ನವದೆಹಲಿ: ನಾವೆಲ್ಲಾ ಒಂದೇ, ಸಾಮೂಹಿಕ ನಾಯಕತ್ವದಲ್ಲಿ (Collective Leadership) ಚುನಾವಣೆ (Election) ಎದುರಿಸುತ್ತೇವೆ ಎಂದೆಲ್ಲಾ ಹೇಳಿ 2023ರ ವಿಧಾನಸಭಾ ಚುನಾವಣೆ (2023 Assembly Election) ಗೆದ್ದಿರುವ ಕಾಂಗ್ರೆಸ್ (Congress) ಇದೀಗ ಮುಖ್ಯಮಂತ್ರಿ (Chief Minister) ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ವರ್ಷದ ಹಿಂದೆ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗುತ್ತಿತ್ತು. ಆದರೆ ಹಲವು ಕಾರ್ಯಕ್ರಮಗಳಲ್ಲಿ ಇವರಿಬ್ಬರು ತಮ್ಮ ನಡುವೆ ಯಾವುದೇ ಶೀತಲ ಸಮರ ಇಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದರು. ಆದರೆ ಈಗ ಸಿಎಂ ವಿಚಾರದಲ್ಲಿ ನಡೆಯುತ್ತಿರುವ ಗುದ್ದಾಟ ನೋಡಿದರೆ ಇಬ್ಬರ ನಡುವೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳು ಇದ್ದವು ಎನ್ನುವುದನ್ನು ಎತ್ತಿ ತೋರಿಸುತ್ತಿದೆ.
ಸಿಎಂ ಹುದ್ದೆ ಬೇಕೆ ಬೇಕು ಎಂದ ಡಿಕೆಶಿ
ರಾಜ್ಯ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಒಕ್ಕಲಿಗ ಮತಗಳನ್ನು ಸೆಳೆಯುವಲ್ಲಿ ಸಫಲರಾಗಿದ್ದರು. ಅಲ್ಲದೆ ಟಿಕೆಟ್ ನೀಡುವ ವಿಚಾರದಲ್ಲಿ ಹಾಗೂ ಪ್ರಚಾರ ಕಾರ್ಯಗಳಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಅದಕ್ಕಾಗಿಯೇ ತಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಹುದ್ದೆ ಬಿಟ್ಟು ಕೊಡುವ ಮಾತಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ನನ್ನ ಮರ್ಯಾದೆ ಪ್ರಶ್ನೆ ಎಂದ ಡಿಕೆ
ನಾನು ಪಕ್ಷಕ್ಕಾಗಿ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದೇನೆ. ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದ್ದೇನೆ. ನಾನು ಸಹಾಯ ಮಾಡದೇ ಹೋಗದಿದ್ದರೆ ನೂರು ಸೀಟು ಕೂಡ ಬರುತ್ತಿರಲಿಲ್ಲ ಎಂದು ಖರ್ಗೆ ಮುಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಪಟ್ಟ ಶ್ರಮಕ್ಕಾಗಿ ಸಿಎಂ ಹುದ್ದೆಯೇಬೇಕು. ಅದು ಇಲ್ಲ ಅಂದ್ರೆ ನನಗೆ ಏನು ಬೇಡ. ಎಲ್ಲವನ್ನೂ ಅವರಿಗೆ (ಸಿದ್ದರಾಮಯ್ಯ) ಕೊಡಿ. ಸಿಎಂ ಹುದ್ದೆ ಬಿಟ್ಟು ನನಗೇನು ಬೇಡ ಎಂದು ಖರ್ಗೆ ಬಳಿ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಬೇಡ ಎಂದು ಹೇಳಿ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಾಧ್ಯವೇ ಇಲ್ಲ! ಖರ್ಗೆ ಮುಂದೆ ಡಿಕೆಶಿ ಖಡಕ್ ಮಾತು
ಇದೇ ಸಂದರ್ಭದಲ್ಲಿ2009ರಿಂದ ಇಲ್ಲಿಯವರೆಗೆ ಪಕ್ಷ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಮಾಡಿರುವ ತಪ್ಪುಗಳನ್ನು ಲಿಖಿತ ರೂಪದಲ್ಲಿ ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೀಡಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯ 5 ವರ್ಷ ಸಿಎಂ ಹುದ್ದೆ ಅನುಭವಿಸಿರುವ ವಿವರಣೆಯೂ ಇದೆ. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ ಎಂದು ತಿಳಿಸಿದ್ದು, ತಾವೂ ಯಾವ ಕಾರಣಕ್ಕೂ ಸಿಎಂ ಹುದ್ದೆ ವಿಚಾರದಲ್ಲಿ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗಬೇಕು!
ಶಾಸಕರ ಅಭಿಪ್ರಾಯ ಏನೇ ಇರಲಿ, ಕೆಪಿಸಿಸಿ ಅಧ್ಯಕ್ಷರಾದ ವೇಳೆ ಅವರ ಸಾರಥ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅವರನ್ನೇ ಸಿಎಂ ಮಾಡುವುದು ಕಾಂಗ್ರೆಸ್ ಸಂಪ್ರದಾಯ ಎಂದಿದ್ದಾರೆ. ಎಸ್.ಎಂ. ಕೃಷ್ದ ಕೆಪಿಸಿಸಿ ಅಧ್ಯಕ್ಷರಾದ ವೇಳೆ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ಇದೇ ಮಾದರಿಯನ್ನು ಇಲ್ಲಿಯೂ ಅನುಸರಿಸುವಂತೆ ಡಿಕೆಶಿ ಒತ್ತಡ ಹೇರಿದ್ದಾರೆ ಎಂದಿದ್ದಾರೆ.
ಒಂದು ವೇಳೆ ರಾಜ್ಯದಲ್ಲಿ ದಲಿತ ಸಿಎಂ ಮಾಡುವುದಾದರೆ ನೀವು ಮುಖ್ಯಮಂತ್ರಿ ಆಗಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ನನ್ನ ಸಂಪೂರ್ಣ ಬೆಂಬಲ ನಿಮಗೆ ಇರಲಿದೆ. ನಿಮಗಾಗಿ ನಾನು ತ್ಯಾಗ ಮಾಡುತ್ತೇನೆ ಎಂದು ಖರ್ಗೆಗೆ ಸಿಎಂ ಆಸೆ ಹುಟ್ಟಿಸುವ ಮೂಲಕ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ