ಬೆಂಗಳೂರು(ಅ.05): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮೊದಲು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಲಿ. ಅವರ ಇತಿಹಾಸ ತೆಗೆದರೆ ಅವರ ಸಂಸ್ಕೃತಿ ಏನೆಂದು ಗೊತ್ತಾಗಲಿದೆ. ಅವರು ಯಾವ ಪಕ್ಷದಿಂದ ಬೆಳೆದರೋ ಇವಾಗ ಅದಏ ಪಕ್ಷದ ಸರ್ವನಾಶದ ಬಗ್ಗೆ ಮಾತಾನಾಡ್ತಿದ್ದಾರೆ. ಇವತ್ತು ಕಾಂಗ್ರೆಸ್ ಸಿದ್ದರಾಮಯ್ಯನಿಂದಲೇ ಸರ್ವನಾಶವಾಗಲಿದೆ. ದೇಶದಲ್ಲಿ ಅಧಿಕಾರಕ್ಕೆ ಬರಲು ಯಾವ ಯಾವ ಪಕ್ಷಗಳ ಹೆಗಲು ಪಡೆದಿದ್ದೀರಿ..? ಈ ಬಗ್ಗೆ ನಾವು ಎಷ್ಟು ಉದಾಹರಣೆ ಕೊಡಬಹುದು. ಕರ್ನಾಟಕದಲ್ಲಿ ನಾನು ಯಾವತ್ತೂ ಯಾವುದೇ ಪಕ್ಷಕ್ಕೆ ಹೆಗಲು ಕೊಡಲು ಹೋಗಿಲ್ಲ. ಕಳೆದ ಚುನಾವಣೆಯಲ್ಲಿ ಅಡ್ಡಪಲ್ಲಕ್ಕಿ ತಂದವರು ನೀವು. ನಾವು ಆವತ್ತು ನಿಮ್ಮ ಅಡ್ಡಪಲ್ಲಕ್ಕಿ ಬೇಡ, ನಿಮ್ಮ ಅಡ್ಡಪಲ್ಲಕ್ಕಿಯನ್ನು ನಾವೇ ಹೊರುತ್ತೇವೆ ಎಂದು ಹೇಳಿದ್ದೆವು. ಕೊನೆಗೆ ನೀವೇ ಕುಳಿತುಕೊಳ್ಳಿ ಅಂತ ಅರ್ಧ ದಾರಿಯಲ್ಲಿ ಬೀದಿಗೆ ಬೀಳಿಸಿ ಹೋದ್ರಿ. ಈ ಪಕ್ಷದ ಬಗ್ಗೆ ನೀವು ಹಗುರವಾಗಿ ಮಾತನಾಡಬೇಡಿ ಎಂದು ಹರಿಹಾಯ್ದರು.
ಮುಂದುವರೆದ ಅವರು, ಶಿರಾ ಕ್ಷೇತ್ರದಲ್ಲಿ ನಾನು ಕಣ್ಣೀರು ಸುರಿಸಿಲ್ಲ. ಹಳ್ಳಿ ಭಾಷೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ. ನಾನು ಮಾಡಿರೋ ಒಳ್ಳೆ ಕೆಲಸಕ್ಕೆ ಹಾಲು ಕೊಡ್ತೀರೋ, ಅಥವಾ ವಿಷ ಕೊಡ್ರೀರೋ ಎಂಬುದನ್ನು ನಿರ್ಧಾರ ಮಾಡಿ ಎಂದಿದ್ದೇನೆ. ಆದರೆ ಇವರು ಅವರ ಅಪ್ಪನ ತರ ಕಣ್ಣೀರು ಸುರಿಸಿಕೊಂಡು ನಾಟಕ ಮಾಡಿದ್ರೆ ನಡೆಯೋಲ್ಲ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನ್ನು ಬಿ ಟೀಮ್ ಎಂದಿದ್ರಿ. ಇವಾಗ ಮತ್ತೆ ಅದೇ ಕೆಲಸವನ್ನು ಮಾಡ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜೇಶ್ಗೌಡ ಬಗ್ಗೆ ಕುಮಾರಸ್ವಾಮಿ ಬಾಂಬ್
ರಾಜೇಶ್ ಗೌಡನಿಗೂ ನಿಮ್ಮ ಪುತ್ರ ಯತೀಂದ್ರಗೂ ಏನು ಸಂಬಂಧ....? ಅವರಿಬ್ಬರೂ ಬ್ಯುಸಿನೆಸ್ ಪಾರ್ಟ್ನರ್ ಅಲ್ಲವೇ? ಆ ರಾಜೇಶ್ ಗೌಡ ಬಿಜೆಪಿಗೆ ನಿಮ್ಮ ಚಿತಾವಣೆಯಿಂದಲೇ ಹೋಗಿದ್ದಾನೆ. ಬಿಜೆಪಿಯ ಗೆಲುವಿಗೆ ಒಳಸಂಚು ಮಾಡಿರುವುದು ನೀವು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಗೋವಾ ಕಡಲತೀರದಲ್ಲಿ ಕಡಿಮೆ ಆಗಲಿವೆ ಷಾಕ್ಸ್ ಸಂಖ್ಯೆ; ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದ ಕೊರೋನಾ
ಕಳೆದ ಚುನಾವಣೆಯಲ್ಲಿ ಬಿ ಟೀಮ್ ಎಂದು ಮುಸ್ಲಿಂ ಮತ ವರ್ಗೀಕರಣ ಮಾಡಿದ್ರಿ. ಇವಾಗ್ಲೂ ನೀವು ಅದೇ ಕೆಲಸ ಮಾಡಲು ಹೊರಟಿದ್ದೀರಿ. ನಾನು ಎಂದೂ ಸಹ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನೂ ನಾನು ಒಂದೇ ಎಂದು ಕಾಣ್ತೇನೆ. ಈ ಚಿಲ್ಲರೆ ರಾಜಕಾರಣ ಬಿಟ್ಟು ನೇರವಾಗಿ ರಾಜಕಾರಣ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿರು. ಯಾವುದೇ ಜನಪ್ರತಿನಿಧಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಈ ಸಿಬಿಐ ದಾಳಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ನಾವು ಸರಿಯಾಗಿ ಕೆಲಸ ಮಾಡಿದ್ದರೆ ಯಾವುದೇ ರೀತಿಯ ತನಿಖೆಯನ್ನಾದರೂ ಎದುರಿಸಲು ಸಿದ್ಧ ಇರಬೇಕು. ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಕ್ಕೆ ಜಯ ದೊರಕಲಿದೆ. ಹೀಗಾಗಿ ಸತ್ಯ ಹೊರಗೆ ಬರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸಿಬಿಐ ದಾಳಿ ನಡೆದರೆ ಅದನ್ನು ರಾಜಕೀಯ ಪಿತೂರಿ ಅಂತಾನೇ ಹೇಳೋದು. ಈ ಕುರಿತು ತಕ್ಷಣ ಪ್ರತಿಕ್ರಿಯೆ ಕೊಡಲು ಆಗಲ್ಲ ಎಂದು ಹೇಳಿದರು.
ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು ಗೌರವ ಉಳಿಸುತ್ತವೆ ಎಂಬುದು ನನ್ನ ಅಭಿಪ್ರಾಯ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಯಾಕೆ ದಾಳಿ ಮಾಡಿದ್ವಿ ಎಂಬ ಸತ್ಯವನ್ನು ಸಿಬಿಐನವರು ಹೇಳಬೇಕು. ಇಲ್ಲ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರು ಅವರು ಏನು ಎಂದು ಸತ್ಯ ಹೇಳಬೇಕು. ಇದರ ಬಗ್ಗೆ ನಾನು ಚರ್ಚೆ ಮಾಡೋದು ಉಪಯೋಗವಿಲ್ಲ ಎಂದು ಹೇಳುವ ಮೂಲಕ ಸಿಬಿಐ ದಾಳಿಗೆ ಪರೋಕ್ಷ ಬೆಂಬಲ ಕೊಟ್ಟರು.
ಇದೇ ವೇಳೆ ಸಿರಾ ಹಾಗೂ ಆರ್ಆರ್ನಗರ ಕ್ಷೇತ್ರಗಳ ಚುನಾವಣೆ ಕುರಿತು ಮಾತನಾಡಿದ ಎಚ್ಡಿಕೆ, ಚುನಾವಣೆಯಲ್ಲಿ ಸೋಲು ಗೆಲುವು ಬೇರೆ. ನಾವು ಎರಡೂ ಕ್ಷೇತ್ರಗಳನ್ನು ನಡೆಸ್ತೇವೆ. ಪಕ್ಷ ಸೋತಾಗಲೂ ಎದೆ ಗುಂದಿಲ್ಲ. ಗೆದ್ದಾಗಲೂ ತಲೆ ತಿರುಗಿ ಹೋಗಿಲ್ಲ. ಜನರು ಮಧ್ಯೆ ಬದುಕಿ, ಕಾರ್ಯಕರ್ತರ ನಡುವೆ ಹೋರಾಟ ನಡೆಸ್ತೇವೆ. ನಾಳೆ ಎರಡು ಕ್ಷೇತ್ರಗಳ ಅಭ್ಯರ್ಥಿ ಟಿಕೆಟ್ ಫೈನಲ್ ಮಾಡ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ