ಮೈಸೂರು (ಫೆ. 11): ನಾನು ಮತ್ತು ಸಿದ್ದರಾಮಯ್ಯ ಹೋರಾಟದ ಜೀವನದಿಂದಲೇ ರಾಜಕೀಯಕ್ಕೆ ಬಂದಿದ್ದು, ಹಾಗಾಗಿ ಶೋಷಿತ ವರ್ಗದ ಜನರಿಗೆ ಅನ್ಯಾಯವಾದಾಗ ಅವರ ಪರ ಧ್ವನಿ ಎತ್ತುತ್ತೇವೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಆಡಳಿತದ ವೈಖರಿ ಹಾಗೂ ತೀರ್ಮಾನ ನೋಡಿದಾಗ, ಚರ್ಚೆಯೇ ಮಾಡದೆ ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿ ಮಾಡಲು ಬಹುಮತ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನ ನೋಡಿದಾಗ ಜವಾಬ್ದಾರಿಯುತ ವ್ಯಕ್ತಿಗಳು ಯಾರು ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ. ಕಾಂಗ್ರೆಸ್ ತನ್ನ ಹೋರಾಟ ಮಾಡುತ್ತಿದೆ. ಇದೇ ಕಾರಣಕ್ಕೆ ನಾನು ಮತ್ತು ಸಿದ್ದರಾಮಯ್ಯ ಧ್ವನಿ ಎತ್ತಿದ್ದೇವೆ. ಈ ಹಿಂದೆ ಮೈಸೂರಿನಲ್ಲಿ ಸಂವಿಧಾನ ಪರಾಮರ್ಶೆ ಕಾರ್ಯಕ್ರಮವನ್ನ ನಾನೇ ಮಾಡಿದ್ದೀನಿ ವಿಶೇಷ ಯೋಜನೆ ರೂಪಿಸಿ ಯಾವುದೇ ಹೋರಾಟ ಮಾಡುವ ಉದ್ದೇಶ ಇಲ್ಲ. ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಾಗ ಹೋರಾಟ ಮಾಡುತ್ತೇವೆ. ಅದಕ್ಕೆ ಅಹಿಂದ ಅನ್ನೋ ವೇದಿಕೆ ಬೇಕಾಗಿಲ್ಲ ಅಹಿಂದ ಹೋರಾಟ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೂ ಮುನ್ನ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಪೋಸ್ಟ್ ಒಂದನ್ನ ಮಾಡಿದ್ದ ಡಾ.ಹೆಚ್.ಸಿ.ಮಹದೇವಪ್ಪ, ಮತ್ತೆ ಅಹಿಂದಾ ಹೋರಾಟ ನಡೆಯುತ್ತಾ ಎನ್ನುವ ಸುಳಿವು ನೀಡಿದ್ದರು. ತನ್ನ ಫೇಸ್ಬುಕ್ ಖಾತೆಯಲ್ಲಿ ನಾನು ಮತ್ತು ಸಿದ್ದರಾಮಯ್ಯ 1989 ರಿಂದಲೂ ಆತ್ಮೀಯರು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕೇವಲ ಅಂತೆ ಕಂತೆ ಅಷ್ಟೇ. ಪ್ರಜಾಪ್ರಭುತ್ವಕ್ಕೆ ಅಪಾಯದ ಸಮಯ ಬಂದಾಗಲೆಲ್ಲಾ ನಾವು ಹೋರಾಟ ಮಾಡಿದ್ದೇವೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಹೋರಾಟ ಸೃಷ್ಟಿಯಾಗುತ್ತದೆ. ಅಂತಹ ಚಳವಳಿಗಳಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ, ಅಹಿಂದ ವೇದಿಕೆಯನ್ನು ನಾವೇ ಸೃಷ್ಟಿ ಮಾಡುವುದಿಲ್ಲ. ಇದೀಗ ದೇಶದಲ್ಲಿ ಸಂವಿಧಾನಾತ್ಮಕ ವಾತಾವರಣವೇ ಕೆಡುತ್ತಿರುವುದರಿಂದ, ಜನಪರವಾದ ದನಿಗಳೇ ರಾಜಕೀಯ ವಲಯದಲ್ಲಿ ಕ್ಷೀಣಿಸುತ್ತಿರುವುದರಿಂದ ನಾನು ಮತ್ತು ಸಿದ್ದರಾಮಯ್ಯನವರು ಹೋರಾಟಗಳನ್ನು ಸಂಘಟಿಸುವ ಮತ್ತು ಸಾಮಾಜಿಕ ನ್ಯಾಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ನಿರ್ಧರಿಸಿದ್ದೇವೆ. #ಹೋರಾಟವೇ_ಬದುಕು ಎಂಬ ಹ್ಯಾಶ್ಟ್ಯಾಗ್ ಮೂಲಕ ಪೋಸ್ಟ್ ಮಾಡಿದ್ದರು.
ಇದನ್ನು ಓದಿ: ಮೌನಿ ಅಮವಾಸ್ಯೆ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ನಿನ್ನೆ ಸಿದ್ದರಾಮಯ್ಯ ಹೆಚ್.ಸಿ.ಮಹದೇವಪ್ಪರ ಬೆಂಗಳೂರು ನಿವಾಸಕ್ಕೆ ಹೋಗಿದ್ದದ್ದು,,ಇಂದು ಮಹದೇವಪ್ಪನವರು ಫೇಸ್ಬುಕ್ನಲ್ಲಿ ಬರೆದಿಕೊಂಡಿದ್ದು ಎಲ್ಲವು ಸಹ ಕಾಕತಾಳಿಯವಾದರೂ ಹೋರಾಟದ ಸಂಘಟನೆಯ ಸ್ವರೂಪವನ್ನ ನೀಡಿದಂತೆ ಕಂಡಿತು. ರಾಜ್ಯದಲ್ಲಿ ಈಗ ಮಿಸಲಾತಿ ಹೋರಾಟ ನಡೆಯುತ್ತಿದೆ. ಅಹಿಂದ ಹೆಸರಿನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ? ಹಾಗೂ ತನ್ನ ಹಳೆ ಸ್ನೇಹಿತರೊಂದಿಗೆ ಸೇರಿ ಕಾಂಗ್ರೆಸ್ ಮೂಲಕ ಅಹಿಂದಾ ಹೋರಾಟ ಆರಂಭಿಸುವ ಚಿಂತನೆ ನಡೆಸಿದ್ದಾರಾ ಅನ್ನೋ ಅನುಮಾನಗಳು ಮೂಡುತ್ತಿದೆ.
ಕುರುಬ ಸಮುದಾಯದ ಎಸ್.ಟಿ.ಮಿಸಲಾತಿ ಹೋರಾಟದಿಂದ ದೂರ ಇರುವ ಸಿದ್ದು, ತನ್ನದೆ ಪ್ರತ್ಯೇಕ ಹೋರಾಟದ ಪ್ಲಾನ್ ಮಾಡಿದ್ದರೆ. ಅದಕ್ಕೆ 2013ರಲ್ಲಿ ಅಹಿಂದ ಹೋರಾಟದ ಮಾದರಿಗೆ ಜೊತೆಯಾಗಿದ್ದವರನ್ನೆ ಮತ್ತೆ ಆಯ್ಕೆ ಮಾಡಿಕೊಂಡು ಹೋರಾಟ ಹಾದಿ ಸಜ್ಜುಗೊಳಿಸಿ,ತನ್ನ ಸ್ನೇಹಿತರ ಮೂಲಕ ಪರೋಕ್ಷವಾಗಿ ಹೋರಾಟದ ವೇದಿಕೆ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರಾ ಅನ್ನೋದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಮಹದೇವಪ್ಪ ಭೇಟಿಯ ಫಲಿತಾಂಶ ಇನ್ನು ಕೆಲವೇ ದಿನದಲ್ಲಿ ತಿಳಿಯೋದಂತು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ