ಹಾಸನ (ನವೆಂಬರ್.08): ಅಧಿ ದೇವತೆ ಹಾಸನಾಂಬೆ ದೇವಾಲಯ ಮತ್ತು ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಹೊರ ವಲಯದಲ್ಲಿ ಹಾಕಲಾಗಿರುವ ಸ್ವಾಗತ ಕಮಾನು ಮುರಿದು ಬಿದ್ದಿದೆ. ಮೂರು ದಿನದಲ್ಲಿ ಎರಡು ಬಾರಿ ಕಮಾನು ಮುರಿದು ಬಿದ್ದಿದೆ. ಹಾಸನದ ಹೊರವಲಯದ ಬೂವನಹಳ್ಳಿ ಬೈಪಾಸ್ ಬಳಿ ಹಾಕಲಾಗಿರುವ ಸ್ವಾಗತ ಕಮಾನು ಒಂದು ದಿವಸಕ್ಕೆ ಅರ್ಧಕ್ಕೆ ಮುರಿದು ಬಿದ್ದಿತ್ತು. ಅದನ್ನು ಸರಿಪಡಿಸಲಾಗಿತ್ತು. ಆದರೆ, ಮಾರನೇ ದಿನದಲ್ಲಿ ಮತ್ತೆ ಕುಸಿದು ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಮಾತುಗಳು ಕೇಳಿ ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಇತಿಹಾಸ ಪ್ರಸಿದ್ದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿ ಪೂಜಾ ಕಾರ್ಯಗಳನ್ನು ಆರಂಭಿಸಲಾಗಿದೆ. ಹಾಸನ ನಗರಕ್ಕೆ ಪ್ರವೇಶಿಸುವ ಪ್ರಮುಖ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿತ್ತು. ಆದರೆ, ಈಗ ಮತ್ತೆ ಮುರಿದು ಬಿದ್ದಿದೆ.
ಹಾಸನಾಂಬ ದೇವಿ ದರ್ಶನ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಲುವಾಗಿ ಸ್ವಾಗತ ಕಮಾನು ಅಳವಡಿಸಲು ಮತ್ತು ಹೂವಿನ ಅಲಂಕಾರ ಮಾಡಲು ಟೆಂಡರ್ ಕರೆದಿದ್ದು, ಪ್ರತಿ ವರ್ಷ ನಾಗ್ ಗ್ರೂಪ್ ನ ಮಾಲೀಕರಾದ ನಾಗರಾಜು ಎಂಬುವರಿಗೆ ನೀಡಲಾಗುತ್ತಿತ್ತು. ಈ ವೇಳೆ ತುಂಬ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ಇದುವರೆಗೂ ಇಂತಹ ದುರ್ಘಟನೆ ಸಂಭವಿಸಿರಲಿಲ್ಲ.
ಇದನ್ನೂ ಓದಿ : ಜಮೀನು ಖರೀದಿಸಿ ವಂಚನೆ ಆರೋಪ: ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಬೀಗ ಜಡಿದ ರೈತರು
ಆದರೆ, ಈ ವರ್ಷ ಬೆಂಗಳೂರಿನ ರಾಘವ್ ನಗರದಲ್ಲಿರುವ ಎಸ್.ಎಲ್.ಎನ್. ಎಂಟರ್ ಪ್ರೈಸಸ್ ನ ಸಿ.ಎಸ್. ಮಹೇಶ್ ಎಂಬುವರಿಗೆ ಗುತ್ತಿಗೆ ನೀಡಿದ್ದು, ಸರಿಯಾಗಿ ನಿರ್ವಹಣೆ ಮಾಡದ ಕಾರಣ ಒಂದೆ ಜಾಗದಲ್ಲಿ ಎರಡೆರಡು ಬಾರಿ ಸ್ವಾಗತ ಕಮಾನು ಬಿದ್ದಿರುವುದು ಭಕ್ತರಲ್ಲಿ ಬೇಸರ ಉಂಟು ಮಾಡಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನವಹಿಸಿ ವಿಚಾರಣೆ ನಡೆಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ