪಾಜೆ ಸಮೀಪದ ಕಲ್ಲಾಳ ಭೂಕುಸಿತವಾಗಿದೆ. ಭಾರೀ ಮಳೆಗೆ ಚೆಟ್ಟಿಮಾನಿ, ಮರ್ಪಡ್ಕ ಗ್ರಾಮಗಳ ಸೇತುವೆಗಳು (Bridge) ಕೊಚ್ಚಿ ಹೋಗಿವೆ. ಮಡಿಕೇರಿ ತಾಲೂಕಿನ ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ. ಚೆಂಬು, ಗೂನಡ್ಕ ದಬ್ಬಡ್ಕ ಈ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಿಯ ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕೊಚ್ಚಿ ಹೋದ ಸೇತುವೆಗಳು
ರಭಸವಾಗಿ ಹರಿಯುತ್ತಿರುವ ನೀರಿಗೆ ಕಲ್ಲುಗುಂಡಿ, ಚೆಟ್ಟಿಮಾನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಸೇತುವೆಯ ಎರಡು ಭಾಗಗಳಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ ಚೆಟ್ಟಿಮಾನಿಯ 60 ಕುಟುಂಬಗಳ ಜನರು ಸುಮಾರು 13 ಕಿಲೋ ಮೀಟರ್ ನಡೆದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಬಹುತೇಕ ಕೊಚ್ಚಿ ಹೋಗಿರುವುದರಿಂದ ಸೇತುವೆಯಿಂದ ಆಚೆಗೆ ಇರುವ ವಾಹನಗಳು ಅತ್ತಕಡೆಯೇ ಇದ್ದರೆ, ಸೇತುವೆಯಿಂದ ಈಚೆಗೆ ಇರುವ ವಾಹನಗಳು ಈಚೆಯೇ ಉಳಿಯುವಂತಾಗಿದೆ.
ಸೇತುವೆ ದುರಸ್ತಿ ಮಾಡುತ್ತಿರುವ ಜನರು
ಸದ್ಯ ಸೇತುವೆಯ ಮಣ್ಣು ಕೊಚ್ಚಿ ಹೋಗಿರುವ ಭಾಗಕ್ಕೆ ಜನರು ಮರದ ಪಾಲನ್ನು ಅಳವಡಿಸಿ ಅದರ ಮೇಲೆ ನಡೆದಾಡುತ್ತಿದ್ದಾರೆ. ಸೇತುವೆಗೆ ಸಣ್ಣ ಪೈಪುಗಳ ನಅಳವ ಡಿಸಿರುವುದರಿಂದಲೇ ಸೇತುವೆ ಈ ಸ್ಥಿತಿಗೆ ತಲುಪಲು ಕಾರಣ ಎಂದು ಸ್ಥಳೀಯರಾದ ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rain Alert: ಚಿಕ್ಕಮಗಳೂರಲ್ಲಿ ಮೂರು ದಿನ ಭಾರೀ ಮಳೆ; ಒಂದು ದಿನ ರೆಡ್, ಎರಡು ಆರೆಂಜ್ ಅಲರ್ಟ್ ಘೋಷಣೆ
ಹಲವೆಡೆ ಭೂ ಕುಸಿತ
ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಪಡ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾಗಮಂಡಲ ಕರಿಕೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ. ಭಾಗಮಂಡಲದಿಂದ 10 ಕಿಲೋ ಮೀಟರ್ ದೂರದಲ್ಲಿ ಭೂಕುಸಿವಾಗಿದ್ದು ಗುರುವಾರ ಇಡೀ ದಿನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬೆಟ್ಟದ ಮೇಲ್ಭಾಗದಲ್ಲಿ ಭಾರೀ ಭೂಕುಸಿತವಾಗಿದ್ದು, ಬೃಹತ್ ಗಾತ್ರದ ಬಂಡೆ, ಮರಗಳು ರಸ್ತೆಗೆ ಉರುಳಿದ್ದವು.
ಭಾಗಮಂಡಲ ಮತ್ತು ಕರಿಕೆ ಎರಡು ಭಾಗಗಳಿಂದಲೂ ಎರಡು ಜೆಸಿಬಿಗಳನ್ನು ಬಳಸಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಇಡೀ ದಿನ ಮಣ್ಣು ತೆರವುಗೊಳಿಸಲು ಪ್ರಯತ್ನಿಸಿದ್ದರು. ಆದರೆ ಬೆಟ್ಟದ ಮೇಲ್ಭಾಗದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಮತ್ತು ದೊಡ್ಡ ದೊಡ್ಡ ಬಂಡೆಗಳೇ ಉರುಳಿ ಬಿದ್ದಿದ್ದರಿಂದ ಎಲ್ಲವನ್ನು ತೆರವುಗೊಳಿಸಿ ಸಂಜೆ ವೇಳೆಗೆ ವಾಹನಗಳ ಸಂಚಾರಕ್ಕೆ ರಸ್ತೆ ಸುಗಮ ಮಾಡಿ ಕಡಲಾಯಿತು.
ಮನೆ ಬಳಿಯೇ ಭೂ ಕುಸಿತ
ಇನ್ನು ಸಂಪಾಜೆ ಸಮೀಪದ ಕಲ್ಲಾಳದ ಗಣಪತಿ ಎಂಬುವರ ಮನೆ ಬಳಿಯೂ ಭೂಕುಸಿತವಾಗಿದೆ. ಬೃಹತ್ ಘಾತ್ರದ ಬಂಡೆಗಳೇ ಬೆಟ್ಟದ ಮೇಲಿನಂದ ಉರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಆದರೆ ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ಬಿದ್ದಿರುವುದರಿಂದ ರಸ್ತೆ ಬಂದಾಗಿ ಓಡಾಟಕ್ಕೆ ಸಮಸ್ಯೆ ಎದುರಿಸುವಂತಾಗಿತ್ತು.
ಇದನ್ನೂ ಓದಿ: Karnataka Rains: ಮನೆಯಿಂದ ಹೊರ ಹೋಗುವ ಮುನ್ನಎಚ್ಚರ; ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಗೊತ್ತಾ?
ಇನ್ನು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8.30 ರವರೆಗೆ 115.6 ಮಿಲಿ ಮೀಟರ್ ನಿಂದ 204 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ