ಕೋಲಾರ: ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿದ್ದಾಗ, ಶಂಕಿತ ರೋಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿಯಿಲ್ಲದೆ, ಒಳಗೆ ಹೋಗಿ ಕ್ಷಣದಲ್ಲೇ ವಾಪಸ್ಸಾದ ಘಟನೆ ನಡೆದಿದೆ.
ಕೋಲಾರದಲ್ಲಿ ಕೊರೋನಾ ಸೋಂಕು ಹರಡದ ಸಂಬಂಧ ಹಾಗೂ ರೋಗದ ಕುರಿತು ತೆಗೆದುಕೊಂಡಿವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಆರೋಗ್ಯ ಸಚಿವ ಶ್ರೀರಾಮುಲು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಜಿಲ್ಲೆಯಲ್ಲಿ ಮಾರಕ ಕಾಯಿಲೆ ಹರಡದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಜಿಲ್ಲೆಯಲ್ಲಿ ಕೊರೋನಾ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆ ಮತ್ತು ಬೆಡ್ ಮತ್ತು ವೆಂಟಿಲೇಟರ್ ಹಾಗೂ ಸಿಬ್ಬಂದಿ ಸಂಬಂಧ ಚರ್ಚೆ ನಡೆಸಿದರು. ಬಳಿಕ ಕೋಲಾರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ಕೊರೋನಾ ಐಸೋಲೇಷನ್ ವಿಶೇಷ ವಾರ್ಡ್ ಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಕೆಲ ಕ್ಷಣದಲ್ಲೇ ವಾಪಸ್ಸಾದರು.
ಐಸೋಲೇಷನ್ ವಾರ್ಡ್ನಲ್ಲಿ ಶಂಕಿತ ಕೊರೋನಾ ರೋಗಿಯಿರುವ ಮಾಹಿತಿಯಿಲ್ಲದೆ ತೆರಳಿದಾಗ ಸಚಿವರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಮುಂಜಾಗ್ರತಾ ವ್ಯವಸ್ಥೆ ಇಲ್ಲದ ಕಾರಣ ಕ್ಷಣದಲ್ಲೇ ಅಲ್ಲಿಂದ ವಾಪಸ್ಸಾಗಿದ್ದಾರೆ.
ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಡಿಸಿ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಸಚಿವ ರಾಮುಲು ಹಾಗೂ ಎಚ್. ನಾಗೇಶ್, ಎಸ್. ಮುನಿಸ್ವಾಮಿ ಅವರು ಕೋಲಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಕೊರೋನಾ ಸೋಂಕಿನ ಐಸೋಲೇಷನ್ ವಾರ್ಡ್ ಗೆ ಭೇಟಿ ನೀಡಿದ್ದರು. ಈ ವೇಳೆ ಒಳಗೆ ಹೋದ ಸಚಿವ ಶ್ರೀರಾಮುಲು ಐಸೋಲೇಷನ್ ವಾರ್ಡ್ನಲ್ಲಿ ನಿಗಾದಲ್ಲಿದ್ದ ಆಂಧ್ರ ಮೂಲದ ಶಂಕಿತ ಕೊರೋನಾ ರೋಗಿಯನ್ನು ನೋಡಿ ಗಾಬರಿಗೊಂಡಿದ್ದಾರೆ. ಬಳಿಕ ಅಲ್ಲಿಂದ ಕ್ಷಣಾರ್ಧದಲ್ಲೇ ವಾಪಸ್ಸಾಗಿದ್ದಾರೆ.
ಆಂದ್ರ ಮೂಲದ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ವರದಿಯಲ್ಲಿ ಯಾವುದೇ ಲಕ್ಷಣಗಳು ಈವರೆಗೆ ಪತ್ತೆಯಾಗಿಲ್ಲ. ಆದರೆ ರೋಗಿ ಒಳಗಿದ್ದ ವೇಳೆ ಕೇವಲ ಮಾಸ್ಕ್ ಧರಿಸಿ, ಇನ್ಯಾವುದೆ ಮುಂಜಾಗ್ರತೆ ಇಲ್ಲದೆ ಕಾರಣ ಸಚಿವರು ಕೆಲ ಸೆಕೆಂಡ್ಗಳಲ್ಲೇ ವಾಪಸ್ ಬಂದಿದ್ದಾರೆ. ಬಳಿಕ ಸಂಸದ ಎಸ್ ಮುನಿಸ್ವಾಮಿ, ಸಚಿವ ನಾಗೇಶ್ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮ ರೋಗಿಯಿರುವ ಮಾಹಿತಿ ನೀಡದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ