..ಬಾಗಲಕೋಟೆ (ಆ. 8): ನಮ್ಮ ರಾಜ್ಯದ ಪಾಲಿನ ನೀರು ಹಂಚಿಕೊಳ್ಳೋದಕ್ಕೆ ಯಾರ ಅಪ್ಪಣೆನೂ ಬೇಕಾಗಿಲ್ಲ. ನಮಗೆ ಹಂಚಿಕೆಯಾದ ನೀರು ಸದ್ಬಳಕೆ ಮಾಡಿಕೊಳ್ಳಲು ಯಾರ ಅಪ್ಪಣೆನೂ ಬೇಕಾಗಿಲ್ಲ. ಅಣ್ಣಾಮಲೈ ಹೋರಾಟ ಅರ್ಥಹೀನ ಎಂದು ಜಲಸಂಪನ್ಮೂಲ ಇಲಾಖೆ ನೂತನ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು , ಮೇಕೆದಾಟು ಯೋಜನೆಯನ್ನು ಕಾನೂನಾತ್ಮಕವಾಗಿ ನಾವು ಮಾಡ್ತೇವೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ನಾವು ಮಾಡ್ತಿದ್ದೇವೆ. ವಿದ್ಯುತ್ ಉತ್ಪಾದನೆ ಮಾಡಿದ ನಂತರ ನೀರು ನದಿಗೆ ಹರಿದುಹೋಗುತ್ತೆ. ಅಣ್ಣಾಮಲೈ ಹೋರಾಟದಲ್ಲಿ ಯಾವುದೇ ಅರ್ಥ ಇಲ್ಲ. ಅದು ಅರ್ಥ ಹೀನವಾದ ಹೋರಾಟ. ಖಂಡಿತವಾಗಿ ನ್ಯಾಯ ಸಮ್ಮತವಾಗಿ ನಾವು ಮಾಡ್ತೇವೆ. ನಮ್ಮ ಪಾಲಿನ ನೀರು ಹಂಚಿಕೊಳ್ಳೋದಕ್ಕೆ ಯಾರ ಅಪ್ಪಣೆನೂ ಬೇಕಾಗಿಲ್ಲ ಎಂದು ಮೇಕೆದಾಟು ವಿಚಾರದಲ್ಲಿ ಕ್ಯಾತೆ ತೆಗೆದ ಅಣ್ಣಾಮಲೈಗೆ ತಿರುಗೇಟು ನೀಡಿದ್ದಾರೆ.
ಕಾನೂನಾತ್ಮಕವಾಗಿ ಎದುರಿಸೋಕೆ ಲಿಗಲ್ ಟೀಮ್ ಚುರುಕುಗೊಳಿಸುತ್ತೇವೆ..!
ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಖಾತೆಗಳು ಪ್ರಭಾವಿನೆ ಯಾವುದೇ ಖಾತೆ ಹೆಚ್ಚು ಕಡಿಮೆ ಅಲ್ಲ. ನಾನು ಹಿಂದೆ ಕನ್ನಡ ಮತ್ತು ಸಂಸ್ಕೃತಿ, ಲೋಕೋಪಯೋಗಿ, ಸಣ್ಣ ನೀರಾವರಿ ಸೇರಿದಂತೆ ಹಲವು ಇಲಾಖೆಗೆ ಮಂತ್ರಿಯಾಗಿದ್ದೆ. ಈಗ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಸೇರಿ ಜಲಸಂಪನ್ಮೂಲ ಖಾತೆಯನ್ನು ವಹಿಸಿಕೊಟ್ಟಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಐದು ವರ್ಷ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ನೀರಾವರಿ ಇಲಾಖೆ ಮಾಹಿತಿ ಮತ್ತು ಜ್ಞಾನ ಇದೆ. ಅವರ ಸಲಹೆ, ಸಹಕಾರ ಪಡೆದು. ನಮ್ಮ ರಾಜ್ಯಕ್ಕೆ ಹಂಚಿಕೆ ಯಾಗಿರುವ ನೀರು ಸದ್ಬಳಕೆ ಮಾಡಿಕೊಳ್ಳೋದಕ್ಕೆ ಪ್ರಾರಂಭ ಮಾಡ್ತೇವೆ.
ನೆರೆಹೊರೆ ರಾಜ್ಯಗಳ ಜೊತೆ ನೀರಿನ ವಿವಾದಗಳನ್ನ ಕಾನೂನಾತ್ಮಕವಾಗಿ ಎದುರಿಸೋಕೆ ಲಿಗಲ್ ಟೀಮ್ ಚುರುಕುಗೊಳಿಸುತ್ತೇವೆ. ರಾಜ್ಯದ ಪಾಲೀನ ನೀರನ್ನು ಮತ್ತು ಹೆಚ್ಚುವರಿಯಾಗಿ ಪಡದುಕೊಳ್ಳಲು ಅವಕಾಶ ಇದ್ದಲ್ಲಿ ಉಪಯೋಗ ಮಾಡ್ತೆವೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನನ್ನ ಮೇಲೆ ಜವಾಬ್ದಾರಿ ಇದೆ. ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಹೆಚ್ಚಿನ ನೆರವು ಪಡೆಯಬೇಕಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅದನ್ನು ಕೂಡ ಸಮರ್ಥವಾಗಿ ಎದುರಿಸಲು ಪ್ರಯತ್ನ ಮಾಡ್ತೇವೆ ಎಂದರು.
ಇದನ್ನು ಓದಿ: ಹೊರನಾಡಿನವರ ಮೇಲುಗೈ; ಕೊಂಕಣ ರೈಲ್ವೆಯಲ್ಲಿ ಸ್ಥಳೀಯರಿಗಿಲ್ಲ ಅವಕಾಶ
ಪ್ರೀತಂಗೌಡರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ
ಇನ್ನು ಇದೆ ವೇಳೆ ಸಿಎಂ ಬೊಮ್ಮಾಯಿ ಮಾಜಿ ಪ್ರಧಾನಿ ದೇವೆಗೌಡರ ಭೇಟಿ ವಿಚಾರಕ್ಕೆ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಪ್ರೀತಂಗೌಡರು ಈ ಬಗ್ಗೆ ತಪ್ಪಾಗಿ ಅರ್ಥೈಸಿ ಕೊಂಡಿರಬಹುದು. ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯರು, ಅವರ ಭೇಟಿ ಸೌಜನ್ಯ ಅಷ್ಟೇ. ಇದರಲ್ಲಿ ರಾಜಕಾರಣ ಇಲ್ಲ. ಇದು ಹೊಂದಾಣಿಕೆ ಸಹ ಅಲ್ಲ. ಪ್ರೀತಂಗೌಡ ತಪ್ಪಾಗಿ ಅರ್ಥೈಸಿ ಕೊಳ್ಳದೇ ಸರಿಯಾಗಿ ಅರ್ಥೈಸಿ ಕೊಳ್ಳಬೇಕು ಎಂದರು.
ಸಿಎಂ ಬೊಮ್ಮಾಯಿ ಅವರ ನೇತೃತ್ವದ ಸಕಾ೯ರದಲ್ಲಿ ಎಲ್ಲವೂ ಸರಿ ಇದೆ. ನಮ್ಮದು ಪೂರ್ಣಾ ವಧಿ ಸಕಾ೯ರ ಇರುತ್ತೆ. ಸಿಎಂ ಅವರು ಕೆಲಸ ಕಾಯ೯ ಮಾಡಿ ಅಭಿವೃದ್ಧಿ ಕಡೆಗೆ ಗಮನ ಕೊಡ್ತಾರೆ. ನಾನು ಬೆಂಗಳೂರಿಗೆ ಇಲಾಖೆ ಅಧಿಕಾರಿಗಳ ಸಭೆ ಮಾಡ್ತೀನಿ. ನಂತರ ಸಿಎಂ ಅವರ ಗಮನಕ್ಕೆ ಬಂದು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ಮಾಡೋಣ ಎಂದರು.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ