ಚಾಮರಾಜನಗರ (ಡಿ. 27): ನಾನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ಸಭೆ ನಡೆಸಿ ಜಾತಿವಾರು ಸಮೀಕ್ಷಾ ವರದಿಯನ್ನು ಸ್ವೀಕರಿಸಲು ಸಿದ್ದನಿದ್ದೆ. ಆದರೆ ಆಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿಮಗೆ ಸಭೆ ಕರೆಯಲು ಹೇಳಿದ್ದವರು ಯಾರು? ಯಾವುದೇ ಕಾರಣಕ್ಕೂ ಸಭೆ ನಡೆಸಬಾರದು ಹಾಗೂ ಸಮೀಕ್ಷಾ ವರದಿ ಸ್ವೀಕರಿಸಬಾರದು ಎಂದು ಹೆದರಿಸಿದ್ದರು ಎಂದು ಮಾಜಿ ಸಚಿವ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ
ತಮ್ಮ ಸ್ವಗ್ರಾಮ ಯಳಂದೂರು ತಾಲೂಕು ಉಪ್ಪಿನಮೋಳೆಯಲ್ಲಿ ಗ್ರಾಮಪಂಚಾಯ್ತಿ ಚುನಾವಣೆಗೆ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಒಬ್ಬ ಮುಖ್ಯಮಂತ್ರಿ ಹೇಳಿದ ಮೇಲೆ ಅವರ ಮಾತಿಗೆ ಗೌರವ ಕೊಡಬೇಕು ಅನ್ನೋ ಕಾರಣಕ್ಕೆ ನಾನು ಅಂದಿನ ಸಭೆಯನ್ನು ರದ್ದುಮಾಡಿದೆ. ಇಲ್ಲದಿದ್ದರೆ ಅಂದೇ ವರಿದಿ ಸ್ವೀಕರಿಸುತ್ತಿದ್ದೆ ಎಂದು ಹೇಳಿದರು.
ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ 162 ಕೋಟಿ ರೂಪಾಯಿ ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ನನ್ನ ಅವಧಿಯಲ್ಲಿ ವರದಿ ಪೂರ್ಣವಾಗಿ ತಯಾರಾಗದ ಕಾರಣ ಸ್ವಿಕರಿಸಲು ಸಾಧ್ಯವಾಗಲಿಲ್ಲ, ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ವರದಿ ಪೂರ್ಣಗೊಂಡಿತ್ತು.
ಅಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಪುಟ್ಟರಂಗಶೆಟ್ಟಿಗೆ ವರದಿ ನೀಡುತ್ತೇವೆ ಎಂದು ಆಯೋಗದವರು ಮುಂದೆ ಬಂದಿದ್ದರು. ಆದರೆ ಕುಮಾರಸ್ವಾಮಿ ಅವರು ಪುಟ್ಟರಂಗಶೆಟ್ಟಿಗೆ ಕರೆ ಮಾಡಿ ವರದಿ ಸ್ವೀಕರಿಸದಂತೆ ಹೆದರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.
ಕಲಬುರ್ಗಿಯಲ್ಲಿ 2ನೇ ಹಂತದ ಗ್ರಾ.ಪಂ. ಚುನಾವಣೆ; ಮತದಾನಕ್ಕೂ ಮುನ್ನವೇ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ
ಈ ಆರೋಪಕ್ಕೆ ದನಿಗೂಡಿಸಿರುವ ಪುಟ್ಟರಂಗಶೆಟ್ಟಿ, ಜಾತಿವಾರು ಸಮೀಕ್ಷೆ ಆಧಾರದ ಮೇಲೆ ಮುಂದೆ ಅನುದಾನ ಹಂಚಿಕೆ ಮಾಡಲು ಅನುಕೂಲವಾಗುತ್ತದೆ. ವರದಿ ಸ್ವೀಕರಿಸು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾವುದೇ ಕಾರಣಕ್ಕೂ ವರದಿ ಸ್ವೀಕರಿಸಬಾರದು ಎಂದು ಕುಮಾರಸ್ವಾಮಿ ಹೆದರಿಸಿದ್ದರು ಎಂದಿದ್ದಾರೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಈಗನ ಮುಖ್ಯಮಂತ್ರಿ ಯಡಿಯೂರಪ್ಪ ಈ ವರದಿಯನ್ನು ಸ್ವೀಕರಿಸಲಿ. ವರದಿ ಸ್ವೀಕರಿಸಲು ಅವರಿಗೆ ಏನು ಕಷ್ಟ ಎಂದ ಪುಟ್ಟರಂಗಶೆಟ್ಟಿ, ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಸಚಿವ ಈಶ್ವರಪ್ಪ ಹೋರಾಟಕ್ಕೆ ಮುಂದಾಗಿದ್ದಾರೆ. ಒಬ್ಬ ಕ್ಯಾಬಿನೆಟ್ ಮಂತ್ರಿಯಾಗಿ ಯಾಕೆ ಹೋರಾಟ ಮಾಡಬೇಕು, ಅವರದ್ದೇ ಸರ್ಕಾರವಿದೆ ಕುರುಬರನ್ನು ಎಸ್ಟಿಗೆ ಸೇರಿಸಬಹುದಲ್ಲವೇ ಎಂದು ಪುಟ್ಟರಂಗಶೆಟ್ಟಿ ಪ್ರಶ್ನಿಸಿದರು.
ರಾಜ್ಯದಲ್ಲಿ ಲಿಂಗಾಯಿತ ಜನಸಂಖ್ಯೆ ಕೇವಲ 68 ಲಕ್ಷ
ರಾಜ್ಯದಲ್ಲಿ ಲಿಂಗಾಯತರು ಒಂದುವರೆ ಕೋಟಿ, ಒಕ್ಕಲಿಗರು ಒಂದು ಕೋಟಿ, ಉಪ್ಪಾರರು 30 ಲಕ್ಷ ಜನಸಂಖ್ಯೆ ಇದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು, ಲಿಂಗಾಯತರು ಕೇವಲ 67 ರಿಂದ 68 ಲಕ್ಷ ಇದ್ದಾರೆ, ಒಕ್ಕಲಿಗರು 48 ಲಕ್ಷ ಹಾಗು ಉಪ್ಪಾರರು 14 ಲಕ್ಷ ಇದ್ದಾರೆ. ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗಿಂತ ಮುಸ್ಲಿಂರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪುಟ್ಟರಂಗಶೆಟ್ಟಿ ಅವರು ಹೇಳಿದರು.
ಉಪ್ಪಾರ ಮತ್ತು ಅರಸು ಜನಾಂಗದ ಕುಲಶಾಸ್ತ್ರ ಅಧ್ಯಯನಕ್ಕೆ ನಾನು ಸಚಿವನಾಗಿದ್ದಾಗ ತಲಾ ನಾಲ್ಕುವರೆ ಲಕ್ಷ ರೂಪಾಯಿ ಅನುದಾನ ನೀಡಿದ್ದೆ. ಆ ಅಧ್ಯಯನದ ವರದಿ ಸಹ ಬಾಕಿ ಇದೆ ಎಂದ ಅವರು ಈ ಜನಾಂಗದವರು ಏನೇನು ಕುಸುಬು ಮಾಡುತ್ತಿದ್ದಾರೆ. ಅವರ ಆಚಾರ ವಿಚಾರಗಳೇನು? ಆರ್ಥಿಕ ಪರಿಸ್ಥಿತಿ ಹೇಗಿದೆ? ಅವಿದ್ಯಾವಂತರು ಎಷ್ಟಿದ್ದಾರೆ? ಎಂಬ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ