ಗದಗ (ಜ. 30): ಈ ಭಾರಿ ಕೆಂಪು ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. ಹೀಗಾಗಿಯೇ ಎಲ್ಲರ ಕಣ್ಣು ರೈತರ ಮೇಲೆ ಬಿದ್ದಿದೆ. ಇದರಿಂದ ಜಮೀನಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮಾರುಕಟ್ಟೆಗೆ ತಂದರೆ, ವ್ಯಾಪಾರಸ್ಥರು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದುಕೊಳ್ಳಬೇಕು ಎನ್ನುವ ರೈತನಿಗೆ, ಇದರಿಂದ ಮೋಸವಾಗುತ್ತಿದೆ. ಈ ವರ್ಷ ಅತಿಯಾದ ಮಳೆಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿ ನಡುವೆ ಅಳಿದು ಉಳಿದು ಮೆಣಸಿನಕಾಯಿ ಫಸಲು ಕೈ ಸೇರಿದೆ. ರೈತರು ಅಂದುಕೊಂಡಂತೆ ಮೆಣಸಿನಕಾಯಿಗೆ ಬಂಪರ್ ಬೆಲೆ ಸಿಗುತ್ತಿದೆ. ಇದರ ನಡುವೆ ಜಮೀನಿನಲ್ಲಿ ಮೆಣಸಿನಕಾಯಿ ಕಳ್ಳತನ ಮಾಡುತ್ತಿರುವುದು ಕೂಡಾ ಬಯಲಾಗಿದೆ. ಇದಲ್ಲದೇ, ಎಪಿಎಂಸಿ ಯಲ್ಲಿ ಕೂಡ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಎಪಿಎಂಸಿ ಮಾರುಕಟ್ಟೆಗೆ ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ನರಗುಂದ ಸೇರಿದಂತೆ ಪಕ್ಕದ ಕೊಪ್ಪಳ, ಬಾಗಲಕೋಟ ಜಿಲ್ಲೆಯಿಂದ ಮೆಣಸಿನಕಾಯಿ ಮಾರಾಟಕ್ಕೆ ರೈತರು ಬರುತ್ತಾರೆ. ಒಂದು ವಾರದಲ್ಲಿ ಎರಡು ದಿನ ನಡೆಯುವ ಇ-ಟೆಂಡರ್ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೆ, ಕೆಲವು ವ್ಯಾಪಾರಸ್ಥರು ಮೆಣಸಿನಕಾಯಿ ತೂಕದಲ್ಲಿ ಕಳ್ಳಾಟ ನಡೆಸಿದ್ದಾರೆ. ಎಮ್ ಎಮ್ ಕನವಳ್ಳಿ ಮಳಿಗೆಯಲ್ಲಿ ತೂಕದಲ್ಲಿ ಗೋಲ್ಮಾಲ್ ನಡೆಸಿದ್ದಾರೆ ಎಂದು ರೈತರು ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ, ತೂಕದ ಯಂತ್ರವನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ನಂತರ ರೈತರಿಗೆ ಬೇರೆ ಕಡೇ ತೂಕದ ವ್ಯವಸ್ಥೆ ಮಾಡಿ, ರೈತರನ್ನು ಮನವೊಲಿಸಿದರು. ಹೀಗಾಗಿ ಹೆಚ್ಚಿನ ಬೆಲೆ ಬಂದಿದಕ್ಕೆ ವ್ಯಾಪಾರಸ್ಥರು ಮೋಸ ಮಾಡ್ತಾಯಿದ್ದಾರೆ. ಇಡೀ ಎಪಿಎಂಸಿ ಎಲ್ಲಾ ಮಳಿಗೆಗಳ ತೂಕದ ಯಂತ್ರಗಳು ಪರಿಶೀಲನೆ ನಡೆಸಬೇಕು ಅಂತಾ ರೈತರು ಒತ್ತಾಯ ಮಾಡಿದ್ದಾರೆ.
ಇನ್ನೂ ಗದಗ ಜಿಲ್ಲೆಯ ಸವಡಿ ಗ್ರಾಮದ ರೈತರ ಒಂದು ಕ್ವಿಂಟಾಲ್ ಮೆಣಸಿನಕಾಯಿ 50 ಸಾವಿರಕ್ಕೂ ಹೆಚ್ಚು ದರದಲ್ಲಿ ಮಾರಾಟವಾಗಿದೆ. ಮೆಣಸಿನಕಾಯಿ ಗುಣಮಟ್ಟಕ್ಕೆ ತಕ್ಕಂತೆ ಒಳ್ಳೆಯ ಬೆಲೆ ಸಿಗುತ್ತಾಯಿದೆ. ಹೀಗಾಗಿ ಎಲ್ಲಾ ಬೆಳೆಗಳು ಕೈ ಕೊಟ್ರೆ, ಮೆಣಸಿನಕಾಯಿ ಅನ್ನದಾತನ ಕೈ ಹಿಡದಿದೆ. ಆದರೆ, ಕಷ್ಟಪಟ್ಟು ಬೆಳೆದು ತಂದ ಮೆಣಸಿನಕಾಯಿ ತೂಕದಲ್ಲಿ ವ್ಯಾಪಾರಸ್ಥರು ಮೋಸ ಮಾಡುತ್ತಾಯಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ: ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿ ಜಯ್ಶಾ ನೇಮಕ
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಎಪಿಎಂಸಿ ಮಾರುಕಟ್ಟೆ ಅಧಿಕಾರಿ ಎಸ್. ಬಿ. ನ್ಯಾಮಗೌಡ , ಒಂದು ವಾರದಲ್ಲಿ ಮೆಣಸಿನಕಾಯಿ ವಹಿವಾಟು ನಡೆಯುತ್ತಿದೆ. ಮೆಣಸಿನಕಾಯಿ ತೂಕದಲ್ಲಿ ಆರೋಪ ಕೇಳಿ ಬಂದಿದಕ್ಕೆ ಒಂದು ಯಂತ್ರವನ್ನು ಜಪ್ತಿ ಮಾಡಿಕೊಂಡು ಪರಿಶೀಲನೆ ನಡೆಸಿದ್ದೇವೆ. ಹಾಗೇನಾದರೂ ವ್ಯಾಪಾರಸ್ಥರು ತೂಕದಲ್ಲಿ ಮೋಸ ಮಾಡಿಸೆಡ ಅವರ ಪರವಾನಿಕೆ ರದ್ದು ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ
ತೂಕದಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿಯೇ ಎಪಿಎಂಸಿ ಅಧಿಕಾರಿಗಳು ತೂಕದ ಯಂತ್ರವನ್ನು ಪರಿಶೀಲನೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ. ಅನ್ನದಾತನೊಂದಿಗೆ ಮೋಸದಾಟ ಮಾಡುತ್ತಿರುವ ವ್ಯಾಪಾರಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗಿದೆ.
(ವರದಿ: ಸಂತೋಷ ಕೊಣ್ಣೂರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ