ಉಡುಪಿ; ಪ್ರಸ್ತುತ ದೇಶದಲ್ಲಿ ಎಲ್ಲಿ ನೋಡಿದರೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ಕಾಲದಲ್ಲಿ ಇದನ್ನು ನೋಡುವ ಸೌಭಾಗ್ಯ ನಮಗೆ ಸಿಕ್ಕಿರಲಿಲ್ಲ. ಆದರೆ, ಈಗ ಮೋದಿಯಿಂದಾಗಿ ಸಾಯೋ ಕಾಲಕ್ಕೆ ನಮಗೆ ಇಂತಹ ಅವಕಾಶ ಸಿಕ್ಕಿದೆ. ಇದನ್ನು ನೋಡಿದರೆ ದೇಶದ ಸ್ವತಂತ್ರ್ಯ ಕಾಲದ ಚಳುವಳಿಗಳು ನೆನಪಾಗುತ್ತಿವೆ ಇದಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿನಂದಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, “ನಮಗೆ ಕೇಸರಿ ಬಟ್ಟೆ ಕೇಸರಿ ಧ್ವಜ ನೋಡಿ ನೋಡಿ ಸಾಕಾಗಿತ್ತು. ಆದರೆ, ಈಗ ರಾಷ್ಟ್ರಧ್ವಜ ನೋಡುವ ಸೌಭಾಗ್ಯ ಲಭ್ಯವಾಗಿದೆ. ಪ್ರಧಾನಿ ಮೋದಿ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಸಿಎಎ ಕಾಯ್ದೆಯನ್ನು ವಿರೋಧಿಸಿ ದೇಶಭಕ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಎಲ್ಲೆಡೆ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ಇದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದ ಮುಸಲ್ಮಾನರನ್ನು ಅನುಮಾನದಿಂದ ನೋಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ರಮೇಶ್ ಕುಮಾರ್, “ಬಿಜೆಪಿ ನಾಯಕರಿಗೆ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿ ನಾಯಕರಿಗೆ ಬೇಕಾಗೂ ಇಲ್ಲ. ಹೀಗಾಗಿ ಮುಸಲ್ಮಾನರೂ ಭಾರತೀಯರೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಮುಸಲ್ಮಾನರೂ ಸಹ ಭಾರತ ಮಾತೆಯ ಮಕ್ಕಳು, ಅವರನ್ನು ಅನುಮಾನಿಸಿದರೆ ಭಾರತ ಮಾತೆ ಕಣ್ಣೀರು ಹಾಕ್ತಾಳೆ ಎಂದು ತಿಳಿಸಿದ ಅವರು ನಾವು ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ಕಲಿಸಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ದೇಶದ ಯಾವ ಭಾಗವನ್ನೂ ಕಡೆಗಣಿಸಬಾರದು, ಗಾಂಧಿ-ನೆಹರು ಕನಸು ನನಸಾಗಲಿ; ರಾಮನಾಥ್ ಕೋವಿಂದ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ