ಬೆಂಗಳೂರು: ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಡವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸಹಾಯಧನದ ವಿಷಯವಾಗಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರ ಘೋಷಿಸಿರುವ ಪ್ಯಾಕೇಜ್ ಯಾವುದಕ್ಕೂ ಹಾಗೂ ಯಾರಿಗೂ ಸಾಲುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜನಹಿತದ ಲಾಕ್ಡೌನ್ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್ ಇರಬೇಕು ಎಂಬ ಜೆಡಿಎಸ್ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್ ಅತ್ಯಂತ ಕಡಿಮೆ. ಇದು ಅವೈಜ್ಞಾನಿ, ಅಸಮರ್ಪಕ. ಲಾಕ್ಡೌನ್ ಮಾಡಿ ಎಂದು ನಾನು ಮಾರ್ಚ್ನಲ್ಲೇ ಹೇಳಿದ್ದೆ. ಆದರೆ, ಘೋಷಿಸಲಿಲ್ಲ. ನೆರೆಯ ಕೇರಳದಲ್ಲಿ ಮಾರ್ಚ್ನಲ್ಲೇ ಲಾಕ್ಡೌನ್ ಜಾರಿಯಾಯಿತು. 20,000 ಕೋಟಿ ಪ್ಯಾಕೇಜ್ಅನ್ನೂ ಘೋಷಿಸಲಾಯಿತು. ಕರ್ನಾಕಟದ ಎದುರು ಕೇರಳ ಎಲ್ಲ ದೃಷ್ಟಿಯಿಂದಲೂ ಸಣ್ಣ ರಾಜ್ಯ. ಆದರೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಈ 1200 ಕೋಟಿ ಪರಿಹಾರ ಸಾಕೆ? ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಆರ್ಥಿಕ ಸಂಕಷ್ಟದ ಮಧ್ಯೆ ಪ್ಯಾಕೇಜ್ ನೀಡುತ್ತಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ನನ್ನಿಂದ ಅಧಿಕಾರ ಕಸಿದಾಗ ಇದೇ ಬಿಎಸ್ವೈ ಅವರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. 2 ವರ್ಷದಲ್ಲಿ ಆರ್ಥಿಕ ದುಸ್ಥಿತಿ ಬಂದಿದ್ದು ಹೇಗೆ? ರಾಜಕೀಯಕ್ಕಾಗಿ ಮಾಡಿಕೊಂಡ ನಿಗಮಗಳಿಗೆ ನೂರಾರು ಕೋಟಿ ಹಣವಿರುವಾಗ ಜನರ ಪರಿಹಾರಕ್ಕಿಲ್ಲವೇ? ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಬಿಎಸ್ವೈ ಮಾತು ಒಪ್ಪೋಣ. ಆದರೆ, ನಿಗಮ-ಮಂಡಳಿಗಳಿಗೆ ಅನಗತ್ಯವಾಗಿ ತುಂಬಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ? ಜನರೇ ನೀಡಿದ ಹಣವನ್ನು ಜನರಿಗೆ ನೀಡಲು ಮಾತ್ರ ಸಂಕಷ್ಟ ಎದುರಾಗಿದೆಯೇ? ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೆಪದಲ್ಲಿ ನೀಡುತ್ತಿರುವುದು ಜನರ ಹಣವಲ್ಲವೇ? ಎಂದು ಸರ್ಕಾರ ಹಾಗೂ ಯಡಿಯೂರಪ್ಪ ವಿರುದ್ಧ ಎಚ್ಡಿಕೆ ಹರಿಹಾಯ್ದಿದ್ದಾರೆ.
ಜನಹಿತದ ಲಾಕ್ಡೌನ್ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್ ಇರಬೇಕು ಎಂಬ ಜೆಡಿಎಸ್ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್ ಅತ್ಯಂತ ಕಡಿಮೆ. ಇದು ಅವೈಜ್ಞಾನಿ, ಅಸಮರ್ಪಕ.
1/9
— H D Kumaraswamy (@hd_kumaraswamy) May 19, 2021
ಪ್ಯಾಕೇಜ್ನಲ್ಲಿ ಕೃಷಿ ರಂಗವನ್ನು ಹೂ ಬೆಳೆಗಾರರು, ಹಣ್ಣು-ತರಕಾರಿ ಬೆಳೆಗಾರರೆಂದು ಪ್ರತ್ಯೇಕಿಸಲಾಗಿದೆ. ಅತ್ಯಂತ ಅವೈಜ್ಞಾನಿಕ ಕ್ರಮವಿದು. ಒಟ್ಟು ಕೃಷಿ ಕ್ಷೇತ್ರ, ಒಟ್ಟು ರೈತ ಸಮುದಾಯ ಎಂಬ ಪರಿಕಲ್ಪನೆಯೇ ಇಲ್ಲಿಲ್ಲ. ಕೃಷಿ ಕ್ಷೇತ್ರದ ಇತರೆ ಕಸುಬುದಾರರನ್ನು ಪ್ಯಾಕೇಜ್ನಿಂದ ಹೊರಗಿಟ್ಟಿದ್ದು ಯಾಕೆ? ಪ್ಯಾಕೇಜ್ ಹಿಗ್ಗುತ್ತದೆ ಎಂಬ ಭಯವೇ? 2.10 ಲಕ್ಷ ಚಾಲಕ ವರ್ಗಕ್ಕೆ 3000 ಪರಿಹಾರ ನೀಡುವುದಾಗಿ ಹೇಳಲಾಗಿದೆ. ಕಳೆದ ಬಾರಿಯ ಲಾಕ್ಡೌನ್ನಲ್ಲಿ 7.50ಲಕ್ಷ ಇದ್ದ ಚಾಲಕರ ಸಂಖ್ಯೆ ಈ ಬಾರಿ 2.10ಲಕ್ಷಕ್ಕೆ ಇಳಿದಿದೆ. ಚಾಲಕರಿಗೆ ಈಗ ಪರಿಹಾರಕ್ಕಿಂತಲೂ ಮುಖ್ಯವಾಗಿ, ಆರ್ಟಿಒ ಶುಲ್ಕಗಳು, ತೆರಿಗೆಯಿಂದ ವಿನಾಯಿತಿ ಸಿಗಬೇಕಿತ್ತು. ಈಗಿನ ಪರಿಹಾರದಿಂದ ಅವರ ಕುಟುಂಬ ನಡೆಯಲು ಸಾಧ್ಯವೇ? ಕೂಲಿ ಕಾರ್ಮಿಕರು ಸದ್ಯ ನಗರ ತೊರೆದು ಹಳ್ಳಿ ಸೇರಿದ್ದಾರೆ. ಅವರ ಅದಾಯ ವೃದ್ಧಿಗಾಗಿ ನರೇಗಾವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ನರೇಗಾಕ್ಕೆ ಹೆಚ್ಚಿನ ಅನುದಾನ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಹೆಚ್ಚಿಸಿ, ಕೂಲಿ ಕಾರ್ಮಿಕರ ಆದಾಯ ವೃದ್ಧಿಸಲು ಇದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆದೂರಾಲೋಚನೆಗಳೇ ಇಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ