ಬೆಂಗಳೂರು(ಅ.07): ಸಿಬಿಐ ದಾಳಿ ನಂತರ ಮಾಜಿ ಸಚಿವ ಜಿಟಿ ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, ಡಿಕೆಶಿ ಕುಟುಂಬ ಮತ್ತು ಸ್ನೇಹಿತರು ಸೇರಿ ಒಟ್ಟು 14 ಸಿಬಿಐ ಕಡೆ ರೈಡ್ ಆಗಿತ್ತು. ಮಾಧ್ಯಮಗಳಲ್ಲಿ ರೈಡ್ ಆದ ಸುದ್ದಿ ನೋಡಿದೆ, ನಾನು ಮತ್ತು ಡಿಕೆಶಿ ಬಹಳ ವರ್ಷಗಳಿಂದ ಸ್ನೇಹಿತರು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದವರು. ಬಾಂಬೆಗೆ ಸಹ ಹೋಗಿದ್ದೆವು. ಚುನಾವಣೆ ಸಮಯದಲ್ಲಿ ರೈಡ್ ಮಾಡಬಾರದು. ರೈಡ್ ಮಾಡಿದ್ದು ತಪ್ಪು , ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಜಿಟಿ ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ಜೊತೆಗೆ ಡಿಕೆಶಿವಕುಮಾರ್ ಅವರ ಶ್ರೀಮತಿ ನಮ್ಮ ಮೈಸೂರಿನವರು. ರೈಡ್ ಆದ ಸಂದರ್ಭದಲ್ಲಿ ಭೇಟಿ ಮಾಡಿ ಧೈರ್ಯ ಹೇಳಬೇಕು. ಏಕೆಂದರೆ ಅವರು ನನ್ನ ಸ್ನೇಹಿತರು ಎಂದು ಹೇಳಿದರು.
ಜೆಡಿಎಸ್ ನಿಂದ ದೂರ ಉಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಜಿಟಿಡಿ, ಎಲ್ಲವೂ ನಿಮಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿರ್ಧಾರ ಮಾಡುವವರು ಚಾಮುಂಡೇಶ್ವರಿ ಕ್ಷೇತ್ರದ ಜನತೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ನೇಮಕ
ಮುಂದುವರೆದ ಅವರು, ನಾನು ಉಪ ಮುಖ್ಯಮಂತ್ರಿಯಾಗೋದಾಗಿದ್ರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು. ಮೊದಲೇ ನನಗೆ ಬಿಜೆಪಿಯಿಂದ ಆಫರ್ ಬಂದಿತ್ತು. ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೆವು. ಐದು ವರ್ಷ ಅವರೇ ಇರ್ಬೇಕು ಅಂತ ಬಯಸಿದ್ದೆವು. ನಾವೇ ಸಿಎಂ ಮಾಡಿ ನಾವೇ ಇಳಿಸೋಕೆ ಪ್ರಯತ್ನ ಮಾಡ್ತಿದ್ವಾ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂದು ಜಿಟಿ ದೇವೇಗೌಡರು ನನ್ನನ್ನು ಭೇಟಿಯಾಗಲು ಬಂದಿದ್ದರು. ಕಷ್ಟ ಕಾಲದಲ್ಲಿ ಇಂಥವರೆಲ್ಲಾ ನನ್ನ ಜೊತೆ ನಿಂತಿರೋದು ನನ್ನ ಭಾಗ್ಯ. ರಾಜಕಾರಣ ಬೇರೆ, ಸ್ನೇಹ-ವಿಶ್ವಾಸ ಬೇರೆ. ಜಿಟಿ ದೇವೇಗೌಡರು ನನ್ನ ಹಿತೈಶಿಗಳು. ನಾನು ನೋವಿನಲ್ಲಿದ್ದೇನೆ ಎಂಬುದನ್ನು ಅರಿತು ನನಗೆ ಸಾಂತ್ವನ ಹೇಳಲು ಬಂದಿದ್ದರು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ