news18-kannada Updated:August 21, 2020, 10:33 AM IST
ಚಕ್ಕುಲಿ ಮಾಡುತ್ತಿರುವ ಕುಟುಂಬಸ್ಥರು
ಉತ್ತರ ಕನ್ನಡ(ಆ.21): ಕಾರವಾರದಲ್ಲಿ ಹಬ್ಬ ಅಂದ್ರೆ ಅದೇನೋ ಸಡಗರ, ಸಂಭ್ರಮ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅವರಲ್ಲೇನೋ ವಿಶೇಷತೆ ಇದ್ದೇ ಇರುತ್ತೆ. ಈಗಂತೂ ಗೌರಿ-ಗಣೇಶ ಹಬ್ಬದ ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ ಶಿರಸಿಯಲ್ಲಿ ವಿಶೇಷ ಚಕ್ಕುಲಿ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದಾರೆ. ಆದ್ರೆ ಈ ತಿನಿಸನ್ನ ಮಾಡೋಕೆ ಕೂಡು ಕುಟುಂಬ ಒಟ್ಟಾಗಿ ಸೇರಿ ಹಬ್ಬದ ಸಡಗರವನ್ನ ಆಚರಿಸ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೇರಿ ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ.. ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು. ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ವಿಶೇಷವಾಗಿ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಎಲ್ಲೆಡೆ ಸಂಭ್ರಮದಿಂದ ಕೆಲಸ ಸಾಗಿದೆ. ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆ ಶಿರಸಿಯ ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಎಲ್ಲ ಕಂಬಳದಂತೆ ಕಲ್ಮನೆ ಹೆಗ್ಗಾರು,ಹೆಗಡೆಕಟ್ಟ ಸುತ್ತಮುತ್ತಲಿನ ಉರಿನವರು, ಸಂಬಂಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುತ್ತಾರೆ. ಕೈ ಕಂಬಳದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ, ಪರಿಣಿತರು ಅಕ್ಷರಗಳನ್ನು ಸಹ ಬರೆಯುತ್ತಾರೆ. ಅನಾದಿ ಕಾಲದಿಂದಲು ರೂಡಿಯಲ್ಲಿದ್ದ ಚಕ್ಕುಲಿ ಕಂಬಳ ಮಾಡೋದು ಅಂದ್ರೆ ಇವರಿಗೆ ಎಲ್ಲಿಲ್ಲದ ಸಂತೋಷವಂತೆ.
Ganesh Chaturthi 2020: ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ; ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ
ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರೂ ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ ಮಾಡುತ್ತಾರೆ. ಹಿಂದಿನಿಂದ ಬಂದ ಸಂಪ್ರದಾಯ ಒಂದುಕಡೆ ಆಗಿದ್ರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರೋಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬದಲ್ಲಿ ಬಂದ ಸಂಬಂಧಿಕರಿಗೆ ಹಾಗೂ ದೂರದ ಉರಲ್ಲಿರುವವರಿಗೆ ಪಾರ್ಸಲ್ ಕಳಿಸಿಕೊಡುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇ ಬಾರಿ ಎರಡುಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ. ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳವನ್ನ ಮಾಡುತ್ತ ಬಂದಿರೋ ಇಲ್ಲಿನ ಜನರು ಈಗಲೂ ಇದನ್ನ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಚಕ್ಕುಲಿಯನ್ನ ಮಿಷನ್ ನಲ್ಲಿ ಮಾಡ್ತಾರೆ. ಆದ್ರೆ ಇಲ್ಲಿ ಹದ ಮಾಡಿದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ವಿಶೇಷತೆ. ಅದರಲ್ಲೂ ವಿವಿಧ ವಿನ್ಯಾಸದ ಚಕ್ಕುಲಿ ಮಾಡೋದು ಇನ್ನೊಂದು ವಿಶೇಷ.
ಅದೇನೆ ಇರಲಿ ಯಾವುದೇ ಹಬ್ಬ ಆದ್ರೂ ಮಲೆನಾಡಿಗರಲ್ಲಿ ಅದೇನೋ ಸಂಭ್ರಮ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನ ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸ್ತಾರೆ. ಒಟ್ಟಾರೆ ಹಬ್ಬ ಅಂದ್ರೆ ಅಲ್ಲಿ ವಿಭಿನ್ನ ತಿಂಡಿ ತಿನಿಸುಗಳು ಇರೋದು ಕಾಮನ್. ಆದ್ರೆ ಚಕ್ಕುಲಿ ಕಂಬಳ ಮಾತ್ರ ಗಣೇಶ ಚತುರ್ಥಿಯ ವಿಶೇಷ ತಿನಿಸು ಅನ್ನೋದಂತೂ ನಿಜ.
Published by:
Latha CG
First published:
August 21, 2020, 10:33 AM IST