ಮೈಸೂರು (ಡಿ. 23): ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ನಾಳೆಯಿಂದ ಡಿ. 1 ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಮಾಡಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ಮಾಜಿ ಸಚಿವ ಎಚ್ ಸಿ ಮಹದೇವಪ್ಪ, ಕೊರೋನಾ ಏನು ಗೂಬೆನಾ? ರಾತ್ರಿ ಮಾತ್ರ ಎಚ್ಚರದಿಂದ ಇರಲು ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರ ರಾತ್ರಿ ಮಾತ್ರ ಕರ್ಫ್ಯೂ ಜಾರಿ ಮಾಡುವ ಮೂಲಕ ಜನರಲ್ಲಿ ಆತಂಕ ಹುಟ್ಟಿಸುತ್ತಿದೆ ಎಂದಿದ್ದಾರೆ. ಅಲ್ಲದೇ ಈಗಾಗಲೇ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿ, ಚೇತರಿಸಿಕೊಳ್ಳುತ್ತಿರುವ ವ್ಯಾಪಾರ, ಶಿಕ್ಷಣ, ಕಲೆ ಮತ್ತು ಸಾಹಿತ್ಯ, ಆರೋಗ್ಯ ಹಾಗೂ ಎಲ್ಲ ವಿಧದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳು ಆತಂಕಕ್ಕೆ ಸಿಲುಕಿದೆ. ಆದರೂ ಸರ್ಕಾರ ಬೇಜಾವಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.
ಇನ್ನು ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ದೆಹಲಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್. ರಾಜಣ್ಣ, ನೈಟ್ ಕರ್ಫ್ಯೂ ನಿಂದ ಪ್ರಯೋಜನ ಇಲ್ಲ. ಇದು ಭಯ ಹುಟ್ಟಿಸಲು ಮಾಡುತ್ತಿರುವ ತಂತ್ರ. ನೈಟ್ ಕರ್ಫ್ಯೂಯಿಂದ ರೋಗ ಹರಡುವಿಕೆ ತಡೆಯಲು ಸಾಧ್ಯವೇ ಇಲ್ಲ. ಇದರ ಬದಲು ಬೇರೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಮೇರಿಕಾದಲ್ಲಿ ಲಕ್ಡೌನ್ ಮಾಡಿರಲೇ ಇಲ್ಲ. ನೈಟ್ ಕರ್ಫ್ಯೂನಿಂದ ಜನಸಾಮಾನ್ಯರಿಗೂ ತೊಂದರೆಯಾಗಲಿದೆ. ಸರ್ಕಾರಕ್ಕೂ ಆರ್ಥಿಕ ಸಂಕಷ್ಟ ಸೃಷ್ಟಿಯಾಗುತ್ತದೆ. ಸರ್ಕಾರಕ್ಕೆ ಯಾರು ಸಲಹೆ ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಸಂಸದ ಡಿಕೆ ಸುರೇಶ್ ಮಾತನಾಡಿ, ನೈಟ್ ಕರ್ಫ್ಯೂಗಿಂತ ಫುಲ್ ಕರ್ಫ್ಯೂ ಮಾಡಲಿ. ವ್ಯಾಕ್ಸಿನೇಷನ್ ಬಂದಿದೆ ಎಂದ ಮೇಲೆ ನೈಟ್ ಕರ್ಫ್ಯೂ ಯಾಕೆ ? ವಾಕ್ಸಿನೇಷನ್ ಬಂದಮೇಲೆ ಬೇರೆ ವೈರಸ್ ಹೇಗೆ ಬರುತ್ತೆ. ಹಾಗೇಂದರೆ ವಾಕ್ಸಿನೇಷನ್ ಫೇಲ್ ಆಗಿದೆ ಎಂದು. ಸರ್ಕಾರ ವಾಕ್ಸಿನೇಷನ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಈ ಮೂಲಕ ಜನರನ್ನ ಹೆದರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ