ಕಾರವಾರ (ಮೇ. 12): ಅರಬ್ಬಿ ಸಮುದ್ರದಲ್ಲಿ ಮೇ 15ರಂದು ಭಾರೀ ದೊಡ್ಡ ಮಟ್ಟದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನಲೆ ಎರಡು ದಿನನಗಳ ಮುಂಚಿತವಾಗಿಯೇ ತೀರದ ಎಲ್ಲ ಮೀನುಗಾರರು ಮತ್ತು ಸಮುದ್ರ ದಂಡೆಯ ಜನರು ಎಚ್ಚರಿಕೆಯಿಂದ ಇರಲು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಕರಾವಳಿಯ ಮೀನುಗಾರರಲ್ಲಿ ನುಂಗಲಾರದ ತುತ್ತಾಗಿದೆ. ಒಂದೆಡೆ ಜೀವನವನ್ನ ಕಬ್ಬಿನ ಸಿಪ್ಪೆ ಅಗೆದು ತಿಂದ ಹಾಗೆ ತಿನ್ನುತ್ತಿರುವ ಕೊರೋನಾ ಮಹಾಮಾರಿ. ಈ ಸಂಕಷ್ಟದಲ್ಲಿಯೇ ಸರಕಾರದ ನಿಯಮದಂತೆ ಅಲ್ಲಿ ಇಲ್ಲಿ ಮೀನುಗಾರಿಕೆ ಮಾಡುತಿದ್ದ ಮೀನುಗಾರರಿಗೆ ಈಗ ಮತ್ತೆ ಪ್ರಕೃತಿ ವಿಕೋಪಗಳು ಬರಸಿಡಿಲಿನಂತೆ ಬಂದೆರಗುತ್ತಿದ್ದು, ಮೀನುಗಾರರ ಜೀವನ ದುಸ್ಥರವಾಗಿದೆ.
ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಮೇ 15ರಂದು ತಾರೀಖಿನಂದು ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉಂಟಾಗುವ ಹಿನ್ನಲೆಯಲ್ಲಿ ಇವತ್ತಿನಿಂದಲೇ ಮೀನುಗಾರಿಕೆ ಸ್ಥಗಿತ ಮಾಡಲು ಮೀನುಗಾರಿಕೆ ಇಲಾಖೆ ಮತ್ತು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸಮುದ್ರ ದಡದ ವ್ಯಾಪ್ತಿಯಲ್ಲೇ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ, ಮೀನುಗಾರರ ಪಾಲಿಗೆ ಇಂತ ಪ್ರಕೃತಿ ವಿಕೋಪಗಳು ಕಂಗಾಲು ಮಾಡಿದೆ. ಸರಕಾರ ಮೀನುಗಾರಿಕೆಗೆ ಹದಿನೈದು ದಿನಗಳ ಕಾಲ ಹೆಚ್ಚಿನ ಅವಧಿ ನೀಡಿತ್ತು. ಆದರೆ, ಕಾರ್ಮಿಕರ ಕೊರತೆ ಪ್ರಕೃತಿ ವಿಕೋಪಗಳು ಸರಕಾರ ಕೊಟ್ಟ ಅವಧಿಯನ್ನ ನುಂಗಿ ತೇಗುತ್ತಿದೆ.
ಕಳೆದ ವರ್ಷ ಮೀನುಗಾರಿಕಾ ಹಂಗಾಮು ಆರಂಭದಲ್ಲೇ ಪ್ರಕೃತಿ ವಿಕೋಪಕ್ಕೆ ಮೀನುಗಾರರ ಬದುಕು ದುಸ್ಥರವನ್ನಾಗಿಸಿತು ಕಳೆದ ವರ್ಷದ ಲಾಕ್ ಡೌನ್ ನಲ್ಲಿ ಅವಧಿಗೂ ಮುಂಚಿತವೇ ಮೀನುಗಾರರು ತಮ್ಮ ಮೀನುಗಾರಿಕೆಯನ್ನ ಸ್ಥಗಿತ ಗೊಳಿಸಿದ್ದರು. ಅದಾದ ಬಳಿಕ ಮತ್ತೆ ಜೂನ್ ತಿಂಗಳಲ್ಲಿ ಮೀನುಗಾರಿಕೆ ಹಂಗಾಮು ಆರಂಭವಾಗಿತ್ತು. ಈ ವೇಳೆ ಚಂಡ ಮಾರುತ ಮೀನುಗಾರರ ಆಸೆ ಮತ್ತು ಹೊಸ ಭರವಸೆ ಗೆ ಕೊಳ್ಳಿ ಇಟ್ಟಿತು. ಇದಾದ ಬಳಿಕ ಮಳೆಗಾಲದಲ್ಲಿ ಉಂಟಾದ ಭಾರೀ ಪ್ರವಾಹ ಮತ್ತ ಭಾರೀ ಆಘಾತ ನೀಡಿತು. ಹೀಗೆ ಹತ್ತು ಹಲವು ಸಮಸ್ಯೆ ಸಂಕಷ್ಟದಲ್ಲೆ ಕಾಲ ದೂಡಿದ ಮೀನುಗಾರರು ಕಳೆದ ಮಾರ್ಚ್ ತಿಂಗಳಿಂದ ಕೇವಲ ಸಾಂಪ್ರದಾಯಿಕ ಮೀನುಗಾರಿಕೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಆಳ ಸಮುದ್ರ ಮೀನುಗಾರಿಕೆ ಬಹುತೇಕ ಸ್ಥಗಿತವಾಗಿದೆ.
ಇದನ್ನು ಓದಿ: ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿ; 1 ಲಕ್ಷ ರೆಮ್ಡಿಸಿವರ್ ಔಷಧವನ್ನು ಕೇಂದ್ರಕ್ಕೆ ಮರಳಿಸಿದ ಕೇರಳ
ಈಗ ಮತ್ತೆ ಮೇ 15ಕ್ಕೆ ಭಾರೀ ಚಂಡಮಾರುತ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು ಸಾಂಪ್ರದಾಯಿಕ ಮೀನುಗಾರರ ಬದುಕಲ್ಲಿ ಮತ್ತೆ ಆಘಾತ ನೀಡಿದೆ. ಲಾಕ್ ಡೌನ್ ಇರುವಾಗ ಅಲ್ಲಿ ಇಲ್ಲಿ ಮೀನುಗಾರಿಕೆ ಮಾಡಿ ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತ್ತಿದ್ದರು. ಆದರೆ ಈಗ ಚಂಡಮಾರುತದ ಭಯಕ್ಕೆ ಮೀನುಗಾರಿಕೆ ಸ್ಥಗಿತವಾಗಲಿದೆ.
ಕೊರೋನಾ ಕ್ಕಿಂತ ಹೆಚ್ಚಿನ ಸಂಕಷ್ಟ ತಂದಿದ್ದು ಪ್ರಕೃತಿ ವಿಕೋಪ
ಕೊರೋನಾ ಕಳೆದ ವರ್ಷ ಹಾಗೂ ಈ ವರ್ಷ ಮೀನುಗಾರಿಕೆಗೆ ಭಾರೀ ಹೊಡೆತ ನೀಡಿದೆ. ಆದರೆ ಇದಕ್ಕಿಂತಲೂ ತಮಗೆ ಆಘಾತಕ್ಕೆ ದೂಡಿದ್ದು ಪ್ರಕೃತಿ ವಿಕೋಪ ಎನ್ನುತ್ತಿದ್ದಾರೆ ಮೀನುಗಾರರು. ಹಿಂದೆಂದು ಕಾಣದ ಪ್ರಕೃತಿ ವಿಕೋಪ ಈ ವರ್ಷ ಮೀನುಗಾರರ ಬಾಳಲ್ಲಿ ಚೆಲ್ಲಾಟವಾಡಿದೆ. ಈ ಹಿನ್ನಲೆಯಲ್ಲಿ ಜೀವನವೇ ಸಾಕು ಎನಿಸಿದೆ ಎನ್ನುತ್ತಾರೆ. ಬ್ಯಾಂಕ್ ಸಾಲ ಒಂದೆಡೆ ಇನ್ನೊಂದೆಡೆ ದುಡಿಮೆ ಇಲ್ಲ ಹೀಗಿರುವಾಗ ಮೀನುಗಾರಿಕೆ ಕಸುಬನ್ನೆ ಕೈ ಬಿಡಬೇಕಾದ ಸ್ಥಿತಿ ನಮಗೆ ಬಂದಿದೆ ಎಂದು ದುಖಃ ದಿಂದಲೇ ವಿವರಿಸುತ್ತಾರೆ ಜಿಲ್ಲಾ ಮೀನುಗಾರರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ