ಕೋಲಾರ(ಏ.12): ದೇಶದಲ್ಲಿ ರಸಗೊಬ್ಬರ ಬೆಲೆ ಏರಿಕೆ ಮಾಡಿರುವ ಕ್ರಮದ ವಿರುದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕೋಲಾರದ ಅಣ್ಣೇಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಆಯೋಜಿಸಿದ್ದ, ಸಾಲ ವಿತರಣೆ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದರು. ದೇಶದಲ್ಲಿ ಕೃಷಿ ಗೊಬ್ಬರದ ಬೆಲೆ ಒಮ್ಮೆಲೆ 700 ರಿಂದ 800 ರೂಪಾಯಿ ಬೆಲೆ ಏರಿಕೆಯಾಗಿದೆ ಎಂದ ರಮೇಶ್ ಕುಮಾರ್, ಇದರ ಬಗ್ಗೆ ನೀವ್ಯಾರಾದರು ಮಾತಾಡುವಿರಾ, ಇಲ್ಲ, ಇಂತಹ ವಿಷಯಗಳ ಬಗ್ಗೆ ಯಾರೂ ಚರ್ಚೆ ಮಾಡಲ್ಲ, ಯಾಕೆ ಹೀಗೆ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಒಂದು ಯೋಗ್ಯ ಸರ್ಕಾರ , ಆ ಸರ್ಕಾರದ ನರಗಳು ಗಟ್ಟಿಯಾಗಿದ್ದಲ್ಲಿ, ಕಂಪನಿಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ಗೊಬ್ಬರದ ಬೆಲೆಯು ಹೆಚ್ಚಳ ಆಗದಂತೆ ಕ್ರಮ ವಹಿಸಬೇಕು. ಈಗಿರುವವರು ಅದನ್ನು ಮಾಡದೆ ಹೋದಲ್ಲಿ, ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದಲ್ಲಿ ಎಲ್ಲವನ್ನ ಮಿತಿಯಲ್ಲಿಡುವ ಕೆಲಸ ಮಾಡುತ್ತೇವೆ, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ, ಕೃಷ್ಣಬೈರೇಗೌಡ ಅವರು ಕೃಷಿ ಮಂತ್ರಿಯಾಗಿದ್ದಾಗ , ಕೃಷಿ ಇಲಾಖೆಯಲ್ಲಿ ರೈತರಿಗೆ ಆದಷ್ಟು ಉತ್ತಮ ಕೆಲಸವನ್ನು ಮಾಡಿದ್ದೇವೆ ಎಂದು ಉದಾಹರಣೆ ನೀಡಿದರು.
ಚಾಮರಾಜಗರ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ!
ಶೇವಿಂಗ್ ಮಾಡೋಕೆ ಸಮಯವಿಲ್ಲ, ದೇಶದ ಚಿಂತೆಯಲ್ಲಿ ಎಲ್ಲಾ ಮರೆತಿದ್ದೀರಾ ಮೋದಿ ಎಂದು ಕಿಡಿ
ಗೊಬ್ಬರದ ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ರಮೇಶ್ ಕುಮಾರ್, "ಏನಪ್ಪಾ ನಾಟಕ ಮಾಡುತ್ತೀಯಾ ನೀನು, ನಿನಗೆ ಶೇವ್ ಮಾಡೋಕೆ ಸಮಯವಿಲ್ಲ, ದೇಶದ ಬಗ್ಗೆ ಬಹಳ ಬೇಜಾರಲ್ಲಿದೀಯ, ದುಃಖದಲ್ಲಿದ್ದೀಯ, ಜನರ ಕಷ್ಟಗಳಿಗೆ ಸ್ಪಂದನೆಯಿಲ್ಲ, ಯಾವ ಕಾರಣಕ್ಕೆ ಗೊಬ್ಬರದ ಬೆಲೆ ಏರಿಸಿದ್ದೀಯ ಹೇಳಪ್ಪಾ" ಎಂದು ಪ್ರಶ್ನಿಸಿದರು. ತಂದೆ ಮೋದಿ ಯಾವ ಊರಲ್ಲಿ ನಿನಗೆ ವ್ಯವಸಾಯ ಇದೆ, ನಿಮ್ಮವರಾದ ಅಣ್ಣ ತಮ್ಮ ಯಾರಾದರೂ ವ್ಯವಸಾಯ ಮಾಡ್ತಿದ್ದಾರಾ, ಒಂದೇ ಸಮನೆ ಶೇಕಡಾ 70 ರಷ್ಟು ರಸಗೊಬ್ಬರ ಬೆಲೆ ಏರಿಕೆ ಏತಕ್ಕೆ ಮಾಡಿದಿರಿ, ಅಂತಹ ಸನ್ನಿವೇಶ ಯಾಕಾದರೂ ಬಂತು ಈಗಲಾದರೂ ಜನರಿಗೆ ತಿಳಿಸಿ ಎಂದರು.
ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಹಾಗೆಯೇ, ರೈತರು ತಾವು ಬೆಳೆದಿರುವ ಬೆಳೆಗಳಿಗೆ ಯಾರೂ ಗರಿಷ್ಟ ಬೆಲೆ ನಿಗದಿ ಮಾಡಲ್ಲ. ರಸಗೊಬ್ಬರ ಬೆಲೆ ಏರಿಕೆಗೆ ಕಾರಣವೇನು, ದೇಶದಲ್ಲಿ ಕೇಸರೀಕರಣ ಮಾಡಲು ಹೊರಟಿದ್ದೀರಾ, ಯಾವ ಮಂದಿರದಲ್ಲಿ ನೋಡಿದರೂ ಕೇಸರಿ ಶಾಲೂಗಳೇ ಕಾಣುತ್ತಿವೆ. ನಾವು ರಸ್ತೆಯಲ್ಲಿ ಕೋತಿ ಸತ್ತರೂ, ಮಣ್ಣು ಮಾಡಿ ಪೂಜೆ ಮಾಡುವ ದೇವರ ಭಕ್ತರೇ ಆದರೂ, ರಾಮ, ಹನುಮರನ್ನ ನೀವೇ ಗುತ್ತಿಗೆ ಪಡೆದುಕೊಂಡವರಂತೆ ವರ್ತನೆ ಮಾಡುತ್ತಿದ್ದೀರಾ, ನಮಗೆ ಆಗಾಗ ಧುರ್ಯೋಧನನ್ನ ಬಿಡುತ್ತೀರಾ, "ಭಾರತ ಸೀತೆ, ದ್ರೌಪದಿ ಬದುಕಿದ ದೇಶ, ನಮ್ಮಹೆಣ್ಣು ಮಕ್ಕಳು ಮಾನಸ್ಥರು ಎಲ್ಲವನ್ನು ಸಹಿಸಿಕೊಂಡಿದ್ದಾರೆ, ಕಣ್ಣೀರನ್ನು ನುಂಗಿದ್ದಾರೆ ಎಂದು ಬೆಲೆ ಏರಿಕೆ ವಿರುದ್ದ ಕಿಡಿಕಾರಿದರು, ಈಗಲಾದರೂ ಮೋದಿಯವರು ದೇಶಕ್ಕಾಗಿ ಏನು ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ದೇಶದಲ್ಲಿ ಸಾಲ ನೀತಿಯನ್ನ ನಿರ್ಧರಿಸಬೇಕು
ಮಹಿಳಾ ಸಂಘಗಳಿಗೆ ಸಾಲವಿತರಣೆ ಮಾಡಿದ ನಂತರ ಮಾತನಾಡಿದ ರಮೇಶ್ ಕುಮಾರ್ ಅವರು, ದೇಶದಲ್ಲಿ ಸಾಲ ನೀತಿಯ ವಿಚಾರದಲ್ಲಿ ಸರ್ಕಾರಗಳು ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ ಎಂದು ಆಗ್ರಹಿಸಿದರು. ಸಾರ್ವಜನಿಕರು ಸಾಲ ಏತಕ್ಕೆ ಪಡೆದುಕೊಳ್ತಿದ್ದಾರೆ, ನಾವು ಕೊಡುವ ಸಾಲ ಜನರಿಗೆ ಉಪಯೋಗ ಆಗುತ್ತಿದೆಯಾ, ಅವರು ಕೇಳಿದಷ್ಟು ಸಾಲ ಅವರಿಗೆ ಲಭಿಸುತ್ತಿದೆಯಾ, ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಇಲ್ಲವಾದರೆ ಜನರ ಅಗತ್ಯತೆಗಳನ್ನ ಅರಿಯಲು ಸಾಧ್ಯವಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ