ಹಾಸನ: ಪಶ್ಚಿಮ ಘಟ್ಟದ ಕಾಡಿಗೆ (Western Hill Forest) ತಗುಲಿದ ಆಕಸ್ಮಿಕ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಿಆರ್ಎಫ್ಓ, ಫಾರೆಸ್ಟ್ ಗಾರ್ಡ್ ಹಾಗೂ ಇಬ್ಬರು ವಾಚರ್ಗಳು ಸೇರಿ ಒಟ್ಟು ಆರು ಜನ ಗಂಭೀರವಾಗಿ ಗಾಯಗೊಂಡಿದ್ದರು. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಕಬ್ಬಿನೆಲೆ ಎಸ್ಟೇಟ್ (Kabbinele Estate, Hassan) ಸಮೀಪ ಘಟನೆ ನಡೆದಿತ್ತು. ಶೇ.80ರಷ್ಟು ಸುಟ್ಟಗಾಯಗಳಿಂದ ಗಾಯಗೊಂಡಿದ್ದ ಸುಂದರೇಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಿಆರ್ಎಫ್ಒ ಮಂಜುನಾಥ್, ಫಾರೆಸ್ಟರ್ ಸುಂದರೇಶ್ ಮತ್ತು ಅರಣ್ಯ ಇಲಾಖೆ ಆರ್ಆರ್ಟಿ ಸಿಬ್ಬಂದಿಗಳಾದ ತುಂಗೇಶ್ ಹಾಗೂ ಮಹೇಶ್ ಎಂಬುವರೇ ಗಾಯಾಳುಗಳಾಗಿದ್ದು ಮಂಜುನಾಥ್, ಸುಂದರೇಶ್ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಘಟನೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಷರಶಃ ಗಾಬರಿಗೊಂಡಿದ್ದು ತಮ್ಮ ಸಿಬ್ಬಂದಿ ನರಳಾಟ ಕಂಡು ಎಲ್ಲರ ಕಣ್ಣಾಲಿಗಳು ತೇವವಾದವು.
ಸಕಲೇಶಪುರ ತಾಲ್ಲೂಕಿನ, ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪದ ಪಶ್ಚಿಮಘಟ್ಟದ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಲು ಆರಂಭಿಸಿದೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬರುತ್ತಿದ್ದಂತೆ ಒಟ್ಟು ಆರು ಮಂದಿ ಸಿಬ್ಬಂದಿ ಸುಮಾರು ಏಳು ಕಿಮೀ ನಡೆದು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಇಬ್ಬರು
ಆ ವೇಳೆಗಾಗಲೇ ಕಾಳ್ಗಿಚ್ಚಿನ ಕೆನ್ನಾಲಗೆ ಬಿರುಗಾಳಿಗೆ ಧಗಧಗಿಸುತ್ತಿತ್ತು. ಅಮೂಲ್ಯ ಅರಣ್ಯ ಬೆಂಕಿಯಿಂದ ಸುಟ್ಟು ಹೋಗುವುದನ್ನು ತಪ್ಪಿಸಬೇಕೆಂದು ಆರು ಮಂದಿ ಮುಂದಾಗಿದ್ದಾರೆ. ಈ ಪೈಕಿ ನಾಲ್ವರಿಗೆ ಬೆಂಕಿ ತಗುಲಿ ಗಾಯಗಳಾಗಿದ್ದರೆ, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹಾಗೂ ಪೊಲೀಸರು ಸುಟ್ಟ ಗಾಯಗಳಿಂದ ನರಳುತ್ತಿದ್ದವರನ್ನು ಕಾಡಿನಿಂದ ಸುಮಾರು ಏಳು ಕಿಮೀ ದೂರ ಹೊತ್ತು ತಂದು, ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆ ತಂದರು.
ಗಾಯಾಳುಗಳು ಬೆಂಗಳೂರಿಗೆ ಶಿಫ್ಟ್
ಗಾಯಾಳುಗಳಲ್ಲಿ ಮಂಜುನಾಥ್ ಮತ್ತು ಸುಂದರೇಶ್ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತುಂಗೇಶ್ ಹಾಗೂ ಮಹೇಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್ ಸಮೀಪ ಕಾಳ್ಗಿಚ್ಚಿಗೆ ಗಾಯಗೊಂಡಿರುವ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಇರ್ವರ ಪೈಕಿ ಸುಂದರೇಶ್ ಮೃತರಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಮಂಜುನಾಥ್ ಮತ್ತು ಸುಂದ್ರೇಶ್ ಅವರನ್ನು ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಖುದ್ದು ಎಸ್ಪಿ ಹರಿರಾಂ ಶಂಕರ್ ಅವರೇ ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಉದಯ ಭಾಸ್ಕರ್ ಅವರೊಂದಿಗೆ ಮುಂದೆ ನಿಂತು ಝೀರೋ ಟ್ರಾಫಿಕ್ ಮಾಡಿ ಆಂಬ್ಯುಲೆನ್ಸ್ ಸಾಗಲು ಅನುವು ಮಾಡಿಕೊಟ್ಟರು.
ಮಾನವೀಯತೆ ಮೆರೆದ ಅಧಿಕಾರಿಗಳು
ಆಂಬ್ಯುಲೆನ್ಸ್ ಸಾಗುವ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಗಾಯಾಳುಗಳನ್ನು ಹೊತ್ತ ಆಂಬ್ಯುಲೆನ್ಸ್ ಸುಗಮವಾಗಿ ಸಾಗಲು ಗಮನ ಹರಿಸಿ ಎಂದು ಹೇಳಿದರು. ಇದಕ್ಕೂ ಮುನ್ನ ಝೀರೋ ಟ್ರಾಫಿಕ್ ಮೂಲಕ ಹಾಸನ ಜಿಲ್ಲೆಯ ಗಡಿ ದಾಟಿಸಲು ಎಸ್ಪಿ ಮತ್ತವರ ಅಧೀನ ಅಧಿಕಾರಿಗಳು ನೆರವಾಗುವ ಮೂಲಕ ಮಾನವೀಯತೆ ಮೆರೆದರು.
ಇದನ್ನೂ ಓದಿ: Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ
ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಎರಡು ಆಂಬ್ಯುಲೆನ್ಸ್ ಎಸ್ಕಾರ್ಟ್ ಪೈಲೆಟ್ ವ್ಯವಸ್ಥೆ ಮಾಡಿ ನಗರದಿಂದ ಕಳಿಸಿಕೊಟ್ಟರು. ಮತ್ತಿಬ್ಬರು ಗಾಯಾಳಾಗಳಾದ ತುಂಗೇಶ್ ಮತ್ತು ಗಂಗೇಶ್ ಹಾಸನದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯೂನಿಫಾರಂ ಬಿಚ್ಚಿ ಗಾಯಾಳುವಿಗೆ ಸುತ್ತಿದ ಸಿಬ್ಬಂದಿ
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಗಾಯಾಳುಗಳು ಸಿಬ್ಬಂದಿ ಕಣ್ಣೀರಿಡುತ್ತಲೇ ಆಸ್ಪತ್ರೆಗೆ ದೌಡಾಯಿಸಿದರು. ಸಕಲೇಶಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ತಮ್ಮ ಯೂನಿಫಾರಂ ಬಿಚ್ಚಿ ಗಾಯಾಳುವಿಗೆ ಸುತ್ತಿಕೊಂಡು ಕರೆದುಕೊಂಡು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ