ಬೆಂಗಳೂರು: ರಾಜ್ಯಸಭೆ ಚುನಾವಣೆ (Rajya Sabha Election) ಅಖಾಡ ರಂಗೇರಿದೆ. ನಾಳೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ರಾಜ್ಯ ಚುನಾವಣಾ ಆಯೋಗ (State Election Commission) ಎಲ್ಲ ಸಿದ್ಧತೆ ಕೈಗೊಂಡಿದೆ. ವಿಧಾನಸೌಧದಲ್ಲಿ (Vidhanasoudha) ಕೊಠಡಿ ಸಂಖ್ಯೆ 106ರಲ್ಲಿ (Room No. 106) ಮತದಾನಕ್ಕೆ (Voting) ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಲ್ಲಿಯೇ ಮತ ಎಣಿಕೆಯೂ (Counting) ನಡೆಯಲಿದೆ. ಈ ನಿಟ್ಟಿನಲ್ಲಿ ಚುನಾವಣೆ ಸಂಬಂಧ ಅಧಿಕಾರಿಗಳು ಸಿದ್ಧತೆಯನ್ನು ಕೈಗೊಂಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸೂಚನಾ ಫಲಕಗಳನ್ನು ಕೊಠಡಿ ಒಳಗೂ ಹೊರಗೂ ಅಳವಡಿಸಲಾಗಿದೆ.
ಮತದಾನಕ್ಕೆ ಸಕಲ ಸಿದ್ಧತೆ
ಎರಡು ವೋಟಿಂಗ್ ಕಂಪಾರ್ಟ್ ಮೆಂಟ್, ಮತಪೆಟ್ಟಿಗೆ, ಮೂರು ಪಕ್ಷಗಳ ಅಧಿಕೃತ ಏಜೆಂಟರಿಗೆ ಪ್ರತ್ಯೇಕ ಕೌಂಟರ್ಗಳನ್ನು ಸಿದ್ಧ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ 5ರಿಂದ 6 ಗಂಟೆವರೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ.
ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ
ಚುನಾವಣೆ ಹಿನ್ನಲೆಯಲ್ಲಿ ನಾಳೆ ಒಂದು ದಿನದ ಮಟ್ಟಿಗೆ ವಿಧಾನಸೌಧದ ಒಳಗೆ ಸಚಿವರು, ಶಾಸಕರ ಗನ್ ಮ್ಯಾನ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸಚಿವರು, ಶಾಸಕರೊಂದಿಗೆ ಆಗಮಿಸುವ ಗನ್ ಮ್ಯಾನ್ ಮತ್ತು ಅವರ ಆಪ್ತ ಸಹಾಯಕರನ್ನು ನಿರ್ಬಂಧಿಸಿಲಾಗಿದೆ ಎಂದು ಆದೇಶಿಸಿದ್ದಾರೆ. ವಿಧಾನಸೌಧದ ಒಳಗೆ ಪ್ರವೇಶಿಸುವುದನ್ನು ನಿರ್ಭಂದಿಸುಲು ಕ್ರಮ ವಹಿಸುವಂತೆ ವಿಧಾನಸೌಧದ ಭದ್ರತೆಯ ಪೊಲೀಸರಿಗೆ ಸೂಚಿಸಿದ್ದಾರೆ.
ಚುನಾವಣಾ ಕಣದಲ್ಲಿ ಯಾರಿದ್ದಾರೆ?
ಈ ಬಾರಿ ರಾಜ್ಯದಿಂದ ನಾಲ್ವರು ಆಯ್ಕೆಯಾಗಲಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಿಂದ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್ ಹಾಗೂ ಕಾಂಗ್ರೆಸ್ನಿಂದ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್, ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ
ನಾಲ್ಕನೇ ಅಭ್ಯರ್ಥಿ ಗೆಲುವಿಗೆ ತೀವ್ರ ಪೈಪೋಟಿ
ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮೂರು ಪಕ್ಷಗಳಿಗೆ ಮತಗಳ ಕೊರತೆ ಎದುರಾಗಿರುವ ಕಾರಣ ಚುನಾವಣಾ ಕಣದಲ್ಲಿ ರೋಚಕತೆ ಹೆಚ್ಚಾಗಿದೆ. ನಾಲ್ಕನೇ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಏರ್ಪಟ್ಟಿದೆ.
ಯಾರಿಗೆ ಸುಲಭ ಗೆಲುವು?
ಮತಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಲೆಹರ್ ಸಿಂಗ್ ಗೆ ಗೆಲುವಿನ ಸಾಧ್ಯತೆ ಹೆಚ್ಚಿದ್ದರೆ, ಜೆಡಿಎಸ್ ನ ಕುಪ್ಪೇಂದ್ರ ರೆಡ್ಡಿ ಗೆಲುವು ಅಸಾಧ್ಯ ಎಂದು ಎನ್ನುವಂತಿಲ್ಲ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಕೂಡಾ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಪೈಪೋಟಿ ಇರುವುದು ನಾಲ್ಕನೇ ಸ್ಥಾನಕ್ಕಾಗಿ. ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೇವಲ 32 ಇದೆ. ಜೆಡಿಎಸ್ಗೆ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಯ ಅವಕಾಶ ಇರುವುದಿಲ್ಲ.
ಮತಗಳ ಲೆಕ್ಕಾಚಾರ ಹೇಗಿರುತ್ತದೆ?
ರಾಜ್ಯದಲ್ಲಿ ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದು ಮೊದಲ ಪ್ರಾಶಸ್ತ್ಯದ ಮತಗಳಾಗಿವೆ. ಈ ಬಾರಿ ಬಿಜೆಪಿ ಶಾಸಕರ ಬಲ 122 ಆಗಿದ್ದರೆ, ಕಾಂಗ್ರೆಸ್ ಶಾಸಕರ ಸಂಖ್ಯೆ 70 ಆಗಿದೆ. ಇನ್ನು ಜೆಡಿಎಸ್ ಶಾಸಕರ ಬಲ 32 ಇದೆ. ಹೀಗಾಗಿ ಬಿಜೆಪಿಯ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ಗೆ ತಲಾ 45 ಮೊದಲ ಪ್ರಾಶಸ್ತ್ಯದ ಮತಗಳು ಲಭ್ಯವಾಗಲಿದೆ. ಅದೇ ರೀತಿ ಕಾಂಗ್ರೆಸ್ನ ಜೈರಾಂ ರಮೇಶ್ಗೆ ಮೊದಲ ಪ್ರಾಶಸ್ತ್ಯದ 45 ಮತಗಳು ಸಿಗಲಿದ್ದು, ಈ ಮೂವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇದನ್ನೂ ಓದಿ: HDK v/s Siddaramaiah: ಸಿದ್ದರಾಮಯ್ಯ ಪತ್ರಕ್ಕೆ ಎಚ್ಡಿಕೆ ಕಿಡಿಕಿಡಿ, ನಿಮಗೆ ನಾಚಿಕೆ ಆಗ್ಬೇಕು ಅಂತ ವಾಗ್ದಾಳಿ!
57 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆ
ರಾಜ್ಯಸಭೆಯ 57 ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಆದರೆ, ಇದರಲ್ಲಿ 12 ರಾಜ್ಯದ 41 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿಯ 14 ಅಭ್ಯರ್ಥಿಗಳು ಸಹ ಸೇರಿಕೊಂಡಿದ್ದು, ಉಳಿದ 16 ಸ್ಥಾನಗಳಿಗೆ ಮಾತ್ರ ನಾಳೆ ಮತದಾನ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ