news18-kannada Updated:January 20, 2021, 7:17 PM IST
ಹೆಚ್. ವಿಶ್ವನಾಥ್- ಸಿದ್ದರಾಮಯ್ಯ
ಮೈಸೂರು(ಜ.20): ಕುರುಬ ಸಮುದಾಯವನ್ನ ಎಸ್. ಟಿ ಸೇರಿಸುವ ವಿಚಾರವಾಗಿ ಕಾಗಿನೆಲೆ ಸ್ವಾಮೀಜಿ ಪಾದಯಾತ್ರೆಗೆ RSS ಫಂಡ್ ನೀಡಿದ್ದಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯರ ಆರೋಪಕ್ಕೆ ಅದೇ ಸಮುದಾಯದ ಮತ್ತೊಬ್ಬ ಮುಖಂಡ ಹೆಚ್.ವಿಶ್ವನಾಥ್ ಕೆಂಡಾಮಂಡಲರಾಗಿದ್ದಾರೆ. ಕಾಗಿನೆಲೆ ಸ್ವಾಮೀಜಿ ವಿರುದ್ದ ಹೇಳಿಕೆ ನೀಡಿರುವ ಕಾರಣ ಕುರುಬ ಸಮಾಜದಿಂದ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಅಂತ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನೇರವಾಗಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ. ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ ಅಂತ ಸಿಡಿಮಿಡಿಗೊಂಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆರೋಪದಿಂದಾಗಿ ನನಗೆ ಬಹಳ ನೋವಾಗಿದೆ. ನಮ್ಮ ಸಮುದಾಯದ ಸ್ವಾಮೀಜಿರನ್ನ ನಾವೆಲ್ಲ ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಅಂತಹವರ ವಿರುದ್ದ ಹಾಗೂ ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ. ಸಿದ್ದರಾಮಯ್ಯ ತಾವು ನಡೆದು ಬಂದ ಹಾದಿಯನ್ನ ಮರೆತಿದ್ದಾರೆ. ಇದೇ ಮಠದಿಂದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು, ಆದ್ರೆ ಇದೀಗ ಅದೇ ಮಠದ ವಿರುದ್ದ ಮಾತನಾಡುತ್ತಿದ್ದೀರಲ್ಲ, ಇದು ಎಷ್ಟರ ಮಟ್ಟಿಗೆ ಸರಿ? ಅಂತ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರೇ ನಿಮಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ, ಅಷ್ಟೇ ಯಾಕೆ? ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಮಠ ಕಟ್ಟೋಕೆ ನಾವು 3 ವರ್ಷ ಇಡೀ ರಾಜ್ಯ ಸುತ್ತಾಡಿ ಬಂದಿದ್ದೇವೆ. ಮಠ ಕಟ್ಟೋಕೆ ನೀವು 10 ಪೈಸೆಯಾದರೂ ಹಣ ನೀಡಿದ್ದೀರಾ ಹೇಳಿ? ಸಮಾಜದಿಂದ ಬೆಳೆದು ಸಮಾಜದ ಸ್ವಾಮೀಜಿಗೆ ಅಗೌರವ ತೋರುವುದು ಎಷ್ಟು ಸರಿ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ, ಇದು ನಿಮಗೆ ಗೌರವ ತರುತ್ತಾ? ಬೇಕಿದ್ದರೆ ನೀವು ವಿಶ್ವನಾಥ್ ಬಗ್ಗೆ ಮಾತನಾಡಿ, ಈಶ್ವರಪ್ಪರ ಬಗ್ಗೆ ಮಾತನಾಡಿ, ಹೆಚ್.ಎಂ.ರೇವಣ್ಣರ ಬಗ್ಗೆ ಮಾತನಾಡಿ. ಆದ್ರೆ ಸಮುದಾಯದ ಸ್ವಾಮೀಜಿ ಬಗ್ಗೆ ಆರ್ಎಸ್ಎಸ್ ವಿಚಾರವಾಗಿ ಆರೋಪ ಮಾಡಿ ನೀವು ತುಂಬಾ ಚಿಕ್ಕವರಾಗಿದ್ದೀರಾ ಸಿದ್ದರಾಮಯ್ಯ. ನಿಮಗೆ ಇದು ಶೋಭೆ ತರುವಂತದ್ದಲ್ಲ ಅಂತ ಸಿದ್ದು ವಿರುದ್ದ ಎಂಎಲ್ಸಿ ಹೆಚ್.ವಿಶ್ವನಾಥ್ ಕಿಡಿಕಾರಿದರು.
ರಾಜಭವನ ಮುತ್ತಿಗೆಗೆ ಯತ್ನ; ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನನ್ನು ವಶಕ್ಕೆ ಪಡೆದ ಪೊಲೀಸರು
ಇನ್ನು ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ವಿಚಾರವಾಗಿ, ಸಿದ್ದರಾಮಯ್ಯ ತಮ್ಮ ಇಬ್ಬಂದಿತನವನ್ನು ನಿಲ್ಲಿಸಬೇಕು ಅಂತ ವಿಶ್ವನಾಥ್ ಆಗ್ರಹಿಸಿದ್ದಾರೆ. ಅವರಿಗೆ ಬಹುಪರಾಕ್ ಹೇಳುವವರು ಬೇಕು, ಅವರು ಮುಂದೆ ಇದ್ದರೆ ಉಳಿದವರೆಲ್ಲ ಹಿಂದೆ ಇರಬೇಕು ಅಂತ ಬಯಸುವವರು. ಹೀಗಾಗಿ ಅವರು ಎಸ್ಟಿ ಮಿಸಲಾತಿ ವಿಚಾರವಾಗಿ ಇಬ್ಬಂದಿತನವನ್ನ ಮೆರೆಯುತ್ತಿದ್ದಾರೆ. ಆರ್ಎಸ್ಎಸ್ ಸ್ವಾಮೀಜಿ ಪಾದಯಾತ್ರೆಗೆ ದುಡ್ಡು ಕೊಡುತ್ತಿದೆ ಅಂತ ಹೇಳಿರುವ ತಮ್ಮ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ಸು ಪಡೆಯಬೇಕು. ಇಲ್ಲವಾದರೆ ಸಮಾಜದಿಂದ ಅವರನ್ನ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅವರ ಹೇಳಿಕೆಯಿಂದ ಸ್ವಾಮೀಜಿ ಸಾಕಷ್ಟು ಬೇಸರಗೊಂಡಿದ್ದಾರೆ. ಇಂತಹ ಆರೋಪ ಬಂತಲ್ಲ ಅಂತ ಸಿದ್ದರಾಮಯ್ಯನವರ ಮಾತಿನಿಂದ ಕುಗ್ಗಿ ಹೋಗಿದ್ದಾರೆ. ಸಿದ್ದರಾಮಯ್ಯ ಕುಲಶಾಸ್ತ್ರ ಅಧ್ಯಯನ ಮಾಡಬೇಕೆಂದು ಹೇಳಿದ್ದಾರೆ. ಹೇ ಸಿದ್ದರಾಮಯ್ಯ ನೀನೊಬ್ಬನೆ ಬುದ್ದಿವಂತ ಅಲ್ಲ, ನಮಗೂ ಅದು ಗೊತ್ತಿದೆ. ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು. ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಅಂತ ಹೆಚ್.ವಿಶ್ವನಾಥ್ ಸಿದ್ದರಾಮಯ್ಯನವರ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
Published by:
Latha CG
First published:
January 20, 2021, 7:17 PM IST