ರಾಮನಗರ (ನ. 5): ರಾಮನಗರದ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಚೇಲಾಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವನ್ಯಾವನೋ ಎಂಪಿ ಇದ್ದಾನಲ್ಲ ಅವನ ಚೇಲಾಗಳು ಮರಳುಗಾರಿಕೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಸದ ಡಿಕೆ ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರಳು ದಂಧೆ ಮಾಡುವುದಾದರೆ ನನ್ನ ಹತ್ತಿರ ಬರಬೇಡಿ ಎಂದಿದ್ದೇನೆ. ನಮ್ಮವರು ಇದ್ದ ಲಾರಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಈಗ ದಂಧೆ ನಡೆಸುವವರೂ ಇವರೇ, ಜನರಿಂದ ಪ್ರತಿಭಟನೆ ಮಾಡಿಸುವವರೂ ಇವರೇ. ಈ ರಾಜಕಾರಣವೆಲ್ಲ ನನ್ನ ಬಳಿ ನಡೆಯೋದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಮರಳು ದಂಧೆ ಪ್ರಾರಂಭವಾಯ್ತು. ಅದನ್ನು ತಡೆಯಲು ನಾನು ಪ್ರಯತ್ನಪಟ್ಟರೂ ನಿಲ್ಲಿಸಲು ಆಗಲಿಲ್ಲ. ನಾನು ಶಾಸಕನಾಗಿದ್ದರೂ ಸರ್ಕಾರ ಅವರದ್ದು, ಆಟಗಳು ಅವರದ್ದೇ. ನನ್ನ ವಿರುದ್ಧ ಮಾತನಾಡುವವರು ನನ್ನ ಎದುರಿಗೆ ಬರಲಿ. ಅದಕ್ಕೆ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಕೆ ಸುರೇಶ್ ವಿರುದ್ಧ ಪರೋಕ್ಷವಾಗಿ ಹೆಚ್ಡಿ ಕುಮಾರಸ್ವಾಮಿ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ, ಮೋದಿಯನ್ನು ಬೈದರೆ ಸಿಎಂ ಆಗುತ್ತೇವೆ ಎಂಬುದು ಖರ್ಗೆ, ಡಿಕೆಶಿ ಭ್ರಮೆ; ರೇಣುಕಾಚಾರ್ಯ ಲೇವಡಿ
ಅನಿತಾ ಕುಮಾರಸ್ವಾಮಿ ಅವರ ವಿರುದ್ಧವೂ ಪ್ರತಿಭಟನೆ ಮಾಡಿಸಿದ್ದರು. ಅಲ್ಲಿ ನಾನೇ ಇದ್ದಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದೆ. ಅವರ ತೆವಲಿಗೆ ನಮ್ಮ ವಿರುದ್ಧ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ರಾಮನಗರದಲ್ಲಿ ಈ ರಾಜಕಾರಣ ನಡೆಯಲ್ಲ. ಅವರು ಬೇಕಿದ್ದರೆ ಬೇರೆ ಕಡೆ ಈ ರೀತಿಯ ರಾಜಕಾರಣ ಮಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಹೆಸರು ಬಳಸದೇ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
(ವರದಿ: ಎ.ಟಿ. ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ