ಬೆಂಗಳೂರು(ಮಾ. 09): ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧದ ಸಿಡಿ ಪ್ರಕರಣದ ಹಿಂದೆ ಒಬ್ಬ ಮಹಾನ್ ನಾಯಕ ಹಾಗೂ 2+3+4 ಜನರು ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಈ ಷಡ್ಯಂತ್ರದ ಹಿಂದಿರುವ ಈ ಜನರು ಯಾರು, ಬಾಂಬೆ ಟೀಮ್ನವರ ಕೆಲಸವಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಎರಡು ಎಂದರೆ ಇವರನ್ನ ಬಾಂಬೆ ಕರೆದುಕೊಂಡು ಹೋದವರಾ? ಮೂರು ಅಂದರೆ ಬಾಂಬೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟವರಾ? ನಾಲ್ಕು ಅಂದರೆ ಬಾಂಬೆಯಿಂದ ಇಲ್ಲಿಗೆ ಕರೆದುಕೊಂಡು ಬಂದವರಾ? ಎಂದು ಕುಮಾರಸ್ವಾಮಿ ಅವರು ಜಾರಕಿಹೊಳಿ ಮೇಲೆ ವ್ಯಂಗ್ಯಾಸ್ತ್ರದ ಪ್ರಶ್ನೆಗಳನ್ನ ಸುರಿಸಿದ್ದಾರೆ.
ಆರು ಮಂತ್ರಿಗಳು, ಮೇಧಾವಿಗಳು ಸಿಡಿ ಸುದ್ದಿ ವಿರುದ್ಧ ಕೋರ್ಟ್ನಲ್ಲಿ ಇಂಜಕ್ಷನ್ ತರಲು ಕೋರ್ಟ್ಗೆ ಹೋಗಿದ್ದಾರೆ. ಆತ್ಮವಿಶ್ವಾಸ ಇಲ್ಲದಿದ್ದರೆ ಮಾತ್ರ ಕೋರ್ಟ್ಗೆ ಹೋಗುತ್ತಾರೆ. ಯಾರು ಹೇಳಿದ್ದರು ತಡೆಯಾಜ್ಞೆ ತರಲು? ಬೇರೆ 18 ಸಚಿವರು ಯಾಕೆ ಇಂಜಂಕ್ಷನ್ ತೆಗೆದುಕೊಳ್ಳಲಿಲ್ಲ. ಈಗ ಬಾಂಬೆಗೆ ಹೋದವರು ತೆಗೆದುಕೊಳ್ಳುತ್ತಿದ್ದಾರೆ. ಬಾಂಬೆಗೆ ಕರೆದುಕೊಂಡು ಹೋದವರು ಈ ಕೆಲಸ ಮಾಡಿದರಾ? ಇಂಜಕ್ಷನ್ ತಂದ ಆರು ಸಚಿವರಿಗೆ ಸಚಿವರಿಗೆ ಈ 2+3+4 ಮಂದಿ ಯಾರು ಅಂತ ಗೊತ್ತಿರಬಹುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇದ್ದಿದ್ದರೆ ಇಂಜಂಕ್ಷನ್ ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಇದನ್ನೂ ಓದಿ: Ramesh Jarkiholi – ಬೆಂಗಳೂರಿನಲ್ಲಿ ಎರಡು ಕಡೆ ಷಡ್ಯಂತ್ರ; ಜೈಲಿಗೆ ಹಾಕಿಸುವವರೆಗೂ ಬಿಡಲ್ಲ: ರಮೇಶ್ ಜಾರಕಿಹೊಳಿ
ಈ ಆರು ಮಂತ್ರಿಗಳು ಪಾಪ ಅಮಾಯಕರು. ಆದರೆ ಅವರು ಮೇಧಾವಿಗಳು. ಇಂಥ ಸರ್ಕಾರ ತರಲು ಅವರು ಆ ಪಕ್ಷಕ್ಕೆ ಹೋಗಬೇಕಿತ್ತಾ? ನಮ್ಮ ಜೊತೆ ಇದ್ದುಕೊಂಡೇ ಮಂತ್ರಿ ಆಗಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ಬುದ್ಧಿಮಾತು ಹೇಳಿದ್ದಾರೆ.
ಬಾಂಬೆಯಲ್ಲಿ ಸಿಡಿ ಷಡ್ಯಂತ್ರ ನಡೆದಿರಬಹುದು ಎಂದು ಹೆಚ್ಡಿಕೆ ವ್ಯಕ್ತಪಡಿಸಿರುವ ಶಂಕೆಯನ್ನು ರಮೇಶ್ ಜಾರಕಿಹೊಳಿ ಇದೇ ವೇಳೆ ಅಲ್ಲಗಳೆದಿದ್ದಾರೆ. ಕುಮಾರಸ್ವಾಮಿ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ಧಾರೆ. ಆದರೆ, ಮುಂಬೈನಲ್ಲಿ ಈ ಕೆಲಸ ಮಾಡಲಾಗಿದೆ ಎನ್ನೋದು ಸುಳ್ಳು. ನಾನು ಮಂತ್ರಿಯಾದ ನಂತರ ಈ ಷಡ್ಯಂತ್ರ ನಡೆದಿದೆ. ಬೆಂಗಳೂರಿನಲ್ಲೇ ಈ ಪಿತೂರಿ ನಡೆದಿದೆ. ಕಾಂಗ್ರೆಸ್ಸಾಗಲೀ ಜೆಡಿಎಸ್ಸಾಗಲೀ ಬಿಜೆಪಿ ಪಕ್ಷದವರಾಗಲೀ ಇಂಥ ಪಕ್ಷದವರು ಮಾಡಿದ್ದಾರೆ ಅಂತ ಹೇಳೋದಿಲ್ಲ. ಪಕ್ಷಾತೀತರವಾಗಿ ಒಬ್ಬಿಬ್ಬರು ಸೇರಿಕೊಂಡು ಸ್ವಾರ್ಥಕ್ಕೆ ಈ ಕೆಲಸ ಮಾಡಿದ್ದಾರೆ. ಇದರ ಹಿಂದಿರುವ ಮಹಾನ್ ನಾಯಕ ಬೆಳಗಾವಿಯವರಲ್ಲ. ಆತ ಬೆಂಗಳೂರಿನವರೆ ಇರಬಹುದು, ಕನಕಪುರ, ಧಾರವಾಡ, ಗುಲ್ಬರ್ಗಾದವರೇ ಇರಬಹುದು. ಅವರ ಹೆಸರು ಈಗ ಹೇಳುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ಧಾರೆ.
ಇದನ್ನೂ ಓದಿ: Dinesh Kallahalli - ಇನ್ನೂ 3 ಜನರ ಸಿಡಿ ಬಗ್ಗೆ ಮುಂದೆ ಮಾತನಾಡುತ್ತೇನೆ: ದಿನೇಶ್ ಕಲ್ಲಹಳ್ಳಿ
ರಮೇಶ್ ಜಾರಕಿಹೊಳಿ ಅವರಿಗಿಂತ ಮೊದಲು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಈ ಸಿಡಿ ಷಡ್ಯಂತ್ರದಲ್ಲಿ 1+2+4 ಮಂದಿ ಇದ್ದಾರೆ ಎಂದು ಹೇಳಿದ್ದರು. ಒಂದು ಮಹಿಳೆ ಹಾಗೂ ಅವರ ಹೊತೆ ಇಬ್ಬರು ಹಾಗೂ ಅವರಿಗೆ ಬೆಂಬಲವಾಗಿ ನಾಲ್ಕು ಮಂದಿ ಇದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಸುಳಿವು ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ