ಬೆಂಗಳೂರು: 74ನೇ ಗಣರಾಜ್ಯೋತ್ಸವದ (Republic Day) ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ದೇಶದ ಹಳ್ಳಿ ಹಳ್ಳಿಯ ಶಾಲೆಗಳಿಂದ ಹಿಡಿದು ರಾಷ್ಟ್ರ ರಾಜಧಾನಿಯ ತನಕ ರಾಷ್ಟ್ರ ಧ್ವಜಾರೋಹಣ (Flag Hoist) ಮಾಡಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲೂ ಕೂಡ ವಿಜೃಂಭಣೆಯಿಂದ ಗಣರಾಜ್ಯೋತ್ಸವ ನಡೆದಿದ್ದು, ರಾಜ್ಯವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಭಾಷಣ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಕೊಂಡಾಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕಳೆದ ವರ್ಷ 2022 ಅಮೃತ ಮಹೋತ್ಸವದ ವರ್ಷವಾಗಿ ಘೋಷಣೆ ಮಾಡಿದ್ದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ನಟ, ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದ್ದರ ಬಗ್ಗೆಯೂ ಮಾತನಾಡಿರುವ ಅವರು, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಮಹಿಳಾ ಸಂಘಗಳಿಗೆ ನೀಡಿರುವ ಧನ ಸಹಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Republic Day: 74ನೇ ಗಣರಾಜ್ಯೋತ್ಸವ ಆಚರಣೆಗೆ ಕೌಂಟ್ಡೌನ್ ಶುರು: ಈ ಬಾರಿ ಏನೇನಿರಲಿದೆ ಗೊತ್ತಾ?
ರಾಜ್ಯ ಸರ್ಕಾರದ ಸಾಧನೆಗಳ ಉಲ್ಲೇಖ
ಇನ್ನು, ಮನೆ ಬಾಗಿಲಿಗೆ ಮಾಸಾಶನದಡಿ ಪಿಂಚಣಿ ನೀಡುವ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ನಮ್ಮ ಕ್ಲಿನಿಕ್ ಹಾಗೂ ಮಹಿಳಾ ಸ್ವಾಸ್ಥ್ಯ ಚಿಕಿತ್ಸಾಲಯಗಳು ಮತ್ತು ಪಾಲಿ ಕ್ಲಿನಿಕ್ಗಳ ಸ್ಥಾಪನೆ, ಗ್ರಾಮ ಬಂಧು ಸೇತು ಯೋಜನೆಯಡಿ ಕಾಲು ಸುಂಕಗಳ ಸೇತುವೆ ನಿರ್ಮಾಣ ಮತ್ತು ರಾಷ್ಟ್ರೀಯ ಯುವ ಜನೋತ್ಸವದಿಂದ ಅನುಕೂಲ ಹಾಗೂ ಹಿಂದುಳಿದ ವರ್ಗಗಳ ನಿಗಮಗಳಿಗೆ ನೀಡಿರುವ ಅನುದಾನಗಳ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
21 ನಿಮಿಷಗಳ ಕಾಲ ಭಾಷಣ
ಇನ್ನು ಅಮೃತ ಜ್ಯೋತಿ ಯೋಜನೆಯಡಿಯಲ್ಲಿ ಎಸ್ಸಿ ಎಸ್ಟಿ ಸಮುದಾಯದ ಜನರಿಗೆ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ನೀಡಿರುವುದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಯೋಜನೆಯಡಿ ಸಹಾಯ ಧನ ಹೆಚ್ಚಳ ಮಾಡಿರುವುದು, ಪೌರ ಕಾರ್ಮಿಕರ ಪೌರಾಡಳಿತ ಸೇವೆ ಸೇರಿದಂತೆ ರಾಜ್ಯ ಸರ್ಕಾರ ಮಾಡಿರುವ ಪ್ರಮುಖ ಹತ್ತು ಹಲವು ಸಾಧನೆಗಳ ಬಗ್ಗೆ ಮಾತ್ರ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸುಮಾರು 21 ನಿಮಿಷಗಳ ಕಾಲ ಮಾತನಾಡಿದರು.
ಬೃಹತ್ ರಾಷ್ಟ್ರಧ್ವಜ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಗಣರಾಜ್ಯೋತ್ಸವದ ಹಿನ್ನೆಲೆ ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ 24×36 ಅಡಿ ಅಗಲದ ರಾಷ್ಟ್ರಧ್ವಜವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಗಣರಾಜ್ಯೋತ್ಸವ ಹಿನ್ನೆಲೆ ತಯಾರು ಮಾಡಲಾಗಿದ್ದ ಈ ಬೃಹತ್ ರಾಷ್ಟ್ರಧ್ವಜದ ಉದ್ಘಾಟನೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸ್ಥಳೀಯ ಶಾಸಕ ಅಹ್ಮದ್ ಹ್ಯಾರೀಸ್ ಅವರೂ ಭಾಗಿಯಾಗಿದ್ದರು.
ಸಿಎಂ ಎದುರೇ ಆಯೋಜಕರಿಂದ ಯಡವಟ್ಟು!
ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ 24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನೆ ವೇಳೆ ಆಯೋಜಕರಿಂದ ಯಡವಟ್ಟು ಆದ ಪ್ರಸಂಗವೂ ಜರುಗಿದೆ. ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಹಗ್ಗ ಕಟ್ಟದೇ ಇದ್ದುದರಿಂದ ಧ್ವಜದ ಗಂಟು ಬಿಚ್ಚಿ ಕೊಳ್ಳದೆ ಧ್ವಜ ಹಾರಲಿಲ್ಲ. ಹೀಗಾಗಿ ಬಹಳ ಹೊತ್ತು ಧ್ವಜ ಹಾರಲಿಲ್ಲ. ಸುಮಾರು 15 ನಿಮಿಷಗಳ ಕಾಲ ಧ್ವಜ ಹಾರಿಸಲು ಸಿಎಂ ಬೊಮ್ಮಾಯಿ ಮತ್ತು ಶಾಸಕ ಹ್ಯಾರೀಸ್ ಕಸರತ್ತು ನಡೆಸಿದರು. ಬಳಿಕ ಅದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೂ ಅಪಮಾನ ಮಾಡಲಾಗಿದೆ. ಒಮ್ಮೆ ರಾಷ್ಟ್ರಗೀತೆ ಶುರುವಾಗಿ ಮೊಟಕುಗೊಳಿಸಿ ಬಳಿಕ ಎರಡನೇ ಸಲ ಪೂರ್ಣ ರಾಷ್ಟ್ರಗೀತೆ ಹಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ