ರಾಮನಗರ: ರೇಷ್ಮೆ ನಗರಿ (Silk City), ಸಪ್ತಗಿರಿಗಳ ನಾಡು ರಾಮನಗರ (Ramanagar) ಇದೀಗ ಗಾರ್ಬೇಜ್ ಸಿಟಿ (Garbage City) ಎಂಬ ಕುಖ್ಯಾತಿಗೆ ಭಾಜನವಾಗುತ್ತಿದೆ. ಹೌದು ನಗರದ ಯಾವುದೇ ಮುಖ್ಯ ರಸ್ತೆ, ಅಡ್ಡರಸ್ತೆ ಇರಲಿ ಅಲ್ಲಿ ಕಸದ ರಾಶಿ ಮಾಮೂಲು ಎನ್ನುವಂತೆ ಆಗಿಬಿಟ್ಟಿದೆ. ಜೊತೆಗೆ ಚೆಂದದನಾಡು, ಬೊಂಬೆಗಳ ನಾಡು ಅಂತ ಕರೆಯಲ್ಪಡುವ ಚನ್ನಪಟ್ಟಣದಲ್ಲಿಯೂ (Channapatna) ಸಹ ಇದೇ ಸಮಸ್ಯೆ ಎದುರಾಗಿದೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ (Anita Kumaraswamy), ಚನ್ನಪಟ್ಟಣದಲ್ಲಿ (Channapatna) ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (Ex CM HD Kumaraswamy) ಶಾಸಕರಾಗಿ (MLA) ಇದ್ದರೂ ಸಹ ಕಸದ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಎರಡೂ ನಗರದ ಜನರು ದಿನನಿತ್ಯ ಪರಿತಪಿಸುತ್ತಿದ್ದಾರೆ.
ಎಲ್ಲಿ ನೋಡಿದರಲ್ಲಿ ಕಸದ ರಾಶಿ
“ಸ್ವಚ್ಛಭಾರತ ಅಭಿಯಾನ’, “ಕ್ಲೀನ್ ಸಿಟಿ’ ಅಭಿಯಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು ನಗರ ಪ್ರದೇಶ ಮಾತ್ರ ಕಸಮುಕ್ತವಾಗದೆ ಇರೋದು ವಿಪರ್ಯಾಸವೇ ಸರಿ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ರಾಮನಗರ ಪಾಧಿಕಾರದ ಕಚೇರಿ ಹಾಗೂ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ವಿದ್ಯಾಪೀಠ ಶಾಲೆಯ ಮುಂಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಅಷ್ಟೇ ಏಕೆ ಡಾ. ಬಿ.ಆರ್.ಅಂಬೇಡ್ಕರ್ ಭವನದ ಎದುರು ರಾಶಿ ಕಸ ಹಾಕಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಸ್ಥಳೀಯರದ್ದು.
ನಗರಸಭೆ ವಿರುದ್ಧ ಜನರ ಆಕ್ರೋಶ
ನಗರಸಭೆಯ ಅಧಿಕಾರಿಗಳು ಮೊಂಡುಚರ್ಮದವರಾಗಿದ್ದು ಎಷ್ಟು ಭಾರೀ ಮನವಿ ಮಾಡಿದರೂ ಕಸದ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: Government School: ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ಬದಿಪಳಿಕೆ; ಇಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದಾರೆ ಮಕ್ಕಳು!
ನಗರದ ಪ್ರಮುಖ ಸ್ಥಳಗಳಲ್ಲಿಯೇ ರಾಶಿ ರಾಶಿ ಕಶ
ಇನ್ನು ನಗರದ ಎಂಜಿ ರಸ್ತೆ, ಹಳೆ ಬಸ್ ನಿಲ್ದಾಣ, ಕೆಂಪೇಗೌಡ ಸರ್ಕಲ್ ಹಾಗೂ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಕಸದ ರಾಶಿಗೇನು ಕೊರತೆಯಿಲ್ಲ, ನಗರದ ವಾಣಿಜ್ಯ ಪ್ರದೇಶದಲ್ಲಿಯೇ ಕಸದ ರಾಶಿ ಬೀಳುತ್ತಿದ್ದು ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಸರಿಯಾಗಿ ಸ್ವಚ್ಛಗೊಳಿಸದ ಕೆಲಸಗಾರರು
ಜೊತೆಗೆ ಕಸ ಎತ್ತುವವರ ಬಳಿ ರಾಮನಗರ ಪ್ರಾಧಿಕಾರದ ಮುಂಭಾಗ ಚಿಲ್ಲರೆ ಅಂಗಡಿ ವ್ಯಾಪಾರಿ ವಿಕಾಸ್ ಎಂಬುವವರು ಪೂರ್ಣ ಕಸ ತೆಗೆಯುವಂತೆ ಹೇಳಿದ್ದಾರೆ. ಅದಕ್ಕೆ ಸೊಪ್ಪುಹಾಕದೆ ತಮ್ಮ ಇಚ್ಚೆಯಂತೆ ಕಸ ಎತ್ತುತ್ತಾರೆ ಎನ್ನುವ ಆರೋಪ ಸಾರ್ವ ಜನಿಕರದ್ದು..
ರಸ್ತೆ ಬದಿ ಕಸ ಸುರಿದರೆ ಕಠಿಣ ಕ್ರಮ
ಕಸ ತೆರವು ಮಾಡಿಸುವುದು ನಗರಸಭೆ ಅಧಿಕಾರಿಗಳ ಕರ್ತವ್ಯ ಅನ್ನೋದರ ಜೊತೆ ಜೊತೆಗೆ ಸಾರ್ವಜನಿಕರ ಜವಾಬ್ದಾರಿ ಕೂಡ ಹೆಚ್ಚಾಗಿರುತ್ತದೆ. ಪ್ರತಿ ಮನೆಮನೆಗೂ ವಾಹನಗಳು ಆಟೋಗಳನ್ನು ಕಳಿಸುವ ಮೂಲಕ ಕಸ ಎತ್ತುವ ಕಾರ್ಯ ಮಾಡುತ್ತಿದ್ದೇವೆ ಆದರೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ಹಾಕುವಲ್ಲಿ ವಾಣಿಜ್ಯ ಪ್ರದೇಶಗಳಲ್ಲಿ ಮುಂದಾಗುವುದಿಲ್ಲ.
ಎಲ್ಲರೂ ಅಂಗಡಿ ಬಾಗಿಲು ತೆಗೆಯುವುದು 9 ಗಂಟೆಯ ಮೇಲಾಗುತ್ತದೆ ಅಷ್ಟರಲ್ಲಿ ನಮ್ಮ ಕಾರ್ಮಿಕರು ಕಸ ತೆಗೆದುಕೊಂಡು ಬಂದಿರುತ್ತಾರೆ. ನಂತರ ಅಂಗಡಿಯವರು ಕಸ ಸುರಿಯುವುದು ಮಾಮೂಲಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು. ಮುಂದಿನ ದಿನಗಳಲ್ಲಿ ಬೀದಿಯಲ್ಲಿ ರಸ್ತೆ ಬದಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.
ಇದನ್ನೂ ಓದಿ: Mining: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಗಾಮಿಲ್ಲದೇ ನಡೆಯುತ್ತಿದೆ ಮಣ್ಣು-ಕಲ್ಲು ಗಣಿಗಾರಿಕೆ!
ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ
ನಗರದ ಪ್ರಮುಖ ಬೀದಿಗಳಲ್ಲಿಯೇ ಹೀಗಾದರೆ ಇನ್ನೂ ಗಲ್ಲಿ ಪ್ರದೇಶದ ಪಾಡು ಹೇಳತೀರದಾಗಿದೆ, ಈಗ ಮಳೆ ಸುರಿಯುತ್ತಿದ್ದು ಕಸದ ರಾಶಿ ಗಬ್ಬೆದ್ದು ನಾರುತ್ತದೆ ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಸ ಸಂಗ್ರಹಣೆಯ ಜವಾಬ್ದಾರಿ ನಿಭಾಯಿಸಿ ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ