ಬೆಂಗಳೂರು: ಹಾಸನ (Hassan) ಟಿಕೆಟ್ ವಿಷ್ಯದಲ್ಲಿ ಜೆಡಿಎಸ್ (JDS) ಒಡೆದ ಮನೆಯಾಗಿದೆ. ಒಡೆದ ಮನೆಗೆ ಸೈಲೆಂಟಾಗೆ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಜೆಡಿಎಸ್ ಟಿಕೆಟ್ಗೆ ಕಾಯುತ್ತಿರುವ ಸ್ವರೂಪ್ ಅವರಿಗೂ ಗಾಳ ಹಾಕಿದ್ದಾರೆ. ಇದು ಕುಮಾರಸ್ವಾಮಿ (HD Kumaraswamy) ಕಣ್ಣು ಕೆಂಪಾಗಿಸಿದೆ. ಹೌದು, ಹಾಸನ ಎಂದರೆ ಜೆಡಿಎಸ್ ಪಕ್ಷದ ಭದ್ರಕೋಟೆ. ಈಗ ಹಾಸನದಲ್ಲಿ ಒಂದಲ್ಲ ಅಂತ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಒಳಗೆ ರೆಬೆಲ್ ಆಟ ಶುರುವಾಗಿದೆ. ಅರಸೀಕೆರೆ, ಅರಕಲಗೂಡು ಶಾಸಕರು ಈಗಾಗಲೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ (Congress) ಕಡೆ ಮುಖ ಮಾಡಿದ್ದಾರೆ. ಈಗ ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ಗೆ ಪಟ್ಟು ಹಿಡಿದಿದ್ದು, ಹೆಚ್ಡಿ ಕುಮಾರಸ್ವಾಮಿ ಬೆಂಬಲಿತ ಅಭ್ಯರ್ಥಿ ಸ್ವರೂಪ್ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಆಪರೇಷನ್ ಹಸ್ತಕ್ಕೆ ಇಬ್ಬರನ್ನ ಸೆಳೆದಿರುವ ಡಿಕೆ ಶಿವಕುಮಾರ್, ಸ್ವರೂಪ್ಗೂ ಗಾಳ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.
ಹಾಸನದಲ್ಲಿ ಸ್ವರೂಪ್ ಜೊತೆ ಮಾತಾಡಿದ್ದೀನಿ
ಈ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ನಾನು ಎ.ಮಂಜು ಜೊತೆ ಮಾತನಾಡಿದ್ದು ನಿಜ. ಅವರಿಗೂ ಜೆಡಿಎಸ್ನವರಿಗೂ ಕೇಸ್ ನಡೆಯುತ್ತಿರುವುದು ನಿಜ. ಬಿಜೆಪಿಯಿಂದ ಅವರ ವಿರುದ್ಧ ಚುನಾವಣೆಗೆ ನಿಂತಿದ್ದು ನಿಜ. ರಾಜಕೀಯದಲ್ಲಿ ಇವೆಲ್ಲಾ ಸಹಜ. ಸ್ವರೂಪ್ ಜೊತೆ ಮಾತನಾಡಿದ್ದೇನೆ, ಎ.ಟಿ ರಾಮಸ್ವಾಮಿ ಕೂಡ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮಾರ್ಚ್ 5ನೇ ರಂದು ರಾಯಣ್ಣ ಪುತ್ತಳಿ ಉದ್ಘಾಟನೆಗೆ ಸಿದ್ದರಾಮಯ್ಯ ಅರಸೀಕೆರೆಗೆ ಹೋಗುತ್ತಾರೆ. ಈ ವೇಳೆ ಶಿವಲಿಂಗೇಗೌಡ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ರೈತರ ಮಕ್ಕಳಿಗೆ ಇ.ಡಿ ನೋಟಿಸ್ ಕೊಟ್ಟಿರುವುದನ್ನು ನೋಡಿದ್ದೀರಾ?
ಜೆಡಿಎಸ್ ಮನೆಯಲ್ಲಿ ಹಾಸನ ಟಿಕೆಟ್ ಕಿಚ್ಚು ಧಗಧಗಿಸುತ್ತಿದೆ. ಸ್ವರೂಪ್ಗೆ ಟಿಕೆಟ್ ಕೊಡಲು ಹೆಚ್ಡಿ ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಭವಾನಿಗೆ ಟಿಕೆಟ್ ಬೇಕು ಎಂದು ಹೆಚ್ಡಿ ರೇವಣ್ಣ ಜಿದ್ದಿಗೆ ಬಿದ್ದಿದ್ದು ಟಿಕೆಟ್ ಗುದ್ದಾಟ ಪ್ರತಿಷ್ಠೆ ಯುದ್ಧವಾಗಿ ಬದಲಾಗಿದೆ. ಇದರ ಮಧ್ಯೆ ಡಿ.ಕೆ.ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಕೈ ಹಾಕಿರುವುದು ಜೆಡಿಎಸ್ಗೆ ಅದರಲ್ಲೂ ಕುಮಾರಸ್ವಾಮಿಗೆ ನುಂಗಲಾರದ ತುತ್ತಾಗಿದೆ.
ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಹಿಗ್ಗಾಮುಗ್ಗ ಜಾಡಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಓರ್ವ ಮುಖ್ಯಮಂತ್ರಿಯನ್ನು ಚಪ್ರಾಸಿ ತರ ನಡೆಸಿಕೊಂಡಿದ್ದೀರಿ. ಅವರು ಯಾರ ಪೂಜೆ ಮಾಡುತ್ತಿದ್ದಾರೆ. ಅವರು ರೈತನ ಮಗನಾ? ರೈತರ ಮಕ್ಕಳಿಗೆ ಇ.ಡಿ ನೋಟಿಸ್ ಕೊಟ್ಟಿರುವುದನ್ನು ಎಲ್ಲಾದರೂ ನೋಡಿದ್ದೀರಾ? ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ, 79, 29ಕ್ಕೆ ಬರುತ್ತೆ. ಅವರಿಗೆ ಇನ್ನೂ ದುಡ್ಡು ಹೊಡೆಯಲು ಬಿಡಬೇಕಿತ್ತಂತಾ? ನನ್ನನ್ನು ಯಾವ ರೀತಿ ನಡೆಸಿಕೊಂಡರು ಎಂಬುವುದು ಗೊತ್ತಿದೆ.
ಜೆಡಿಎಸ್ ಬಗ್ಗೆ ಮಾತನಾಡಲು ನಿಮಗೆ ಯಾವ ರೀತಿ ನೈತಿಕತೆ ಇದೆ
ನೀರಾವರಿ ಸಚಿವನಾಗಿ ಏನೇನು ನಡೆಸಿದ್ದೀಯಾ ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ. ನಿಮಗೆ ಎಷ್ಟು ಸ್ವತಂತ್ರ ಕೊಟ್ಟಿದ್ದೆ, ನೀವು ಯಾವ ರೀತಿ ನಡೆಸಿಕೊಂಡಿರಿ. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ? ಹುಡುಕಿಕೊಂಡು ಬಂದವರು ನೀವು. ಸಿಎಂ ಸ್ಥಾನ ಕೊಡುತ್ತೀವಿ ಬನ್ನಿ ಅಂತ ಕರೆದಿದ್ದು, ಬೇಡ ಯಾರನ್ನಾದರೂ ಮಾಡಿಕೊಳ್ಳಿ ಅಂತ ಹೇಳಿದ್ದೇವು.
ನಿಮಗೆ ಶಕ್ತಿ ಇದ್ದರೆ ಯಾಕೆ ಜೆಡಿಎಸ್ ನಾಯಕರುಗಳ ಮನೆಯ ಬಾಗಿಲನ್ನು ತಟ್ಟುತ್ತೀರಿ? ನನ್ನ ಬಗ್ಗೆ ಲಘುವಾಗ ಮಾತನಾಡುತ್ತೀರಾ? ದೇವೇಗೌಡರು ಸಮ್ಮುಖದಲ್ಲಿ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿಕೊಳ್ಳಿ ಅಂತ ನಾವು ಹೇಳಿದ್ದೇವು. ಜೆಡಿಎಸ್ ಬಗ್ಗೆ ಮಾತನಾಡಲು ನಿಮಗೆ ಯಾವ ರೀತಿ ನೈತಿಕತೆ ಇದೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: HD Deve Gowda-Vokkaliga: ವಿಶ್ರಮಿಸುತ್ತಾರಾ ದೇವೇಗೌಡರು? ಬಿಜೆಪಿ-ಕಾಂಗ್ರೆಸ್ನತ್ತ ವಾಲುತ್ತಾರಾ ಒಕ್ಕಲಿಗರು?
ಮನೆಯೊಳಗಿನ ಕಿಚ್ಚು ಮನೆಯ ಸುಡದೇ ಬಿಡಲ್ಲ!
ಹಾಸನದ ಬೇಲೂರಿನಲ್ಲಿ ಡಿ.ಕೆ ಶಿವಕುಮಾರ್ ಪ್ರಜಾಧ್ವನಿ ಸಮಾವೇಶ ಯಾತ್ರೆ ಮಾಡಿದ್ದಾರೆ. ಸಮಾವೇಶದಲ್ಲೂ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುವ ನುಡಿಗಳನ್ನೇ ಹೇಳಿದ್ದಾರೆ. ಒಟ್ಟಿನಲ್ಲಿ ಮನೆಯೊಳಗಿನ ಕಿಚ್ಚು ಮನೆಯ ಸುಡದೇ ಬಿಡಲ್ಲ ಅನ್ನುವ ಹಾಗೇ ಜೆಡಿಎಸ್ ಒಳಗಿನ ಕಿಚ್ಚು ಜೆಡಿಎಸ್ಗೆ ಕಂಟಕ ಆಗಿದೆ. ಉರಿಯುವ ಬೆಂಕಿಯಲ್ಲಿ ಕಾಂಗ್ರೆಸ್, ಬಿಜೆಪಿಯವರು ತುಪ್ಪ ಕಾಯಿಸಿಕೊಳ್ಳುವ ಕೆಲಸಕ್ಕೂ ಕೈ ಹಾಕಿದ್ದಾರೆ. ಹಾಸನ ರಾಜಕೀಯ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ