ರಾಯಚೂರು: ಹಾಸನ ಕ್ಷೇತ್ರದ ಜೆಡಿಎಸ್ (Hassan JDS Ticket) ಟಿಕೆಟ್ ಟೆನ್ಷನ್ ಜೋರಾಗಿದೆ. ಇದರ ನಡುವೆ ಹಾಸನ ಟಿಕೆಟ್ ವಿಚಾರ ಹಾಗೂ ಸೂರಜ್ (Suraj Revanna), ಪ್ರಜ್ವಲ್ ರೇವಣ್ಣ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸುವ ನೂರಾರು ಶಕುನಿಗಳಿದ್ದಾರೆ, ಪಾಪ ಬಾಯಿ ತಪ್ಪಿ ಮಾತನಾಡಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ನನಗೆ ಇದೆ ಎಂದು ಮಾಜಿ ಸಿಎಂ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಭವಾನಿ ರೇವಣ್ಣ (Bhavani Revanna) ಅವರು ಹಾಸನ ಕ್ಷೇತ್ರದಲ್ಲಿ (Hassan Constituency) ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಕ್ಷೇತ್ರ ಪ್ರವಾಸ ಮುಂದುವರಿಸಿದ್ದಾರೆ.
‘ಶಕುನಿಗಳು ದಾರಿ ತಪ್ಪಿಸ್ತಿದ್ದಾರೆ’
ರಾಯಚೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಹೆಚ್ಡಿ ಕುಮಾರ ಸ್ವಾಮಿ ಅವರು, ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸುವ ನೂರಾರು ಶಕುನಿಗಳಿದ್ದಾರೆ, ಪಾಪ ಬಾಯಿ ತಪ್ಪಿ ಮಾತನಾಡಿದ್ದಾನೆ. ನನ್ನ ಮನೆ ಮಕ್ಕಳು ನನ್ನ ಬಗ್ಗೆ ಮಾತನಾಡದೇ ಇನ್ಯಾರ ಬಗ್ಗೆ ಮಾತನಾಡುತ್ತಾರೆ?
ಅದನ್ನು ಸರಿಪಡಿಸಿಕೊಳ್ಳುವ, ಅರಗಿಸಿಕೊಳ್ಳುವ ಶಕ್ತಿ ನನಗೆ ಇದೆ. ಹಾಸನದ ರಾಜಕಾರಣವನ್ನು ಮೊದಲಿನಿಂದಲೂ ರೇವಣ್ಣ ನೋಡಿಕೊಂಡು ಬಂದಿದ್ದಾರೆ. ನನ್ನ ಪ್ರತಿಯೊಂದು ರಾಜಕಾರಣದ ಜವಾಬ್ದಾರಿ ಅವರೇ ತಗೊಂಡಿದಾರೆ. ಹಾಗಾಗಿ ಸೂರಜ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.
ಹೆಚ್ಡಿಡಿ ಆರೋಗ್ಯದ ಕುರಿತು ಭಾವುಕರಾದ ಕುಮಾರಸ್ವಾಮಿ
ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಹೆಸರನ್ನ ತರಬೇಡಿ. ನಾನು ಭಾವನಾತ್ಮಕ ಜೀವಿ. ದೇವೇಗೌಡರು ಯಾವ ಪರಿಸ್ಥಿತಿಯಲ್ಲಿದ್ದಾರೆ ಅಂತ ನಿಮಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಅವರ ವಯಸ್ಸು ಕಡಿಮೆ ಮಾಡಲು ಸಿದ್ಧರಿಲ್ಲ. ದೇವೇಗೌಡರ ನಿರ್ಧಾರವೇ ಅಂತಿಮ ಅಂತ ಮಕ್ಕಳು ಹೇಳಿದ್ದಾರೆ. ಆದರೆ ಅವರು ನಿರ್ಧಾರ ಮಾಡುವ ಸ್ಥಿತಿಯಲ್ಲಿ ಇದ್ದಾರಾ ಅಂತ ನಿಮ್ಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ನನಗೆ ದೇವೇಗೌಡರ ಬದುಕು ಮುಖ್ಯ. ನನ್ನ ಎದುರು ಅವರು ಕಟ್ಟಿರುವ ಪಕ್ಷ, ಇವತ್ತು 220 ಸೀಟ್ ಗೆಲ್ಲಬೇಕು ಎಂದು ಹೊರಟಿದ್ದೀನಿ. ಇದನ್ನು ಅವರಿಗೆ ಕಾಣಿಕೆ ಕೊಡಲು ಮುಂದಾಗಿದ್ದೀನಿ. ಅವರು ಸಾಯೋದಕ್ಕೂ ಮುನ್ನ ಅವರ ಪಕ್ಷ ಉಳಿಯಿತು ಅಂತ ಸಾಬೀತು ಮಾಡಲು ಹೊರಟಿದ್ದೀನಿ. ದಯಾಮಾಡಿ ದೇವೇಗೌಡ ಹೆಸರನ್ನು ಮಧ್ಯೆ ತರಬೇಡಿ ಎಂದು ಹೇಳುವ ಮೂಲಕ ಅವರ ಆರೋಗ್ಯದ ಬಗ್ಗೆ ಭಾವುಕರಾದರು.
ಹಾಸನದಲ್ಲಿ ಭವಾನಿ ರೇವಣ್ಣ ತಮ್ಮ ಪ್ರವಾಸ ಮುಂದುವರಿಸಿದ್ದಾರೆ. ಹರದೂರು ಗ್ರಾಮದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಪತಿ ರೇವಣ್ಣ ಜತೆ ಬಂದ ಭವಾನಿ, ಈಡುಗಾಯಿ ಹೊಡೆದು ದೇವರಲ್ಲಿ ಪ್ರಾರ್ಥಿಸಿದ್ದರು. ನಂತರ ಆಟೋರಿಕ್ಷಾ ಚಾಲಕರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೊಂದೆಡೆ ಟಿಕೆಟ್ ಗೊಂದಲದಲ್ಲಿರುವ ಮಾಜಿ ಸಚಿವ ಎ.ಮಂಜು ಕೂಡಾ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಒತ್ತಾಯ
ಹಾಸನ ಜೆಡಿಎಸ್ ಟಿಕೆಟ್ ಅನ್ನ ಭವಾನಿ ರೇವಣ್ಣ ಅವರಿಗೆ ಕೊಡಬೇಕು ಅಂತ ಬೆಂಬಲಿಗರ ಒತ್ತಡ ತೀವ್ರವಾಗಿತ್ತು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ಜನರನ್ನ ಸಮಾಧಾನ ಪಡಿಸಿದರು.
ಇದನ್ನೂ ಓದಿ: Crime News: ಹವಾಲ ದಂಧೆಯಲ್ಲಿ ಅಣ್ತಾಮ್ಮಾಸ್ ಡೀಲ್; 92 ಲಕ್ಷಕ್ಕೆ 1 ಕೋಟಿ ರೂಪಾಯಿ ಸೇರಿಸಿ ಸಿಕ್ಕಿಬಿದ್ದ ಕಥೆ!
ಇತ್ತ ಸೂರಜ್ ರೇವಣ್ಣ ಮಾತನಾಡಿ, ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನ ದೇವೇಗೌಡರೆ ನಿರ್ಧರಿಸಿಕೊಂಡು ಬಂದಿದ್ದಾರೆ. ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯ ಎಂದಿದ್ದರು. ಸೂರಜ್ ರೇವಣ್ಣ ಮಾತಿಗೆ ಸೋದರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕೂಡ ಸಮರ್ಥಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ