ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Hubballi Idgah Maidana) ಗಣೇಶ ಪ್ರತಿಷ್ಠಾಪನೆ ಪ್ರಶ್ನಿಸಿ ಸುಪ್ರೀಂಕೋರ್ಟ್ (Supreme Court) ಮೊರೆ ಹೋಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಹಿಂದೂಪರ ಸಂಘಟನೆಗಳು (Hindu Organization) ಇಂದು ಬೆಳಗ್ಗೆ ತರಾತುರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ (Ganesha Idol) ಮಾಡಿದ್ದಾರೆ. ಒಂದು ದೊಡ್ಡ ಮೂರ್ತಿ ಮತ್ತು ಒಂದು ಸಣ್ಣ ಮೂರ್ತಿಯನ್ನು ತಂದು ವಿಘ್ನ ವಿನಾಯಕನ ಘೋಷಣೆಗಳೊಂದಿಗೆ ಗಣೇಶನ ಪ್ರತಿಷ್ಠಾಪನೆ ಮಾಡಲಾಯ್ತು. ಇನ್ನು ಮೂರ್ತಿ ಪ್ರತಿಷ್ಠಾಪನೆ ಆಗುತ್ತಲೇ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಹೂರ್ತದ ಕಾರಣಕ್ಕೆ ಮಧ್ಯಾಹ್ನದ ಬದಲು ಈಗಲೇ ಪ್ರತಿಷ್ಠಾಪನೆ ಮಾಡಿದ್ದೇವೆ. ಮೂರು ಸಾವಿರ ಮಠದಿಂದ ಮೆರವಣಿಗೆ ಮಾಡಿಕೊಂಡು ಬರುವ ಉದ್ದೇಶ ಇತ್ತು . ಆದರೆ ಕೊನೆ ಕ್ಷಣದಲ್ಲಿ ಸರಳವಾಗಿ ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಇದೊಂದು ಐತಿಹಾಸಿಕ ಕ್ಷಣವಾಗಿದೆ. ಮೊದಲ ಬಾರಿಗೆ ಈ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಸಿಕ್ಕಿದೆ. ಸದ್ಯಕ್ಕೆ 3 ದಿನ ನೀಡಲಾಗಿದೆ. ಮುಂದೆ ಹನ್ನೊಂದು ದಿನಕ್ಕೆ ಅನುಮತಿಗೆ ಪ್ರಯತ್ನಿಸುತ್ತೇವೆ. ಖಂಡಿತ ನಮಗೆ ಮುಂದೆ ಮತ್ತಷ್ಟು ದಿನಗಳ ಕಾಲ ಅವಕಾಶ ಸಿಗುತ್ತೆ ಅನ್ನೋ ವಿಶ್ವಾಸವಿದೆ ಎಂದು ಗಣೇಶ ಪ್ರತಿಷ್ಠಾಪನೆ ನಂತರ ಹಿಂದೂಪರ ಸಂಘಟನೆಗಳ ಮುಖಂಡರು ಹೇಳಿಕೆ ನೀಡಿದ್ದಾರೆ.
ಏಕದಂತನ ದರ್ಶನ ಪಡೆದ ಪ್ರಮೋದ್ ಮುತಾಲಿಕ್
ಗಣೇಶ ಪ್ರತಿಷ್ಠಾಪನೆ ನಂತರ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಏಕದಂತನ ದರ್ಶನ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ, ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತ್ತು. ಗಣೇಶನನ್ನು ವಿರೋಧಿಸಿದವರಿಗೆ ಛೀಮಾರಿ ಹಾಕಬೇಕು ಎಂದು ಕಿಡಿಕಾರಿದರು.
ಈ ಜಾಗ ಸರಕಾರಕ್ಕೆ ಸೇರಿದ್ದು, ಇದೊಂದು ಐತಿಹಾಸಿಕ ದಿನ. ನಮ್ಮ ಭಾವನೆಗೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ.. ಗಣೇಶ ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟಿಷರು ಗಣೇಶೋತ್ಸವ ವಿರೋಧ ಮಾಡಲಿಲ್ಲ, ಆದರೆ ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್ಗೆ ಕಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿಮಗೆ ಗಣೇಶನ ಶಾಪ ತಟ್ಟುತ್ತೆ
ಇವತ್ತು ಕೋರ್ಟಿಗೆ ಹೋಗಿ ಗಣೇಶೋತ್ಸವ ತಡೆಯಲು ಯತ್ನಿಸುತ್ತಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟುತ್ತೆ. ವಿರೋಧಿಸಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮನೆಗೆ ಕಳಿಸಲು ಅಭಿಯಾನ ಮಾಡುತ್ತೇವೆ. ನೀವು ಯಾವುದೇ ಕೋರ್ಟ್ಗೆ ಹೋಗಿ, ನಮ್ಮನ್ನು ತಡೆಯಲು ಆಗಲ್ಲ ಎಂದು ಗುಡುಗಿದರು.
ಈಗಾಗಲೇ ವಿಘ್ನ ವಿನಾಯಕನ ಪ್ರತಿಷ್ಠಾಪನೆ ಮಾಡಿ ಆಗಿದೆ, ಪೂಜೆ ಆಗಿದೆ. ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಶಫಿ ಆಸಾದ್ನನ್ನು ಸಸ್ಪೆಂಡ್ ಮಾಡಬೇಕು. ಅವರನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಈದ್ಗಾ ಮೈದಾನಕ್ಕೆ ಭೇಟಿ ನೀಡಿದ್ದ ಪ್ರಹ್ಲಾದ್ ಜೋಶಿ
ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ರಾತ್ರಿಯೇ ಈದ್ಗಾಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ, ಹಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಕರ್ನಾಟಕ ಹೈಕೋರ್ಟ್ ನಲ್ಲಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಸಿರು ನಿಶಾನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದ್ದರು.
ಗಣೇಶ ಪ್ರತಿಷ್ಠಾಪನೆಯ ಸ್ಥಳ ಪರಿಶೀಲನೆ ಮಾಡಿದ ಜೋಶಿ, ಯಾವ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದರೆ ಸೂಕ್ತ ಎನ್ನುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದರು. ಡಿಸಿ ಗುರುದತ್ತ ಹೆಗಡೆ ಹಾಗೂ ಪೊಲೀಸ್ ಕಮೀಷನರ್ ಲಾಭೂ ರಾಮ್ ಜೊತೆ ಚರ್ಚೆ ಮಾಡಿದರು. ನಂತರ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಸ್ವಾಗತಾರ್ಹ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ