ಹಾಸನ (ನ.5): ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲವನ್ನು ಇಂದಿನಿಂದ ತೆರೆಯಲಾಗಿದೆ. ಈ ಬಾರಿ ಹಾಸನಾಂಬೆ ದರ್ಶನವನ್ನು ಜಿಲ್ಲಾಡಳಿತ ನೇರ ಪ್ರಸಾರ ಮಾಡುವ ಮೂಲಕ ಎಲ್ಲರಿಗೂ ಏಕಕಾಲದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನಲೆ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿತು. ಇದರ ಬದಲು ಈ ಬಾರಿ ಎಲ್.ಇ.ಡಿ. ಪರದೆ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 10 ಕಡೆ ಈ ಎಲ್ಇಡಿ ಪರದೆ ಅಳವಡಿಸಲಾಗಿದೆ. ಇನ್ನು ರಾಜ್ಯದ ಜನರು ಕೂಡ ಜಿಲ್ಲಾಡಳಿತದ ಪೇಜ್ನಲ್ಲಿ ಇದರ ನೇರ ಪ್ರಸಾರ ನೋಡಬಹುದು. ಮೊದಲ ದಿನದಿಂದ ಕೊನೆ ದಿನವರೆಗೂ ದೇವಾಲದಯ ಪೂಜೆ ಪುನಸ್ಕಾರಗಳು ವೀಕ್ಷಿಸುವ ಅವಕಾಶ ನೀಡಲಾಗಿದೆ.
ಸಚಿವ ಕೆ ಗೋಪಾಲಯ್ಯ ಹಾಗೂ ಜಿಲ್ಲಾಧಿಕಾರಿ ಆರ್ ಗಿರೀಶ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಸಂಪ್ರದಾಯದಂತೆ ಬಾಗಿಲು ತೆರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅರಸು ಮನೆತನದ ನರಸಿಂಹರಾಜ ಅರಸು ಅವರು ಬಾಳೆ ಕಂದು ಕಡಿದ ಬಳಿಕ ದೇಗುಲದ ಬಾಗಿಲನ್ನು ತೆರೆಯಲಾಯಿತು.
ಜನಪ್ರತಿನಿಧಿಗಳಿಗೆ ದೇವಿಯ ದರ್ಶನಕ್ಕೆ ನೇರ ಅವಕಾಶವಿದೆ. ಇಂದು ಮತ್ತು ಕಡೆ ದಿನ ಮಾತ್ರ ಜನಪ್ರತಿನಿಧಿಗಳು, ಗಣ್ಯರಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಬರುವ ಗಣ್ಯರು ಆರುಗಂಟೆಯೊಳಗೆ ಈ ಮೊದಲೇ ತಿಳಿಸಿ ಆಗಮಿಸುವುದು ಅವಶ್ಯಕವಾಗಿದೆ. ಜನರ ಹಿತ ರಕ್ಷಣೆಗಾಗಿ ಈ ನಿಯಮವನ್ನು ಎಲ್ಲರೂ ಪಾಲನೆ ಮಾಡುವಂತೆ ಮನವಿ ಮಾಡಲಾಗಿದೆ.
ಕೊರೋನಾ ಹಿನ್ನಲೆ ದೇವಾಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೂಡ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ದೇವಸ್ಥಾನದ ಸಿಬ್ಬಂದಿಗಳ ಆರೋಗ್ಯ ಕಾಳಜಿ ಮುಖ್ಯವಾಗಿದ್ದು, ಸೇವೆಗೆ ಹಾಜರಾಗುವ ಮುನ್ನ ಎಲ್ಲರೂ ಕೊರೋನಾ ಪರೀಕ್ಷೆಗೆ ವರದಿ ಸಲ್ಲಿಸಿದ್ದಾರೆ.
ಪ್ರತಿವರ್ಷ ಅಶ್ವಯುಜ ಹುಣ್ಣಿಮೆಯಂದು ಮಾತ್ರ ಬಾಗಿಯುವ ತೆರಯುವ ದೇವಾಲಯ ಬಲಿಪಾಡ್ಯಮಿಯಂದು ಬಾಗಿಲು ಹಾಕಲಾಗುತ್ತದೆ. ಈ ದೇವಾಲಯದ ವಿಶೇಷವೆಂದರೇ ವರ್ಷದ ಬಳಿಕ ಬಾಗಿಲು ತೆರದಾಗ ದೇವಿ ಮೇಲಿರುವ ಹೂವು ಬಾಡಿರುವುದಿಲ್ಲ. ದೀಪ ಕೂಡ ಉರಿಯುತ್ತಲಿರುತ್ತದೆ. ಇದೇ ಕಾರಣಕ್ಕೆ ಈ ದೇವಿ ಪವಾಡ ದೇವತೆ ಎಂಬ ನಂಬಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಹಾಸನಾಂಬೆ ದರ್ಶನ ಹೆಚ್ಚು ಖ್ಯಾತಿ ಗೊಂಡಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಹಾಸನಾಂಬ ದೇವಾಲಯದ ಪೂಜೆ ಪುನಸ್ಕಾರಗಳ ನೇರ ಪ್ರಸಾರ ವೀಕ್ಷಿಸಿ
ಇತ್ತೀಚಿನ ದಿನಗಳಲ್ಲಿ ಹಾಸನಾಂಬೆ ದರ್ಶನ ಹೆಚ್ಚು ಖ್ಯಾತಿ ಗೊಂಡಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ