ಗದಗ (ಆ. 17): ರೈತರು ಬಾಳು ಹಸನಾಗಲೆಂದು ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ವಿಶೇಷ ಯೋಜನೆಗಳನ್ನ ಆರಂಭಿಸಿದೆ. ಆದರೆ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಪವಿತ್ರ ಮೈತ್ರಿಗೆ ಯೋಜನೆ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಸಾಕ್ಷಿ ಶಿಂಗಟಾಲೂರು ಏತ ನೀರಾವರಿ ಯೋಜನೆಯ ಸೂಕ್ಷ್ಮ ಹನಿ ನೀರಾವರಿ ಬೃಹತ್ ಯೋಜನೆ. ಜಿಲ್ಲೆ ನಾಲ್ಕು ತಾಲೂಕು ಸೇರಿದಂತೆ ಕೊಪ್ಪಳ, ಯಲಬುರ್ಗಾ ತಾಲೂಕುಗಳನ್ನ ಒಳಗೊಂಡಿರುವ ಈ ಯೋಜನೆಗೆ, ಸಾಕಷ್ಟು ಅನುದಾನ ಖರ್ಚಾಗಿದೆ. ಹೊರತು ಅನುಷ್ಟಾನ ಮಾತ್ರ ಅಷ್ಟಕಷ್ಟೆ ಆಗಿದೆ.
2016ರಲ್ಲಿ ಈ ಯೋಜನೆರೆ ಆಗಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಲನೆ ನೀಡಿದರು ನಂತರ 2018 ರಲ್ಲಿ ಮೇಘಾ ಹಾಗೂ ಜೈನ್ ಇರಿಗೇಷನ್ ಎನ್ನುವ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಸಹ ಒಬ್ಬ ರೈತನ ಜಮೀನಿಗೂ ಒಂದು ಹನಿ ನೀರು ಹರಿದಿಲ್ಲ. ಗದಗ ಜಿಲ್ಲೆಯಲ್ಲಿ ಒಟ್ಟು 59,000 ಹೆಕ್ಟೆರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಗುರಿ ಹೊಂದಿದ್ದು 2550 ಕೋಟಿ ಅನುದಾನ ಇದಕ್ಕೆ ಮೀಸಲಿಡಲಾಗಿದೆ. ಆದರೆ ಈ ಭಾಗದ ರೈತರ ದುರಾದೃಷ್ಟವೆಂಬಂತೆ ಗುತ್ತಿಗೆ ಪಡೆಸ ಖಾಸಗಿ ಕಂಪನಿಗಳು ಅರ್ಧಂಬರ್ಧ ಕಾಮಗಾರಿ ಮಾಡಿ ನಿರ್ವಹಣೆ ಇಲ್ಲದೇ ಈಗಾಗಲೇ 953 ಕೋಟಿ ಬಿಲ್ ಪಾವತಿ ಮಾಡಿಕೊಂಡಿದ್ದು ಈ ಯೋಜನೆಯಿಂದ ಇಲ್ಲಿನ ರೈತರಿಗೆ ಯಾವ ಪ್ರಯೋಜನವೂ ಇಲ್ಲ ಅನ್ನೋದು ರೈತರ ಆರೋಪವಾಗಿದೆ.
ಇದನ್ನು ಓದಿ: ತಾಲಿಬಾನ್ಗಳು ಮರಳುತ್ತಿದ್ದಂತೆ ಅಫ್ಘಾನ್ನಲ್ಲಿ ಗಗನಕ್ಕೇರಿದ ಬುರ್ಖಾ ಬೆಲೆ!
ಇನ್ನು ಈ ಭಾಗದಲ್ಲಿ ನಿರಾವರಿ ಕನಸಿನ ಕೂಸಾಗಿರುವ ಶಿಂಗಟಾಲೂರು ಏತ ನೀರಾವರಿ ಯೋಜನೆ ಚಾಲ್ತಿಯಲ್ಲಿದೆ. ಆದರೆ, ಈವರೆಗೂ ಈ ಯೋಜನೆಯೇ ಸಂಪೂರ್ಣವಾಗಿ ಅನುಷ್ಟಾನವಾಗಿಲ್ಲ. ಕಳಪೆ ಕಾಮಗಾರಿಯಿಂದ ಕಾಲುವೆಗಳ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ ಕಾಲುವೆಗಳಲ್ಲಿ ಹರಿಯೋ ನೀರಿನ ಮೂಲಕ ಸೂಕ್ಷ್ಮ ಹನಿ ನೀರಾವರಿ ಅಳವಡಿಸಿ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆ ನಿಜಕ್ಕೂ ಮತ್ತಷ್ಟು ಹಳ್ಳ ಹಿಡಿದಿದೆ. ಗುತ್ತಿಗೆ ಪಡೆದ ಖಾಸಗಿ ಕಂಪನಿಗಳು ತಾವು ಆಡಿದ್ದೇ ಆಟವಾಗಿದ್ರೆ. ಇತ್ತ ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆಯ ಅಧಿಕಾರಿವರ್ಗ ಕಂಪನಿಗಳ ಕೈಗೊಂಬೆಯಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇತ್ತ ಜನಪ್ರತಿನಿಧಿಗಳಂತೂ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನುವಂತೆ ಮೌನ ತಪಸ್ವಿಗಳಾಗಿದ್ದಾರೆ.
ಇನ್ನು ವಿಪರ್ಯಾಸ ಯೋಜನೆಗೆ ಚಾಲನೆ ನೀಡಿದ ಸ್ಥಳದಲ್ಲಿ ಯೋಜನೆ ಬಗ್ಗೆ ಒಂದು ಸಣ್ಣ ಕುರುಹು ಸಹ ಅಲ್ಲಿಲ್ಲ. ಒಟ್ಟಾರೆ ಕೋಟಿ ಕೋಟಿ ಹಣ ನುಂಗಣ್ಣರ ಪಾಲಿಗೆ ವರದಾನವಾಗುತ್ತಿರುವ ಸೂಕ್ಷ್ಮ ಹನಿ ನೀರಾವರಿ ಯೋಜನೆ, ಕೇವಲ ಕಾಟಾಚಾರಕ್ಕಾಗಿ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಗುತ್ತಿಗೆ ಪಡೆದ ಕಂಪನಿಗಳಿಗೆ ಬಿಲ್ ಪಾವತಿ ಮಾಡಲಿಕ್ಕೆ ಯೋಜನೆ ಹೆಸರಿಗೆ ಇಲಾಖೆ ಹುಟ್ಟಿಕೊಂಡಿದೆ. ಇದರಿಂದ ಗದಗ ಜಿಲ್ಲೆ ಅನ್ನದಾತರಿಗೆ ಮಾತ್ರ ಯಾವುದೇ ಉಪಯೋಗವಾಗಿಲ್ಲ ಅನ್ನೋದು ಅಷ್ಟೇ ಸತ್ಯದ ಸಂಗತಿಯಾಗಿದೆ. ಇನ್ನು ಜನ ಪ್ರತಿನಿಧಿಗಳು ಎಚ್ಚೆತ್ತಗೊಂಡು ಸೂಕ್ಷ್ಮ ಹನಿಯ ಯೋಜನೆಯಲ್ಲಿ ಬಗ್ಗೆ ಸೂಕ್ತವಾದ ತನಿಖೆ ಆರಂಭಿಸಿ ರೈತರಿಗೆ ನ್ಯಾಯ ಒದಗಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ