ನವದೆಹಲಿ(ಫೆ.15): ಮಂತ್ರಿ ಸ್ಥಾನ ಪಡೆಯಲು ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ಪ್ರಯತ್ನ ಮುಂದುವರೆದಿದೆ. ಹೈಕಮಾಂಡ್ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರೆ. ಹೀಗಾಗಿ, ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಬಿಜೆಪಿ ಹೈಕಮಾಂಡಿನ ಪ್ರಭಾವಿ ನಾಯಕ ಭೂಪೇಂದ್ರ ಯಾದವ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಭೂಪೇಂದ್ರ ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇಂದು ಬೆಳಗ್ಗೆ ವಿಶ್ವನಾಥ್ ಅವರು ಭೂಪೇಂದ್ರ ಯಾದವ್ ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮೃತ ಧರ್ಮೇಗೌಡರ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ. ಸದ್ಯ ವಿಶ್ವನಾಥ್ ಅವರ ಹೆಸರು ಪರಿಷತ್ ಗೆ ನಾಮ ನಿರ್ದೇಶನವಾಗಿದೆ. ನಾಮ ನಿರ್ದೇಶನದ ಕಾರಣಕ್ಕೆ ಮಂತ್ರಿ ಸ್ಥಾನ ಆಗಲು ತಡೆಯಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ವಿಶ್ವನಾಥ್ ಆಯ್ಕೆಯಾಗಲೇಬೇಕು. ಅದಕ್ಕಾಗಿ ಧರ್ಮೇಗೌಡರ ಸಾವಿನಿಂದ ತೆರವಾಗಿರುವ ಸ್ಥಾನದ ಮೇಲೆ ವಿಶ್ವನಾಥ್ ಕಣ್ಣಿಟ್ಟಿದ್ದಾರೆ. ಹೀಗಾಗಿ ಧರ್ಮೇಗೌಡರ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಬಿಜೆಪಿ ಹೈಕಮಾಂಡ್ಗೆ ವಿಶ್ವನಾಥ್ ಒತ್ತಡ ಹಾಕುತ್ತಿದ್ದಾರೆ.
ಮಹಿಳೆಯ ಮೇಲೆ ಅತ್ಯಾಚಾರ ಆರೋಪ; ಸಾಮಾಜಿಕ ಕಾರ್ಯಕರ್ತನ ಬಂಧನ
ಇನ್ನು, ಫೆ. 17ರಂದು ವಿಶ್ವನಾಥ್ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಭೂಪೇಂದ್ರ ಯಾದವ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ವಿಶ್ವನಾಥ್, ನನ್ನನ್ನು ವಿಧಾನಸಭೆಯಿಂದ ಪರಿಷತ್ ಗೆ ಆಯ್ಕೆ ಮಾಡಬೇಕಿತ್ತು. ಆದರೆ ನನ್ನನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಿದರು. ಇದರಿಂದ ಸರ್ಕಾರದಲ್ಲಿ ಜವಾಬ್ದಾರಿ ಪಡೆಯಲು ತೊಡಕಾಗಿದೆ. ಈ ವ್ಯತ್ಯಾಸವನ್ನು ಸರಿಪಡಿಸುವಂತೆ ಮನವಿ ಮಾಡಿದ್ದೇನೆ ಇದೇ ಹಿನ್ನೆಲೆಯಲ್ಲಿ ಭೂಪೇಂದ್ರ ಯಾದವ್ ಭೇಟಿಯಾಗಿದ್ದೆ. ಮೃತ ಧರ್ಮೇಗೌಡರ ಅವಧಿ ಇನ್ನೂ ಮೂರೂವರೆ ವರ್ಷ ಇದೆ. ಆ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿ. ನನ್ನ ಪರಿಷತ್ ಅವಧಿ ಇನ್ನೂ ಐದೂವರೆ ವರ್ಷ ಇದೆ. ಅದನ್ನು ಬೇರೆ ಯಾರಿಗಾದರೂ ಕೊಡಿ ಎಂದು ಭೂಪೇಂದ್ರ ಯಾದವ್ ಮುಂದೆ ಮನವಿ ಮಾಡಿರುವುದಾಗಿ ತಿಳಿಸಿದರು.
ಇನ್ನು, ಮಂತ್ರಿ ಸ್ಥಾನ ಪಡೆಯಲು ಯತ್ನಿಸುತ್ತಿರುವ ಹೆಚ್. ವಿಶ್ವನಾಥ್ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಸರ್ಕಾರ ಬರುವುದರಲ್ಲಿ ನಿಮ್ಮ ಪಾತ್ರದ ಬಗ್ಗೆ ಗೊತ್ತಿದೆ. ಅಮಿತ್ ಶಾ ಹಾಗೂ ಬಿ.ಎಲ್. ಸಂತೋಷ್ ಜೊತೆ ಮಾತನಾಡುತ್ತೇನೆ. ನಿಮಗೆ ಆಗಿರುವ ವ್ಯತ್ಯಾಸವನ್ನು ಸರಿಪಡಿಸುತ್ತೇನೆ ಎಂದು ಭೂಪೇಂದ್ರ ಯಾದವ್ ಹೆಚ್.ವಿಶ್ವನಾಥ್ಗೆ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ನ್ಯೂಸ್ 18ಗೆ ಮಾಹಿತಿ ಲಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ