ಬೆಂಗಳೂರು: ಎರಡು ಪ್ರಮುಖ ಬೇಡಿಕೆಗಳನ್ನು ಆಗ್ರಹಿಸಿ ಕರ್ನಾಟಕ ಸರ್ಕಾರಿ ನೌಕರರು (State Government Employees) ಇಂದಿನಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ. ಮುಷ್ಕರ ಕರೆ ಹಿನ್ನೆಲೆ ನಿನ್ನೆ (ಮಂಗಳವಾರ) ತಡರಾತ್ರಿವರೆಗೂ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಸರ್ಕಾರಿ ನೌಕರರ ಜೊತೆ ಸಭೆ ನಡೆಸಿದ್ದಾರೆ. ಸರ್ಕಾರಿ ನೌಕರರ ಜೊತೆಗಿನ ಸಿಎಂ ಸಂಧಾನ ಸಭೆ ವಿಫಲವಾಗಿದ್ದು, ಇಂದು ಪ್ರತಿಭಟನೆ (Protest) ನಡೆಯಲಿದೆ. ಸಿಎಂ ಕೇಳಿದ ಸಮಯಾವಕಾಶಕ್ಕೆ ಸರ್ಕಾರಿ ನೌಕರರು ಒಪ್ಪಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ನಡೆದ ಎರಡು ಸುತ್ತಿನ ಸಂಧಾನ ಸಭೆ ವಿಫಲವಾಗಿದೆ. ಇಂದು ಸುಮಾರು 6 ಲಕ್ಷ ನೌಕರರು ಸೇವೆಗೆ ಗೈರಾಗಲಿದ್ದಾರೆ.
ಮೊದಲ ಸುತ್ತಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಾವು ನಿಮ್ಮ ಪರವಾಗಿ ಇದ್ದೇವೆ ಅಂತಾ ಸಿಎಂ ಹೇಳಿದ್ದಾರೆ. ನಾವು ಕೂಡ ಅಂತಿಮ ತೀರ್ಮಾನ ಹೇಳುತ್ತೇನೆ ಎಂದು ಹೇಳಿದ್ದೀನಿ. ಅವರ ಅಭಿಪ್ರಾಯವನ್ನ ಹೇಳಿದ್ದಾರೆ ನಾವು ಪಧಾಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಮೊದಲ ಸುತ್ತಿನ ಸಭೆ ಬಳಿಕ ಷಡಕ್ಷರಿ ಹೇಳಿಕೆ
ನಾನು ಒಬ್ಬನೇ ಎಲ್ಲಾ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸದ್ಯ ಪ್ರತಿಭಟನೆ ಕೈ ಬಿಡುವ ಬಗ್ಗೆ ನಿರ್ಧಾರವಾಗಿಲ್ಲ. ಪದಾಧಿಕಾರಿಗಳ ಜೊತೆ ಮೀಟಿಂಗ್ ಮಾಡುತ್ತೇವೆ. ಸಂಧಾನ ಸಭೆ ವಿಫಲವೂ ಇಲ್ಲ, ಸಫಲವೂ ಇಲ್ಲ ಎಂದು ತಿಳಿಸಿದರು.
ಸಂಧಾನ ಮಾಡಿಕೊಳ್ಳಲು ನಾವು ಹೊಡೆದಾಟ ಮಾಡಿಕೊಂಡಿಲ್ಲ ಎಂದ ಸಿಎಸ್ ಷಡಕ್ಷರಿ, ಇದೇ ಮೊದಲ ಬಾರಿಗೆ ಮೀಟಿಂಗ್ ನಡೆದಿದೆ. ಅದರಲ್ಲಿ ಯಾವುದೇ ತೀರ್ಮಾನಕ್ಕೂ ಬರೋದಕ್ಕೂ ಅಗ್ತಿಲ್ಲ. ಎರಡು ಪ್ರಮುಖ ವಿಚಾರಗಳ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ವಂದಿಸಿದೆ. ಆದರೆ ನಮ್ಮವರ ಜೊತೆಗೆ ಮಾತಾಡಿ ನಿರ್ಧಾರ ಮಾಡಲಾಗುವುದು ಎಂದು ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟ ಮಾಡಲಿಲ್ಲ.
ಸಮಸ್ಯೆ ಬಗೆಹರಿಯುತ್ತೆ: ಸಿಎಂ ವಿಶ್ವಾಸ
ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಸರ್ಕಾರಿ ನೌಕರರು ನಮ್ಮ ಒಂದು ಭಾಗ. ಇಂದು ಕೂಡ ಅದನ್ನೇ ಹೇಳಿದ್ದೇನೆ. ವರದಿ ತರಿಸಿಕೊಂಡು ಆದೇಶ ಮಾಡುವುದಾಗಿ ವಿಧಾನಸಭೆಯಲ್ಲಿ ಹೇಳಿದ್ದೆ. ಏನು ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಹಣಕಾಸು ತೊಡಕುಗಳು ಬಗ್ಗೆ ನಾವು ಮಾತನಾಡಿದ್ದೇವೆ. ಮುಕ್ತವಾಗಿ ಇಬ್ಬರೂ ಮಾತನಾಡಿದ್ದೇವೆ ಎಂದರು.
ನಿಮ್ಮ ನಿರ್ಣಯ ಹೇಳಿ ಅದರ ಅನುಸಾರವಾಗಿ ನಾವು ಕ್ರಮ ತಗೋತಿವಿ ಅಂತ ಹೇಳಿದ್ದೇವೆ. ಪದಾಧಿಕಾರಿಗಳು ಜೊತೆ ಚರ್ಚೆ ಮಾಡಿ ತಿಳಿಸ್ತೀವಿ ಅಂತ ಹೇಳಿದ್ದಾರೆ. ಬಗೆಹರಿಯುತ್ತೆ ಅಂತ ವಿಶ್ವಾಸವಿದೆ. ಸರ್ಕಾರಿ ನೌಕರರು ನಮ್ಮ ಜೊತೆ ಮುಕ್ತವಾಗಿ ಮಾತನಾಡಿದ್ದು, ನಾವು ಸಹ ಮುಕ್ತವಾಗಿ ಮಾತನಾಡಿದ್ದೀವಿ. ನಮ್ಮ ಸರ್ಕಾರ ಕೋವಿಡ್ ಸಂದರ್ಭದಲ್ಲಿಯೂ ಸಂಬಳ ನಿಲ್ಲಿಸಿಲ್ಲ ಎಂದು ಹೇಳಿದರು.
ಸರ್ಕಾರಿ ನೌಕರರ ಜೊತೆ ಮುಕ್ತ ಮಾತುಕತೆ
ಸರ್ಕಾರಿ ನೌಕರರ ಒಕ್ಕೂಟ ಸಂಘದವರು ಕೆಲವು ಸಲಹೆಗಳನ್ನು ನೀಡಿದ್ದು, ನಿಮ್ಮ ಸಮಿತಿಯನ್ನು ವಿಷಯ ತಿಳಿಸಿ. ನಂತರ ನಿಮ್ಮೆಲ್ಲರ ಒಮ್ಮತದ ನಿಲುವು ತಿಳಿಸಲು ಹೇಳಿದ್ದೇವೆ ಎಂದರು.
ಆನಂತರ ಹಣಕಾಸಿನ ವಿಚಾರ ನೋಡಿಕೊಂಡು ಮುಂದುವರಿಸುತ್ತೇವೆ. ಮೀಟಿಂಗ್ ಒಂದು ಲೆವೆಲ್ಗೆ ಬಂದಿದೆ. ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ಹೇಳ್ತಾರೆ. ಆನಂತರ ನೋಡಿಕೊಂಡು ನಾವು ನಿಲುವಿಗೆ ಬರುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಪದಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಷಡಕ್ಷರಿ, ಗಿವ್ ಅಂಡ್ ಟೇಕ್ ಪಾಲಿಸಿಯಲ್ಲಿ ಚರ್ಚೆ ನಡೆಸಲಾಗಿದೆ. ಚರ್ಚೆ ಮಾಡಿದ ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ. ಸರ್ಕಾರದ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತಿಳಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Govt Employees Strike: ಇಂದಿನಿಂದ ಯಾವೆಲ್ಲಾ ಸೇವೆ ಬಂದ್ ಆಗಲಿವೆ?
ಮುಷ್ಕರ ವಾಪಸ್ ಪಡೆದಿಲ್ಲ
ಮುಷ್ಕರ ವಾಪಸ್ ಪಡೆದಿಲ್ಲ. ಸರ್ಕಾರ ಒಪ್ಪಿ ಆದೇಶ ಮಾಡಿದ ಬಳಿಕವಷ್ಟೇ ನಾವು ಮುಷ್ಕರದ ಹಿಂತೆಗೆದುಕೊಳ್ಳಲಾಗುವುದು. ಪರ್ಸೆಂಟೇಜ್ ಬಗ್ಗೆ ನೇರವಾಗಿ ಮಾತನಾಡುತ್ತೇವೆ. ಫಿಟ್ಮೆಂಟ್ 40% ಕೇಳಿದ್ದೇವೆ. ಐಆರ್ ಅನ್ನು ನಾವು ಕೇಳುತ್ತಿಲ್ಲ. ಮುಷ್ಕರ ನಿರಂತರವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ