ರಾಯಚೂರು: ಕರ್ನಾಟಕವನ್ನು ಚಿನ್ನದ ನಾಡು ಎನ್ನುತ್ತಾರೆ. ರಾಜ್ಯದಲ್ಲಿ ಚಿನ್ನ ಉತ್ಪಾದಿಸುವ ಏಕೈಕ ಕಂಪನಿ ಎಂದರೆ ಅದು ಹಟ್ಟಿ ಚಿನ್ನದ ಗಣಿ ಕಂಪನಿ. ಈ ವರ್ಷ ಲಾಕ್ ಡೌನ್ ಮಧ್ಯೆಯೂ ನಿಗಿದಿತ ಗುರಿ ಸಾಧಿಸಿ ಹೆಮ್ಮೆಯ ಸರಕಾರಿ ಸ್ವಾಮ್ಯದ ಕಂಪನಿಯಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿಯ ಇತಿಹಾಸ ಬಹಳ ಹಳೆಯದು. ಆಶೋಕ ಕಾಲದಿಂದಲೂ ಇಲ್ಲಿ ಚಿನ್ನ ಉತ್ಪಾದಿಸಲಾಗುತ್ತಿತ್ತು ಎನ್ನಲಾಗಿದೆ. ನಿಜಾಮ ಕಾಲದಲ್ಲಿ ಚಿನ್ನ ಉತ್ಪಾದನೆಯ ಕಂಪನಿಯಾಗಿರುವ ಹಟ್ಟಿ ಚಿನ್ನದ ಗಣಿಯು 20 ತೋಲಾ( 200 ಗ್ರಾಂ) ಚಿನ್ನ ಉತ್ಪಾದನೆಯಿಂದ ಆರಂಭಿಸಿ ಈಗ 1728 ಕೆಜಿಯವರೆಗೂ ವಾರ್ಷಿಕ ಚಿನ್ನವನ್ನು ಅದಿರಿನಿಂದ ತೆಗೆಯಲಾಗಿದೆ.
2019-20ನೇ ಸಾಲಿನಲ್ಲಿ ಹಟ್ಟಿ ಚಿನ್ನ ಕಂಪನಿಯಿಂದ 1750 ಕೆಜಿ ಚಿನ್ನ ಉತ್ಪಾದನೆಯ ಗುರಿ ಹೊಂದಿತ್ತು, ಆದರೆ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಬರೋಬ್ಬರಿ 1728 ಕೆಜಿ ಚಿನ್ನವನ್ನು ಉತ್ಪಾದಿಸಲಾಗಿದೆ. ಈ ಸಾಧನೆಯನ್ನು ಹಟ್ಟಿ ಚಿನ್ನದ ಗಣಿ ಮುಟ್ಟಲು ಇಲ್ಲಿಯ ಕಾರ್ಮಿಕರ ಪರಿಶ್ರಮವೇ ಕಾರಣವಾಗಿದೆ. ಹಟ್ಟಿ, ಹೀರಾ ಬುದ್ದಿನ್ನಿ ಹಾಗು ಊಟಿ ಗ್ರಾಮಗಳ ಸುತ್ತಲು ಚಿನ್ನದ ಗಣಿಗಾರಿಕೆ ನಡೆಯುತ್ತಿದೆ.
ಕೊರೋನಾ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಈಗ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಶೇ.30ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಚಿನ್ನ ಹೊರತೆಗೆಯಲಾಗುತ್ತಿದೆ. 2300 ಅಡಿಗಿಂತ ಆಳವಾಗಿ ಗಣಿಗಾರಿಕೆ ಮಾಡುವ ಹಟ್ಟಿ ಚಿನ್ನದ ಗಣಿಯಲ್ಲಿ ಒಟ್ಟು 4019 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ಲಾಕ್ ಡೌನ್ ಹಿನ್ನೆಲೆಯಲ್ಲಿ 1000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ: ನಾಲ್ಕನೇ ಬಾರಿಗೆ ಮೇ 31ರವರೆಗೂ ಲಾಕ್ಡೌನ್ ವಿಸ್ತರಣೆ ಸಾಧ್ಯತೆ: ಏನಿರಬಹುದು? ಯಾವುದಕ್ಕೆ ನಿರ್ಬಂಧ?
ಲಾಕ್ ಡೌನ್ ಸಂದರ್ಭದಲ್ಲಿ ಕಂಪನಿ ಬಂದ್ ಆಗಿದ್ದರಿಂದ ನಿತ್ಯ 2 ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ಆದರೆ ಈಗ ಚಿನ್ನದ ಬೆಲೆ ಗಗನಕ್ಕೇರಿದಿದ್ದರಿಂದ ಆಗಿರುವ ನಷ್ಟವನ್ನು ತುಂಬಿಕೊಳ್ಳುವ ಸಾಧ್ಯತೆಯೂ ಇದೆ. ಸರಕಾರದ ಬೃಹತ್ ಉದ್ಯಮವಾಗಿರುವ ಹಟ್ಟಿ ಚಿನ್ನದ ಗಣಿಯು ಲಾಕ್ ಡೌನ್ ಮಧ್ಯೆಯೂ ವಾರ್ಷಿಕ ಗುರಿ ಮುಟ್ಟಿ ಸಾಧನೆ ಮಾಡಿದ್ದು ಗಮನಾರ್ಹವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ