ಹಾಸನ: ಒಂದು ವರ್ಗ ನಮ್ಮ ಪರವಾಗಿ ಇಲ್ಲ, ಅವರಿಗೆ ನಾನು ಯಾರೆಂದು ತೋರಿಸುತ್ತೇನೆಂದು ಹಾಸನ (Hassan) ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೀತಂ ಗೌಡ ಅವರು, ನಾನು ಯಾವುದೇ ಒಂದು ಸಮುದಾಯವನ್ನು (Community) ಗುರಿಯಾಗಿಸಿಕೊಂಡು ಹೇಳಿಕೆ ನೀಡಿಲ್ಲ. ನಾನು ಹೇಳಿರುವುದು ಕಾಂಗ್ರೆಸ್ಗೆ (Congress) ಒಂದು ವರ್ಗ ಬೆಂಬಲ ನೀಡುತ್ತಿತ್ತು, ಅದು ಈ ಬಾರಿ ಬದಲಾಗಿದೆ ಎಂದು ಹೇಳಿದ್ದೆ. ಆ ವರ್ಗ ಎನ್ನುವ ಮಾತಿನ ಹಿಂದೆ, ಎಲ್ಲಾ ಸಮುದಾಯದ ಬಡ ಹಾಗೂ ಶ್ರೀಮಂತ ಎಲ್ಲರೂ ಇದ್ದಾರೆ. ತಾವು ಮುಸ್ಲಿಂರನ್ನು (Muslims) ಗುರಿಯಾಗಿಸಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೂತನ ಶಾಸಕರು ಸ್ವಂತ ವಿವೇಚನಾ ಶಕ್ತಿಯಲ್ಲಿ ಕೆಲಸ ಮಾಡಲಿ
ನಾನು ಏನೋ ಆಗಲು ಬಂದವನಲ್ಲ. ಇದು ಇಲ್ಲ ಎಂದರೇ ಇನ್ನೊಂದು ಆಗಬೇಕು ಎನ್ನುವ ಕಾತರ ನನಗೆ ಇಲ್ಲ. ಅಧಿಕಾರ ಇದ್ದರೆ ಮಾತ್ರ ಜನಸೇವೆ ಮಾಡಬಹುದು ಎನ್ನುವ ನಂಬಿಕೆ ಕೂಡ ನನ್ನದಲ್ಲ. ಹಾಸನದ ಅಭಿವೃದ್ಧಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಾನು ಹಾಸನ ಕ್ಷೇತ್ರದಲ್ಲಿ ತಳಪಾಯಹಾಕಿ, ಗೋಡೆಕಟ್ಟಿ, ಆರ್.ಸಿಸಿ ಹಾಕಿದ್ದೇನೆ. ಹಾಲಿ ಶಾಸಕರು ಆವೇಸಕ್ಕೆ ಒಳಗಾಗದೆ ಸ್ವಂತ ವಿವೇಚನಾ ಶಕ್ತಿಯಲ್ಲಿ ಕೆಲಸ ಮಾಡಲಿ ಎಂದು ಶುಭ ಕೋರುತ್ತೇನೆ ಪ್ರೀತಂ ಗೌಡ ಸಲಹೆ ನೀಡಿದರು.
ಮೂರು ವರ್ಷದ ಕೆಲಸವನ್ನು ಮೂರೇ ದಿನದಲ್ಲಿ ಮಾಡುತ್ತೇನೆ ಅಂತ ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಮಾತನಾಡುವುದು ಬೇಡ. ಅಕ್ಕ-ಪಕ್ಕದ ಕ್ಷೇತ್ರದ ಯಾರು ಏನೇ ಹೇಳಿದರೂ ಕೇಳದೆ ಸ್ವಂತ ವಿವೇಚನೆ ಬಳಸಲಿ ಎಂದು ಇದೇ ವೇಳೆ ಜೆಡಿಎಸ್ ಪಕ್ಷದ ನೂತನ ಶಾಸಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ: Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್; ಕಾಂಗ್ರೆಸ್ನಲ್ಲಿ ಮುಂದುವರೆದ ಹೈಡ್ರಾಮಾ!
ಜನರ ಆಶೀರ್ವಾದ ನನ್ನ ಮೇಲೆ ಇದೆ
ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಸುಮಾರು 77,300 ಮತ ನೀಡಿದ ಮತದಾರರಿಗೆ ಧನ್ಯವಾದ ಹೇಳುತ್ತೇನೆ. ಕಳೆದ ಬಾರಿಗಿಂತ 14 ಸಾವಿರ ಮತ ಹೆಚ್ಚಾಗಿ ನೀಡಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಮಾಡಿದ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ. ನನ್ನ ಅಭಿವೃದ್ಧಿ ಕೆಲಸ ನೋಡಿ, ಸೇವೆ ಗುರುತಿಸಿ ಆಶೀರ್ವಾದ ಮಾಡಿದ್ದಾರೆ.
ಚುನಾವಣಾ ಫಲಿತಾಂಶ ವಿರುದ್ಧವಾಗಿ ಇರಬಹುದು, ಆದರೆ ಜನರ ಆಶೀರ್ವಾದ ನನ್ನ ಮೇಲೆ ಇದೆ ಎನ್ನೋದು ಚುನಾವಣೆಯಲ್ಲಿ ಸಾಬೀತಾಗಿದೆ. ಇದಕ್ಕೆ ಕಳೆದ ಬಾರಿಗಿಂತ ಶೇಕಡಾ 25 ಜನ ಆಶೀರ್ವಾದ ಮಾಡಿರುವುದು ಸಾಕ್ಷಿ, ನನಗೆ ಶಕ್ತಿ ತುಂಬಿದ ಎಲ್ಲರು ಧನ್ಯವಾದ ಹೇಳುತ್ತೇನೆ ಎಂದರು.
ಮುಂದಿನ ಐದು ವರ್ಷಗಳಲ್ಲಿ ನಾನು ಮಾಡಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿ, ಪ್ರೀತಂಗೌಡಗೆ ಒಂದು ಐಡಿಯಾ ಇದ್ದರೆ ಅವರೂ ವಿದ್ಯಾವಂತರಿದ್ದಾರೆ. ಅವರೂ ಯುವಕರಿದ್ದು, ಅವರೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ