ಹುಬ್ಬಳ್ಳಿ - ದೇಶದೆಲ್ಲೆಡೆ ಆಜಾದಿ ಕಾ ಅಮೃತ ಮಹೋತ್ಸವದ (Azadi Ka Amirt Mahotsava) ಕಳೆ ಬರಲಾರಂಭಿಸಿದೆ. ಪ್ರಧಾನಿ ಮೋದಿ (PM Modi) ಅವರ ಕರೆಗೆ ಓಗೊಟ್ಟು ಮನೆ ಮನೆಯಲ್ಲಿಯಲ್ಲಿ ತ್ವಿವರ್ಣ ಧ್ವಜ (National Flag) ಹಾರಾಟಕ್ಕೆ ಜನತೆ ಸಿದ್ಧತೆ ಮಾಡಿಕೊಳ್ತಿದಾರೆ. ಪಾಲಿಸ್ಟರ್ ಧ್ವಜಕ್ಕೆ (Polyester Cloth) ಅವಕಾಶದ ಹೊರತಾಗಿಯೂ ಖಾದಿ ರಾಷ್ಟ್ರಧ್ವಜಕ್ಕೆ (Khadi National Flag) ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ. ಪ್ರತಿ ವರ್ಷಕ್ಕಿಂತ ಶೇ. 25 ರಷ್ಟು ಧ್ವಜಗಳ ಮಾರಾಟ ಹೆಚ್ಚಾಗಿದ್ದು, ಹುಬ್ಬಳ್ಳಿಯ (Hubballi) ಖಾದಿ ರಾಷ್ಟ್ರ ಧ್ವಜ ತಯಾರಿಕಾ ಘಟಕದಲ್ಲಿ ಹಗಲಿರುಳೂ ಸಿಬ್ಬಂದಿ ಧ್ವಜ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಭಾರತ ದೇಶ ಅವಿಸ್ಮರಣೀಯ ದಿನಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ದೇಶ ಸಿದ್ಧಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮನೆ ಮನೆ ಮೇಲೆಯೂ ತ್ರಿವರ್ಣ ಧ್ವಜ ಹಾರಾಟ ಮಾಡಲಿ ಅಂತ ಕರೆ ನೀಡಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಖಾದಿ ರಾಷ್ಟ್ರದ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ.
1.50 ಕೋಟಿ ಮೌಲ್ಯದ ಧ್ವಜ ಮಾರಾಟ
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಲಾರಂಭಿಸಿದ್ದಾರೆ. ಈ ವರ್ಷದ ಏಪ್ರಿಲ್ ನಿಂದ ಜುಲೈವರೆಗೆ 1.50 ಕೋಟಿ ರೂಪಾಯಿ ಮೌಲ್ಯದ ಧ್ವಜ ಮಾರಾಟ ಮಾಡಲಾಗಿದೆ. ಪ್ರತಿ ವರ್ಷಕ್ಕೆ ಹೋಲಿಸಿದಲ್ಲಿ ಶೇ. 25 ರಷ್ಟು ಧ್ವಜ ಮಾರಾಟ ಹೆಚ್ಚಳವಾಗಿದೆ.
ಇದನ್ನೂ ಓದಿ: IISc Multispecialty Hospital ಗೆ ಈಗ HDFC ಬಲ, ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆ
ಆಗಸ್ಟ್ 15 ಹತ್ತಿರ ಬಂದಂತೆಯೇ ಖಾದಿ ಧ್ವಜಕ್ಕೆ ಮತ್ತಷ್ಟು ಬೇಡಿಕೆ ವ್ಯಕ್ತವಾಗಿದೆ. ರಾಷ್ಟ್ರಧ್ವಜ ತಯಾರಿಕೆಯ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯದ್ದಾಗಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರೋ ರಾಷ್ಟ್ರ ಧ್ವಜ ತಯಾರಿಕಾ ಘಟಕದಲ್ಲಿ ಒಂಬತ್ತು ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ.
ಇಲ್ಲಿಯೇ ಸಿದ್ಧವಾಗುತ್ತೆ ತಿರಂಗ
ಪುಟ್ಟ ಶಾಲೆ ಗ್ರಾ.ಪಂ. ನಿಂದ ಹಿಡಿದು ಕೆಂಪು ಕೋಟೆವರೆಗೂ ಹಾರಾಡೋ ಧ್ವಜ ಇಲ್ಲಿ ತಯಾರಾದದ್ದನ್ನೇ ಬಳಸಲಾಗುತ್ತದೆ. ಕೇಂದ್ರ ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ನಂತರ ಪಾಲಿಸ್ಟರ್ ಧ್ವಜ ಹಾರಾಟಕ್ಕೂ ಅವಕಾಶ ಸಿಕ್ಕಿದೆ.
ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿದ್ದರೂ ಖಾದಿ ರಾಷ್ಟ್ರ ಧ್ವಜಕ್ಕೆ ಬೇಡಿಕೆ ತಗ್ಗಿಲ್ಲ. ದೇಶದ ಮೂಲೆ ಮೂಲೆಗಳಿಂದಲೂ ಖಾದಿ ರಾಷ್ಟ್ರ ಧ್ವಜಕ್ಕೆ ಬೇಡಿಕೆ ಬರಲಾರಂಭಿಸಿದೆ. ಅದರಲ್ಲಿಯೂ ಮನೆಯ ಮೇಲೆ ಹಾರಾಟ ಮಾಡೋ ಧ್ವಜಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ.
1.80 ಕೋಟಿ ಮೌಲ್ಯದ ಧ್ವಜಗಳಿಗೆ ಬೇಡಿಕೆ
ಖಾದಿ ಧ್ವಜಕ್ಕೆ ಅತಿ ಹೆಚ್ಚು ಬೇಡಿಕೆ ಬಂದಿರೋದು ಕರ್ನಾಟಕ ರಾಜ್ಯದಿಂದ ಎನ್ನುತ್ತಾರೆ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ್ ಮಠಪತಿ. ಇದರ ನಂತರದ ಸ್ಥಾನ ಮಹಾರಾಷ್ಟ್ರ ಹಾಗೂ ದೆಹಲಿಗಳದ್ದು. ಇದುವರೆಗೆ 1.80 ಕೋಟಿ ರೂಪಾಯಿ ಮೌಲ್ಯದ ಧ್ವಜಗಳಿಗೆ ಆರ್ಡರ್ ಬಂದಿದ್ದು, ಈ ಪೈಕಿ 1.50 ಕೋಟಿ ರೂಪಾಯಿ ಮೌಲ್ಯದ ಧ್ವಜಗಳ ಕೇಂದ್ರದಿಂದ ಸರಬರಾಜು ಮಾಡಲಾಗಿದೆ.
ಇನ್ನೂ 30 ಲಕ್ಷ ರೂಪಾಯಿ ಮೌಲ್ಯದಷ್ಟು ಧ್ವಜ ಪೂರೈಕೆಯ ಜವಾಬ್ದಾರಿ ಕೇಂದ್ರದ ಮೇಲಿದೆ. ಇದರ ಹೊರತಾಗಿಯೂ ನಿತ್ಯ ಹೊಸ ಹೊಸ ಆರ್ಡರ್ ಬರ್ತಿದೆ. ಎಷ್ಟೇ ಬೇಡಿಕೆ ಬಂದರೂ ಪೂರೈಕೆ ಮಾಡೋ ಪ್ರಯತ್ನ ಮಾಡ್ತೇವೆ ಅಂತಾರೆ ಶಿವಾನಂದ್ ಮಠಪತಿ.
ಹಗಲು ರಾತ್ರಿ ಕೆಲಸ ಮಾಡುತ್ತಿರುವ ಸಿಬ್ಬಂದಿ
ಏಕಾಏಕಿ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಿಬ್ಬಂದಿಯಿಂದ ಓವರ್ ಟೈಮ್ ಡ್ಯೂಟಿ ಮಾಡಲಾರಂಭಿಸಿದ್ದಾರೆ. ಖಾದಿ ಗ್ರಾಮೋದ್ಯೋಗ ಸಂಸ್ಥೆ ಸಿಬ್ಬಂದಿ ಹಗಲು ಮತ್ತು ರಾತ್ರಿಯೂ ಕೆಲಸ ಮಾಡ್ತಿದಾರೆ. ಬೆಳಿಗ್ಗೆ ಕೆಲಸಕ್ಕೆ ಬಂದ ಸಿಬ್ಬಂದಿಯಿಂದ ರಾತ್ರಿ 8 ಗಂಟೆವರೆಗೂ ಧ್ವಜ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
30 ಸಿಬ್ಬಂದಿ ಜೊತೆ ಹೆಚ್ಚುವರಿಯಾಗಿ ಮೂವರು ಸಿಬ್ಬಂದಿಯನ್ನು ಸಂಸ್ಥೆ ತೆಗೆದುಕೊಂಡಿದೆ. ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜಕ್ಕೆ ಬೇಡಿಕೆ ಹೆಚ್ಚಾಗಿದೆ. ಪಾಲಿಸ್ಟರ್ ಧ್ವಜಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಖಾದಿ ಧ್ವಜಕ್ಕೆ ಬೇಡಿಕೆ ಕುಗ್ಗಿಲ್ಲ. ಕೊಟ್ಟ ಆರ್ಡರ್ ಪೂರೈಸಲಾರದಷ್ಟು ಬೇಡಿಕೆ ವ್ಯಕ್ತವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಅನ್ನಪೂರ್ಣ ದೊಡ್ಡಮನಿ.
ಸಂತೋಷ ವ್ಯಕ್ತಪಡಿಸುತ್ತಿರೋ ಧ್ವಜ ತಯಾರಿಕಾ ಸಿಬ್ಬಂದಿ
ಹೀಗಾಗಿ ಹಗಲಿರುಳೂ ಕೆಲಸ ಮಾಡಿ ರಾಷ್ಟ್ರ ಧ್ವಜ ತಯಾರಿಸ್ತಿದ್ದೇವೆ. ಎಷ್ಟೇ ಬೇಡಿಕೆ ಬಂದರೂ ನಾವು ಪೂರೈಸೋಕೆ ಸಿದ್ಧರಿದ್ದೇವೆ. ಉತ್ಸಾಹದಿಂದಲೇ ಧ್ವಜ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಹಗಲು ಇರುಳು ಕೆಲಸ ಮಾಡಿದರೂ ನಮಗೆ ಬೇಜಾರ್ ಆಗ್ತಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ರೂ ತುಂಬಾ ಖುಷಿ ಇದೆ. ಅಮೃತ ಮಹೋತ್ಸವ ಸಂಭ್ರಮದಲ್ಲಿ ನಾವು ಭಾಗಿಯಾಗ್ತಿದ್ದೇವೆ ಅನ್ನೋ ಖುಷಿಯಿದೆ. ದೇಶ ಸೇವೆಗೆ ಈ ರೀತಿ ಅವಕಾಶ ಸಿಕ್ಕಿದೆ ಅಂತ ಭಾವಿಸಿ ಕೆಲಸ ಮಾಡ್ತಿದ್ದೇವೆ ಅಂತ ರಾಷ್ಟ್ರ ಧ್ವಜ ತಯಾರಿಕೆ ಕೇಂದ್ರದ ಸಿಬ್ಬಂದಿ ರಿಯಾನಾ ಬಳ್ಳಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: National Handloom Day: ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ ಉದ್ಘಾಟನೆ
ಪಾಲಿಸ್ಟರ್ ಧ್ವಜ ತಯಾರಿಕೆಗೆ ಅವಕಾಶ ನೀಡಿರೋದ್ರಿಂದ ಖಾದಿ ರಾಷ್ಟ್ರ ಧ್ವಜಕ್ಕೆ ಬೇಡಿಕೆ ತಗ್ಗುವುದೆಂಬ ಆತಂಕ ಎದುರಾಗಿತ್ತು. ಆದರೆ ಇದೆಲ್ಲದರ ನಡುವೆಯೂ ಅಮೃತ ಮಹೋತ್ಸವದ ಸಂಭ್ರಮಕ್ಕೆ ಜನ ಖಾದಿ ರಾಷ್ಟ್ರ ಧ್ವಜವನ್ನು ಆಯ್ಕೆ ಮಾಡಿಕೊಳ್ತಿದಾರೆ. ಇದರಿಂದಾಗಿ ಬೆಂಗೇರಿಯಲ್ಲಿ ಸಿದ್ಧಗೊಳ್ತಿರೋ ಖಾದಿ ರಾಷ್ಟ್ರ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದ್ದು, ಪೂರೈಕೆಗಾಗಿ ಇಲ್ಲಿನ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ