ಬಳ್ಳಾರಿ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದೆಯೇ ಪೂರ್ವಭಾವಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಕಳೆದ ಹಲವು ಸಮಯಗಳಿಂದ ಜನ ಸಂಪರ್ಕದಲ್ಲಿರುವ ಎಚ್ಡಿ ಕುಮಾರಸ್ವಾಮಿ ಸದ್ಯ ಪಂಚರತ್ನ ರಥಯಾತ್ರೆಯ (Pancha Rathna Rathayatre) ಮೂಲಕ ಜನರ ನಾಡಿಮಿಡಿತವನ್ನು ಅರಿಯುವ ಜೊತೆಗೆ ಚುನಾವಣಾ ರಣತಂತ್ರಗಳನ್ನು (Election Strategy) ಹೂಡುತ್ತಿದ್ದಾರೆ.
ರಾಜಕಾರಣಿಗಳು ಜನರ ಮಧ್ಯೆ ಓಡಾಡೋವಾಗ ಜನರು ತಮ್ಮ ಕಷ್ಟಗಳನ್ನು ಜನಪ್ರತಿನಿಧಿಗಳೊಂದಿಗೆ ಹೇಳಿಕೊಳ್ಳುವ ಸಂದರ್ಭಗಳು ಆಗಾಗ ಎದುರಾಗುತ್ತಿರುತ್ತವೆ. ಅದರಂತೆಯೇ ಬಳ್ಳಾರಿಯಲ್ಲಿ ಪಂಚರತ್ನ ರಥಯಾತ್ರೆ ಜಾಥಾದಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಅಳಲನ್ನು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಜೊತೆಗೆ ಹೇಳಿಕೊಂಡ ಪ್ರಸಂಗ ನಡೆಯಿತು.
ಸಹಾಯಕ್ಕೆ ಕಣ್ಣೀರಿಟ್ಟ ಮಹಿಳೆ
ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮಹಿಳೆಯೊಬ್ಬರು ಎಚ್ಡಿ ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡರು. ‘ನನ್ನ ಗಂಡನಿಗೆ ಹುಷಾರಿಲ್ಲ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ದಯವಿಟ್ಟು ನನ್ನ ಪತಿಯನ್ನು ಬದುಕಿಸಿಕೊಡಿ ಎಂದು ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದ ಮಹಿಳೆ ಹನುಮಂತಮ್ಮ ಕಣ್ಣೀರಿಟ್ಟರು.
ಎಚ್ಡಿಕೆಯಿಂದ ಚಿಕಿತ್ಸೆಯ ಭರವಸೆ
ಮಹಿಳೆಯ ಮನದ ನೋವಿಗೆ ಸ್ಪಂದಿಸಿದ ಎಚ್ಡಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕದಂತೆ ಮಹಿಳೆಗೆ ಸಮಾಧಾನ ಮಾಡಿದರು. ಅಲ್ಲದೇ, ಆಯ್ತು ಹೆದರಬೇಡ. ನಿನ್ನ ಗಂಡನನ್ನು ಬೆಂಗಳೂರಿಗೆ ಕರೆದುಕೊಂಡು ಬಾ. ಅವರಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೇ ಜೇಬಿನಿಂದ ನೋಟುಗಳ ಕಂತೆ ತೆಗೆದು ಮಹಿಳೆಯ ಕೈಗೆ ಇಟ್ಟು ಪತಿಯನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದರು.
ಸಂಡೂರಿನಲ್ಲಿ ಅದ್ಧೂರಿ ಸ್ವಾಗತ
ಇನ್ನು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ತಲುಪುತ್ತಿದ್ದಂತೆ ಗ್ರಾಮಸ್ಥರು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿ ರಥಯಾತ್ರೆಯನ್ನು ಬರಮಾಡಿಕೊಂಡರು. ಗ್ರಾಮದ ಮುಖ್ಯರಸ್ತೆಯಲ್ಲಿ ಎಚ್ಡಿ ಕುಮಾರಸ್ವಾಮಿ ಅವರು ರೋಡ್ ಶೋ ಹಮ್ಮಿಕೊಂಡಿದ್ದು, ಕ್ಷೇತ್ರದ ಅಭ್ಯರ್ಥಿ ಎನ್. ಸೋಮಣ್ಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಕುಷ್ಟಗಿಯಲ್ಲಿ ಎಚ್ಡಿಕೆ ಹೇಳಿದ್ದೇನು?
ಕುಷ್ಟಗಿಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಕುಷ್ಟಗಿಯಲ್ಲಿ ಜೆಡಿಎಸ್ಗೆ ಬಲವಿಲ್ಲ ಎಂಬ ಮಾತಿದೆ. ಆದರೆ ಸ್ವಲ್ಪಮಟ್ಟಿಗೆ ಯಶಸ್ವಿ ಕಂಡಿದೆ. ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಬಗೆಹರಿದಿಲ್ಲ. ಬಯಲು ಬಹಿರ್ದೆಸೆ ಮುಕ್ತ ಪ್ರದೇಶವೆಂದು ಕಾಗದದಲ್ಲಿದೆ. ಆದರೆ ಬಯಲು ಶೌಚಾಲಯ ಮುಕ್ತವಾಗಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮೂಲಭೂತ ಸೌಲಭ್ಯಗಳು ಸಿಕ್ಕರೆ ಮಾತ್ರ ಹೆಸರು ಸಾರ್ಥಕವಾಗುತ್ತದೆ ಎಂದರು.
ಇನ್ನು, ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಗಣಿಗಾರಿಕೆಯಿಂದ ಹೂಳು ತುಂಬಿದೆ ಎಂದ ಎಚ್ಡಿಕೆ, ಬಿಜೆಪಿ ಹಾಗೂ ಕಾಂಗ್ರೆಸ್ನವರು ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಎಂದೂ ಸರಕಾರದ ಖಜಾನೆ ಹಣವನ್ನು ತಂದಿಲ್ಲ. ಈಗ ನಿತ್ಯ ಜನ ಸಂಕಷ್ಟ ಅನುಭವಿಸಿ ಸಹಾಯಕ್ಕೆ ಬರುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ನಿತ್ಯ ಕೋಟಿ ರೂಪಾಯಿ ಬೇಕಾಗಿದೆ. ನನಗೆ ನನ್ನ ತಂದೆಯಿಂದ ಕೇತಗನಹಳ್ಳಿಯಲ್ಲಿಯ ಭೂಮಿಯಲ್ಲಿ ತೆಂಗಿನಿಂದ ಆದಾಯ ಬರುತ್ತಿದೆ. ನಾನೇನು ಲೂಟಿ ಮಾಡಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ