ಕಲಬುರ್ಗಿ(ಜ.31) : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿ ಮುಂದುವರೆದಿದೆ. ಯಡಿಯೂರಪ್ಪ ನಾಲ್ಕು ದಿನಗಳಿಂದ ಕಾದರೂ ಬಿಜೆಪಿ ನಾಯಕರು ಭೇಟಿಗೆ ಅವಕಾಶ ನೀಡದೇ ಇರೋದನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಅಪರೇಷನ್ ಕಮಲ ಹೇಗೆ ನಡೀತು ಅಂತ ಎಲ್ಲರಿಗೂ ಗೊತ್ತೇ ಇದೆ. ಶಾಸಕರನ್ನು ಖರೀದಿ ಮಾಡಿ, ಸರ್ಕಾರ ರಚನೆ ಮಾಡಲಾಗಿದೆ. ವಲಸಿಗರಿಗೆ ಸಚಿವ ಸ್ಥಾನ ಕೊಡುತ್ತಿರುವುದರಿಂದ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಸಚಿವ ಸಂಪುಟ ವಿಸ್ತರಣೆಯಾದ ಒಂದು ವಾರದಲ್ಲಿ ಅಸಮಾಧಾನ ಬಹಿರಂಗವಾಗುತ್ತೆ ಎಂದರು.
ಸಚಿವ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಭೇಟಿಗೆ ಸಿಎಂ ನಾಲ್ಕು ದಿನ ಕಾದ್ರು, ಹಿರಿಯ ನಾಯಕರ ಭೇಟಿಗಾಗಿ ಪರದಾಡುವಂತಾಗಿದೆ. ಯಡಿಯೂರಪ್ಪ ಪ್ರಬಲ ನಾಯಕ. ಆದರೆ, ಅವರಿಗೆ ಭೇಟಿಯ ಅವಕಾಶವನ್ನೇ ಹೈಕಮಾಂಡ್ ನೀಡುತ್ತಿಲ್ಲ. ಸಿಎಂ ಯಡಿಯೂರಪ್ಪ ಸ್ಥಿತಿ ನೋಡಿದ್ರೆ ಬೇಜಾರಾಗುತ್ತೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ಟರೇ ಬೇರೆ ನಡೀತಿಲ್ಲ. ಪೊಲೀಸ್ ಪೇದೆ ಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ವರ್ಗಾವಣೆಗೆ ಹಣವನ್ನು ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು. ಜನ ನೆರೆ ಮತ್ತು ಬರದಿಂದ ಸಂಕಷ್ಟಕ್ಕೆ ಗುರಿಯಾದರೂ ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಆಡಳಿತದಲ್ಲಿ ಕೇಸರೀಕರಣ ಮಾಡುವ ಹುನ್ನಾರ ನಡೀತಿದೆ. ಈಗಲಾದರೂ ಆಡಳಿತ ಯಂತ್ರ ಸರಿದಾರಿಗೆ ಬರಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ದೆಹಲಿ ಫೈರಿಂಗ್ ಘಟನೆಗೆ ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಕಾರಣ
ಪೌರತ್ವ ವಿರೋಧಿ ಹೋರಾಟ ನಿರತ ವಿದ್ಯಾರ್ಥಿ ಮೇಲೆ ಯುವಕ ಫೈರಿಂಗ್ ಮಾಡಿರೋ ಪ್ರಕರಣಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇದೇ ವೇಳೆ ಆರೋಪಿಸಿದ್ದಾರೆ. ದೆಹಲಿಯ ಘಟನೆ ದುರದೃಷ್ಟಕರ. ಅದಕ್ಕೆ ಕಾರಣರಾದವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯುವಕರನ್ನು ಬ್ರೈನ್ ವಾಶ್ ಮಾಡಿ, ಮತಾಂಧರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮೊದಲಾದ ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮವೇ ದೆಹಲಿಯ ಪ್ರಕರಣ. ಪಿಸ್ತೂಲ್ ಹಿಡಿದು ಹಾಡಹಗಲೇ ಪೊಲೀಸರ ಎದುರಲ್ಲಿಯೇ ಫೈರಿಂಗ್ ಮಾಡುತ್ತಾರೆ ಅಂದ್ರೆ ಅರ್ಥವೇನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ರೈತರ ಸುಸ್ತಿ ಸಾಲ ವಸೂಲಿಗೆ ಸರ್ಕಾರ ಆದೇಶ - ರೈತರನ್ನು ಮುಗಿಸಲು ಹೊರಟಿದೆ ಎಂದು ಖರ್ಗೆ ಆಕ್ರೋಶ
ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯೇ ದೆಹಲಿ ಘಟನೆಗೆ ನೇರ ಹೊಣೆ. ಬಿಜೆಪಿ ನಾಯಕರ ಪ್ರಚೋದನಾಕಾರಿ ಹೇಳಿಕೆಗಳು ಈ ರೀತಿಯ ಘಟನೆಗಳಿಗೆ ಕುಮ್ಮಕ್ಕಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ