ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಎಲ್ಲ ಹಂತದ ನಾಯಕರೂ ತಮ್ಮ ಕಾರ್ಯಶೈಲಿ ಬದಲಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಪಕ್ಷದ ಮುಖಂಡರಿಗೆ ಖಡಕ್ಕಾಗಿ ಸೂಚಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ 'ಜನತಾ ಸಂಗಮ'ದ (JDS Janata Sangama) ಆರನೇ ದಿನ ನಡೆದ ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಕಟ್ಟಲು ನೆಪಗಳು ಬೇಡ. ಬದ್ಧತೆಯಿಂದ ಪಕ್ಷವನ್ನು ಕಟ್ಟಿ ಬೆಳೆಸಿದರೆ ಅಂತಹವರನ್ನು ಪಕ್ಷ ಗುರುತಿಸುತ್ತದೆ ಎಂದು ಅವರು ನೇರವಾಗಿಯೇ ಹೇಳಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿ 2023ಕ್ಕೆ ಎದುರಾಗುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಸಜ್ಜಾಗಬೇಕಿದೆ. ಪಕ್ಷವನ್ನು ಮತಗಟ್ಟೆ ಮಟ್ಟದಿಂದಲೇ ಸಶಕ್ತವಾಗಿ ಕಟ್ಟಲು ಎಲ್ಲರೂ ಕೆಲಸ ಮಾಡಬೇಕಿದೆ. ಅದಕ್ಕೆ ಅಗತ್ಯವಾದ ಮಾರ್ಗದರ್ಶನವನ್ನು ಪಕ್ಷ ಮಾಡುತ್ತದೆ ಎಂದು ಕುಮಾರಸ್ವಾಮಿ ಅವರು ಮುಖಂಡರಿಗೆ ತಿಳಿಸಿದರು.
ಇದೇ ವೇಳೆ ನಾಲ್ಕು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಅವರ ಸಮಸ್ಯೆಗಳನ್ನು ಅಲಿಸಿದರಲ್ಲದೆ, ಪಕ್ಷ ಸಂಘಟನೆಗೆ ಇರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ನಾಲ್ಕೂ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ತಾಲೂಕುವಾರು ನಾಯಕರು ಎತ್ತಿದ ಸಮಸ್ಯೆಗಳಿಗೆ ಪರಿಹಾರವನ್ನು ಎಳೆ ಎಳೆಯಾಗಿ ಸೂಚಿಸಿದ ಅವರು, ಕೆಲ ಕೆಲ ಭಾಗದ ಮುಖಂಡರಿಗೆ ಖಡಕ್ಕಾಗಿ ನಿರ್ದೇಶನಗಳನ್ನು ಕೊಟ್ಟರೆ, ಕೆಲ ಮುಖಂಡರ ಕಾರ್ಯಶೈಲಿ ಬಗ್ಗೆ ತೃಪಿ ವ್ಯಕ್ತಪಡಿಸಿದರು.
ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತ, ಮುಖಂಡನೂ ಶ್ರದ್ಧೆ, ಬದ್ಧತೆಯಿಂದ ಕೆಲಸ ಮಾಡಬೇಕಾಗುತ್ತದೆ. ಈ ಮೂಲಕ 2023ಕ್ಕೇ ಸ್ವತಂತ್ರ ಸರಕಾರವನ್ನು ತರಲು ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.
ತಳಮಟ್ಟದಿಂದ ಪಕ್ಷದ ಮೇಲ್ಮಟ್ಟದವರೆಗೂ ಒಗ್ಗಟ್ಟು ಎನ್ನುವುದು ಬಹಳ ಮುಖ್ಯ. ಪ್ರತಿ ಸಮಸ್ಯೆಯನ್ನು ಆಯಾ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು. ಬಿಕ್ಕಟ್ಟು ದೊಡ್ಡದಾಗಲು ಬಿಡಬಾರದು ಎಂದು ಮುಖಂಡರಿಗೆ ಕುಮಾರಸ್ವಾಮಿ ಅವರು ತಾಕೀತು ಮಾಡಿದರು.
ಇದೇ ವೇಳೆ ಶಿವಮೊಗ್ಗ ಜಿಲ್ಲಾ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಅವರು ನೇಮಕವಾಗಿದ್ದು, ಅವರಿಗೆ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇಮಕಾತಿ ಆದೇಶ ನೀಡಿದರು.
ಚಿಕ್ಕಮಾಗಳೂರು, ಶಿವಮೊಗ್ಗ ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಜಿತ್ ರಂಜನ್, ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀಕಾಂತ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮುಖಂಡರಾದ ಜ್ವಾಲನಯ್ಯ, ವೆಂಕಟೇಶ್, ಕೆ.ಎಲ್.ರಾಮಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರದುರ್ಗ ಮತ್ತು ತುಮಕೂರು ಸಭೆಯಲ್ಲಿ ಮಾಜಿ ಶಾಸಕರಾದ ವೀರಭದ್ರಯ್ಯ, ಎಂ. ಟಿ.ಕೃಷ್ಣಪ್ಪ, ಸುರೇಶ್ ಬಾಬು, ತಿಮ್ಮರಾಯಪ್ಪ, ಸುಧಾಕರ ಲಾಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್ ಗೌಡ, ತುಮಕೂರು ಜಿಲ್ಲಾಧ್ಯಕ್ಷ ಅಂಜಿನಪ್ಪ, ಗುಬ್ಬಿಯ ಮುಖಂಡ ನಾಗರಾಜು ಮುಂತಾದವರು ಹಾಜರಿದ್ದರು.
ಇದನ್ನು ಓದಿ: ಇನ್ನು 15 ದಿನ ಸಮಯ ಕೊಡಿ Bitcoin ಹಗರಣದ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ; HD Kumaraswamy
15 ದಿನ ಸಮಯ ಕೊಡಿ ವಾಸ್ತವಾಂಶ ಹೊರಗಾಗುತ್ತೇನೆ: ಎಚ್ಡಿಕೆ
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡಿದ್ದ ಎಚ್ಡಿ ಕುಮಾರಸ್ವಾಮಿ ಅವರು, ಪ್ರಧಾನಿಗಳು (PM Narendra Modi) ಮೌನವಾಗಿದ್ದಾರೆ ಅಂತ ಇದನ್ನು ಮುಚ್ಚಿಹಾಕೋದಕ್ಕೆ ಹೊರಟಿದ್ದಾರೆ ಅಂತ ಹೇಳೋಕಾಗಲ್ಲ. ತನಿಖಾ ಹಂತದಲ್ಲಿ ಯಾವುದೇ ರೀತಿ ದಾರಿ ತಪ್ಪಿಸುವ ಕೆಲಸ ಬೇಡ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾನು ಹೇಳುತ್ತೇನೆ. ಅಮೆರಿಕಕ್ಕೆ ಪ್ರಧಾನಿಗಳು ಹೋಗದೇ ಇದ್ದರೆ ಇದು ಇಷ್ಟು ದೊಡ್ಡ ಮಟ್ಟಕ್ಕೆ ಇದು ಹೋಗ್ತಿರಲಿಲ್ಲ. ಇನ್ನೂ ಹದಿನೈದು ದಿನ ಸಮಯ ಕೊಡಿ ಇದರ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ