news18-kannada Updated:February 25, 2020, 3:00 PM IST
ಪ್ರಶಾಂತ್ ಕಿಶೋರ್-ಹೆಚ್.ಡಿ. ಕುಮಾರಸ್ವಾಮಿ.
ಬೆಂಗಳೂರು (ಫೆಬ್ರವರಿ 25); ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ರಣತಂತ್ರ ಹೆಣೆಯಲಿದ್ದಾರೆ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಿಂದ ಉಚ್ಛಾಟನೆಯಾದ ನಂತರ ಪ್ರಶಾಂತ್ ಕಿಶೋರ್ ಕರ್ನಾಟಕದಲ್ಲಿ ಜೆಡಿಎಸ್ ಪರ ಕೆಲಸ ಮಾಡಲಿದ್ದಾರೆ. ಕುಮಾರಸ್ವಾಮಿ ಈ ಕುರಿತು ಅವರ ಬಳಿ ಮಾತುಕತೆ ನಡೆಸಿದ್ದಾರೆ ಎಂಬ ಅಂತೆಕಂತೆಗಳು ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಓಡಾಡುತ್ತಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೂ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್ಡಿಕೆ, “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಚುನಾವಣಾ ರಣತಂತ್ರ ಹೆಣೆಯುವಂತೆ ಪ್ರಶಾಂತ್ ಕಿಶೋರ್ ಜೊತೆಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ. ಈ ಚರ್ಚೆ ಫಲ ನೀಡಿದರೆ, 2023ರ ವೇಳೆಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಜೆಡಿಎಸ್ ಪರ ಚುನಾವಣೆಯಲ್ಲಿ ಕೆಲಸ ಮಾಡುವುದು ಬಹುತೇಕ ಖಚಿತ” ಎಂದು ತಿಳಿಸಿದ್ದಾರೆ.
'ಐ-ಪ್ಯಾಕ್' ಎಂಬ ಖಾಸಗಿ ಚುನಾವಣಾ ಪ್ರಚಾರ ಸಂಸ್ಥೆಯನ್ನು ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಈ ಹಿಂದೆ 2014 ಮತ್ತು 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಪರಿಣಾಮ ಬಿಜೆಪಿ ಈ ಎರಡೂ ಚುನಾವಣೆಯಲ್ಲಿ ಅಖಂಡ ಗೆಲುವು ಸಾಧಿಸಿತ್ತು. ಕಳೆದ ದೆಹಲಿ ಚುನಾವಣೆಯಲ್ಲೂ ಸಹ ಪ್ರಶಾಂತ್ ಕಿಶೋರ್ ಅವರ ಐ ಪ್ಯಾಕ್ ಸಂಸ್ಥೆ ಆಮ್ ಆದ್ಮಿ ಪಕ್ಷದ ಪರ ಕೆಲಸ ಮಾಡುವ ಮೂಲಕ ಎಎಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು
ಇದನ್ನೂ ಓದಿ : ಸೂಪರ್ ಸಿಎಂ ಯಾರೂ ಇಲ್ಲ; ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ವಿ ಸೋಮಣ್ಣ
First published:
February 25, 2020, 3:00 PM IST