ಮೈಸೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ (sexually assault) ನೀಡಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಮಠದ (Murugha Mutt) ಶಿವಮೂರ್ತಿ ಶರಣರ ವಿರುದ್ಧ ಫೋಕ್ಸೋ ಪ್ರಕರಣ (POCSO case) ದಾಖಲಿಸಲು ಸಂತ್ರಸ್ತ ಬಾಲಕಿ ಕುಟುಂಬಸ್ಥರಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ (SK Basavarajan) ದಂಪತಿ ಇಂದು ಮೈಸೂರಿಗೆ ಆಗಮಿಸಿದ್ದು ಒಡನಾಡಿ (Odanadi) ಮುಖ್ಯಸ್ಥರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಬಸವರಾಜನ್ ದಂಪತಿ ತಮ್ಮ ಮೇಲೆ ದಾಖಲಾಗಿರುವ ಎಫ್ಐಆರ್ ಅನ್ನು ರದ್ಧುಪಡಿಸುವಂತೆ ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ದಂಪತಿಗಳ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೋರ್ಟ್ ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಿದೆ. ಈ ಮಧ್ಯೆ ದಂಪತಿ ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ದಂಪತಿ ಗುರುವಾರ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ತಾವೂ ಬೇರೆ ವೈಯಕ್ತಿಕ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದೆವು. ಒಡನಾಡಿ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತನಾಡಿಸಿ ಕೊಂಡು ಹೋಗೋಣ ಎಂದು ಬಂದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಮಕ್ಕಳನ್ನ ಒಡನಾಡಿಗೆ ಕಳುಹಿಸಿದ್ದು ನಾನೇ
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಸವರಾಜನ್ ಮುರುಘಾ ಮಠದ ಸಂತ್ರಸ್ತ ಮಕ್ಕಳನ್ನು ಒಡನಾಡಿ ಸಂಸ್ಥೆಗೆ ಕಳುಹಿಸಿದ್ದು ನಾನೇ. ಈಗ ಮಕ್ಕಳ ಮನಸ್ಥಿತಿ ಸುಧಾರಿಸಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ನಾನು ಮಕ್ಕಳನ್ನು ಮಾತನಾಡಿಸಿಲ್ಲ. ಅವರು ಶಾಲೆಗೆ ಹೋಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Murugha Case: ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯ ಕೊಡಿಸಿ ಇಲ್ಲ, ದಯಾ ಮರಣ ನೀಡಿ!
25 ಮಕ್ಕಳ ಮೇಲೆ ದೌರ್ಜನ್ಯದ ಬಗ್ಗೆ ಗೊತ್ತಿಲ್ಲ
ಮುರುಘಾ ಮಠದಲ್ಲಿ 25ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಸವರಾಜನ್, " ನನಗೆ ತಿಳಿದಹಾಗೆ ಮುರುಘಾ ಮಠದಲ್ಲಿ ಇಬ್ಬರು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ಆ ಇಬ್ಬರು ಮಕ್ಕಳು ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬಂದಿದ್ದರು. ಅವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅವರನ್ನು ಒಡನಾಡಿ ಸಂಸ್ಥೆಗೆ ಕರೆದುಕೊಂಡು ಬಂದಿದ್ದೆ ಎಂದರು.
15 ವರ್ಷಗಳಿಂದ ಮಠದಿಂದ ನಾನು ದೂರ
ನಾನು ಮಠದಿಂದ ಕಳೆದ 15 ವರ್ಷಗಳಿಂದ ದೂರ ಉಳಿದಿದ್ದೇನೆ. ಅಲ್ಲಿ ಆ ಇಬ್ಬರು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎನ್ನುವುದು ಮಾತ್ರ ನನಗೆ ತಿಳಿದಿದೆ. ಆದರೆ
ಇತರ ಮಕ್ಕಳ ಮೇಲೆ ದೌರ್ಜನ್ಯ ಆಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಮೈಸೂರಿನಲ್ಲಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಹೇಳಿದ್ದಾರೆ.
ಮಠದೊಂದಿಗೆ ಬಸವರಾಜನ್ ಒಡನಾಟ ಹೇಗೆ?
ಶ್ರೀಮಠದ ಹಿಂದಿನ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಯವರಿಗೆ ಎಸ್.ಕೆ.ಬಸವರಾಜನ್ ಅತ್ಯಂತ ಆಪ್ತ ಶಿಷ್ಯರಾಗಿದ್ದರು. ಎಸ್.ಕೆ.ಬಸವರಾಜನ್ ಚಿತ್ರದುರ್ಗ ತಾಲೂಕಿನ ಸೊಂಡೆಕೊಳದವರು. ಬಸವರಾಜನ್ 6 ವರ್ಷದ ಬಾಲಕನಾಗಿದ್ದಾಗಲೇ ಭಕ್ತರಾಗಿ ಮಠ ಸೇರಿದ್ದರು. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಯವರ ಆಶ್ರಯದಲ್ಲಿ ಬೆಳೆದಿದ್ದ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಬಸವರಾಜನ್ ಅವರನ್ನೇ ನೇಮಕ ಮಾಡಬೇಕು ಎಂಬ ಇರಾದೆಯೂ ಅವರದಾಗಿತ್ತು. ಆದರೆ ಬಸವರಾಜನ್ ಇದನ್ನು ಒಪ್ಪಿಕೊಂಡಿರಲಿಲ್ಲ. ಮುಂದೆ 1991ರಲ್ಲಿ ಮುರುಘಾ ಶರಣರನ್ನು ಪೀಠಾಧಿಪತಿಯನ್ನಾಗಿ ಮಾಡಿದಾಗ ಬಸವರಾಜನ್ರನ್ನು ಮಠದ ಆಡಳಿತಾಧಿಕಾರಿ ನೇಮಕ ಮಾಡಿದ್ದರು.
ಬಸವರಾಜನ್ ವಿರುದ್ಧ ಇರುವ ಆರೋಪಗಳೇನು?
ಮುರುಘಾಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್ ಹಾಸ್ಟೆಲ್ನ ಲೇಡಿ ವಾರ್ಡನ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪವಿದೆ. ಬಸವರಾಜನ್ ಹಾಸ್ಟೆಲ್ನಲ್ಲಿ ಯಾರೂ ಇಲ್ಲದಿದ್ದಾಗ ರೇಪ್ ಮಾಡಲು ಯತ್ನಿಸಿದ್ದಾರೆ ಎಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಮಠದ ಹಾಸ್ಟೆಲ್ನ ಇಬ್ಬರು ಬಾಲಕಿಯರನ್ನು ಎಸ್.ಕೆ.ಬಸವರಾಜನ್, ಪತ್ನಿ ಸೌಭಾಗ್ಯ ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಮುರುಘಾಮಠದ ಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ